

ಸರಕಾರ ರಿಜರ್ವ್ ಬ್ಯಾಂಕಿನ ಮುಖ್ಯಸ್ಥರನ್ನು ನೇಮಕ ಮಾಡುತ್ತದೆ. ದೇಶದ ಹಿತದೃಷ್ಟಿಯನ್ನಿಟ್ಟು ಬ್ಯಾಂಕಿನ ಮುಖ್ಯಸ್ಥರು ಸ್ವತಂತ್ರವಾಗಿ ತಮ್ಮ ನೀತಿಗಳನ್ನು ರೂಪಿಸಬಹುದು. ಇಲ್ಲಿನ ಮುಖ್ಯಸ್ಥರಿಗೆ ಸರಕಾರದೊಳಗೆ ಕೆಲಸ ಮಾಡುವಾಗ ಸಿಗದ ಸ್ವಾತಂತ್ರ ದೊರೆಯುತ್ತದೆ. ಹಿಂದಿನ ಮುಖ್ಯಸ್ಥರಾಗಿದ್ದ ವೇಣುಗೋಪಾಲ ರೆಡ್ಡಿ ಹಾಗೂ ಸುಬ್ಬಾರಾವು ತಮ್ಮ ದಕ್ಷತೆಯನ್ನಲ್ಲದೇ ಸ್ವತಂತ್ರ ಆಲೋಚನೆಯನ್ನೂ – ಕಾರ್ಯವಿಧಾನವನ್ನೂ ಪ್ರದರ್ಶಿಸಿದ್ದನ್ನು ನಾವು ಕಂಡಿದ್ದೇವೆ. ಅಷ್ಟೇ ಅಲ್ಲ, ಅವರಿಬ್ಬರೂ ಅಧಿಕಾರದಲ್ಲಿದ್ದದ್ದರಿಂದ ದೇಶದ ಅರ್ಥವ್ಯವಸ್ಥೆಗೆ ಒಳಿತೇ ಆಗಿದೆ.

ಇದು ಹೀಗೇಕೆ? ಕೇಂದ್ರ ಸರಕಾರದ್ದು ದ್ವಿಮುಖ ಆರ್ಥಿಕನೀತಿ. ಒಂದೆಡೆ ಮನಮೋಹನ ಸಿಂಗ್, ಮಾಂಟೆಕ್ ಸಿಂಗ್, ಚಿದಂಬರಂ ಗಳ ಮಾರುಕಟ್ಟೆಯ ಸೂತ್ರಗಳು, ಅದರ ಆಧಾರದ ಮೇಲೆ ರೂಪಿಸುತ್ತಿರುವ ಖಾಸಗೀಕರಣ, ಅಂತರರಾಷ್ಟ್ರೀಕರಣದ ನೀತಿಗಳಿಗನುಸಾರವಾಗಿ ಭಾರತಕ್ಕೆ ವಿದೇಶೀ ಹೂಡಿಕೆಯನ್ನು ಆಕರ್ಷಿಸುವ ಪ್ರಯತ್ನದಲ್ಲಿದ್ದರೆ, ಇನ್ನೊಂದೆಡೆ ಸೋನಿಯಾ-ರಾಹುಲ್ ದ್ವಯರ ಸಾಮಾಜಿಕ ಭದ್ರತೆ, ಆಹಾರ ಭದ್ರತೆ, ಗ್ರಾಮೀಣ ಉಪಾಧಿ, ಆರ್ಥಿಕ ಒಳಗಳ್ಳುವಿಕೆಯಂತಹ ಮಾರುಕಟ್ಟೆಯ ಸೂತ್ರಗಳಾಚೆ ನಿಲ್ಲುವ ಕಾರ್ಯಕ್ರಮಗಳಿವೆ.
ಉದ್ಯಮ ಬೆಳೆಯಲು, ಹೂಡಿಕೆ ದೇಶದೊಳಕ್ಕೆ ಬರಲು ಆರ್ಥಿಕ ನೀತಿಯು ಉದಾರೀಕರಣದತ್ತ ವಾಲಬೇಕು. ಸುಲಭ ಬಡ್ಡಿದರದಲ್ಲಿ ಸಾಲವು ಲಭ್ಯವಾಗಬೇಕು. ಸರಳವಾದ ತೆರಿಗೆಯ ನೀತಿ ಬೇಕು. ಅಂತರರಾಷ್ಟ್ರೀಯ ಹಣಕಾಸು ವಿನಿಮಯ ಸರಳವಾಗಿರಬೇಕು. ಅದೇ ಕಾಲಕ್ಕೆ ಖರ್ಚನ್ನು ನಿಭಾಯಿಸಲು ಆರ್ಥಿಕ ಶಿಸ್ತೂ ಬೇಕು. ನಾವು ನಮ್ಮನ್ನು ಮಾರುಕಟ್ಟೆಗೆ ತೆರೆದುಕೊಂಡಷ್ಟೇ ವೇಗದಲ್ಲಿ ಆರ್ಥಿಕ ಪ್ರಗತಿಯಾಗುತ್ತದೆನ್ನುವುದರಲ್ಲಿ ಹುರುಳಿದೆ. ಆದರೆ ಮಾರುಕಟ್ಟೆಗೆ ನಮ್ಮನ್ನು ನಾವು ತೆರೆದುಕೊಂಡಷ್ಟೂ, ವ್ಯಾಪಾರೀ ಜಗತ್ತಿನ ಸಹಜ ಏರುಪೇರುಗಳಿಗೂ ನಮ್ಮನ್ನು ಒಡ್ಡಿಕೊಳ್ಳುತ್ತೇವೆ. ನಮ್ಮ ಬಾಗಿಲನ್ನು ನಾವು ತೆರೆದಿಟ್ಟಾಗ ಎಷ್ಟು ಸಹಜವಾಗಿ ವಿದೇಶೀ ಹೂಡಿಕೆಯು ಒಳಬರುವುದೋ ಹಾಗೆಯೇ ಸಂಕಷ್ಟಕಾಲದಲ್ಲಿ ಅದೇ ಬಾಗಿಲಿನಿಂದ ವಿದೇಶೀ ಹೂಡಿಕೆ ಪಲಾಯನ ಮಾಡುತ್ತದೆ. ಹೀಗಾಗಿಯೇ ನಮ್ಮ ಆರ್ಥಿಕ ಸ್ಥಿರತೆಯನ್ನು ಗಮನಿಸದೇ ಮಾರುಕಟ್ಟೀಕರಣದತ್ತ ಓಡುವುದು ಅಪಾಯದ ಕಡೆಗಿನ ಓಟವಾಗುತ್ತದೆ.
ಸುಬ್ಬಾರಾವು ತಮ್ಮ ಅಧಿಕಾರಾವಧಿಯಲ್ಲಿ, ಉತ್ಪಾದಕತೆ ಕುಂಠಿತವಾಗುತ್ತಿರುವ, ಹಣದುಬ್ಬರದ ಕಷ್ಟದ ಸ್ಥಿತಿಯಲ್ಲಿ ಸ್ಥಿರತೆಯತ್ತ ವಾಲಿ ಸರಕಾರದ ಯೋಜನೆಗಳಿಗೆ ಮುಳ್ಳಾಗಿ ನಿಂತರು. ಸುಬ್ಬಾರಾವು ಉದಾರವಾದಿಯಾಗಿದ್ದರೆ ಇಂದಿನ ಸಂಕಷ್ಟ ಕಡಿಮೆಯಾಗುತ್ತಿತ್ತೆನ್ನುವುದಕ್ಕೆ ಸೂಚನೆಗಳಿಲ್ಲ. ಸರಕಾರದ ಅರ್ಥ ನೀತಿ ಸರಿಯಾಗಿದ್ದರೆ ರಿಜರ್ವ್ ಬ್ಯಾಂಕಿನ ಮಡಿವಂತಿಕೆ ಉದ್ಯಮ-ಉತ್ಪಾದಕತೆಯ ಮೇಲೆ ಗಾಢವಾದ ಪರಿಣಾಮವನ್ನು ಬೀರಲು ಸಾಧ್ಯವಿಲ್ಲ. ರೆಡ್ಡಿಯವರ ಕಾರ್ಯಕಾಲದಲ್ಲಿ ಅವರ ಮಡಿವಂತಿಕೆ ದೇಶದ ಆರ್ಥಿಕ ಪ್ರಗತಿಯನ್ನೇನೂ ಕುಂಠಿತಗೊಳಿಸಿರಲಿಲ್ಲ.
ರೆಡ್ಡಿಯವರಾಗಲೀ ಸುಬ್ಬಾರಾವಾಗಲೀ ಶುದ್ಧ ಅರ್ಥಶಾಸ್ತ್ರಜ್ಞರಲ್ಲ. ಇಬ್ಬರಿಗೂ ಅರ್ಥಶಾಸ್ತ್ರದ ಒಳ್ಳೆಯ ಅರಿವಿತ್ತಾದರೂ ಇಬ್ಬರೂ ಆಡಳಿತ ಸೇವೆಯಿಂದ ಬಂದವರು. ಜಿಲ್ಲೆಯ ಮಟ್ಟದಲ್ಲಿ ಕೆಲಸಮಾಡಿದವರು. ಸರಕಾರದ ಕಾರ್ಯವೈಖರಿಯನ್ನರಿತವರು. ಬಡವರನ್ನೂ ಅವರ ಕಷ್ಟಗಳನ್ನೂ ಕಂಡವರು. ಆರ್ಥಿಕ ಪ್ರಪಂಚಕ್ಕಿಂತ ದೊಡ್ಡ ಕ್ಯಾನ್ವಾಸಿನಲ್ಲಿ ಕೆಲಸ ಮಾಡಿದವರು. ಇವರು ರಿಜರ್ವ್ ಬ್ಯಾಂಕಿನಂತಹ ಸಂಸ್ಥೆಯ ಅಧಿಕಾರವನ್ನು ಅಲಂಕರಿಸಿದಾಗ ಅವರಿಗೆ ಮಾರುಕಟ್ಟೆ- ಶುದ್ಧ ಅರ್ಥನೀತಿಗಿಂತ ಮಿಗಿಲಾದ ವಿಚಾರಗಳು ಕಾಣುತ್ತವೆ. ಸುಬ್ಬಾರಾವು ಅವರ ಅಧಿಕಾರಾವಧಿಯಲ್ಲಿ ಪಾರದರ್ಶಕತೆಯನ್ನು – ಬಡವರ ಬಗೆಗಿನ ಒಂದು ಕಾಳಜಿಯನ್ನೂ ರಿಜರ್ವ್ ಬ್ಯಾಂಕಿನ ಕಾರ್ಯವೈಖರಿಯಲ್ಲಿ ತಂದರು.

ಗ್ರಾಮೀಣ ಪ್ರದೇಶದವರಿಗೆ ಹಾಗೂ ಬಡವರಿಗೆ ಬ್ಯಾಂಕಿಂಗ್ ಸೌಲಭ್ಯ ಒದಗಿಸಲು ಸುಬ್ಬಾರಾವು ಅನೇಕ ಕ್ರಮಗಳನ್ನು ಕೈಗೊಂಡರು. ಅದರಲ್ಲಿ ಮೊದಲ ಕ್ರಮವಾಗಿ 2,000 ಜನಸಂಖ್ಯೆಯುಳ್ಳ ಪ್ರತೀ ಹಳ್ಳಿಯನ್ನೂ ಒಂದು ಬ್ಯಾಂಕಿಗೆ ಸೇರಿಸಿ ಆ ಹಳ್ಳಿಗೆ ಬ್ಯಾಂಕಿಂಗ್ ಸೌಲಭ್ಯವನ್ನು ಒದಗಿಸುವ ಮೂಲಭೂತ ಜವಾಬ್ದಾರಿಯನ್ನು, ಅದನ್ನು ಸಾಧಿಸಲು ಪ್ರತೀ ಬ್ಯಾಂಕೂ ಮೂರು ವರ್ಷಗಳ ಒಂದು ಯೋಜನೆಯನ್ನು ತಯಾರಿಸಬೇಕೆಂದು ನಿರ್ದೇಶಿಸಿ ಆ ಕೆಲಸದ ಪರಾಮರ್ಶೆಯನ್ನು ಕೈಗೊಂಡರು. ರಿಜರ್ವ್ ಬ್ಯಾಂಕಿನ ವತಿಯಿಂದ ಗ್ರಾಮಭೇಟಿ-ಔಟ್ರೀಚ್ ಕಾರ್ಯಕ್ರಮಗಳನ್ನು ಕೈಗೊಂಡರು. ಸುಬ್ಬಾರಾವು ಉದಾರ-ಮಾರುಕಟ್ಟೆವಾದಿಯಾಗಿದ್ದರೆ ದೇಶದ ಆರ್ಥಿಕ ವಲಯ ಹೇಗಿರಬಹುದಿತ್ತು ಎನ್ನುವುದು ಊಹೆಯ ಮಾತು. ಅವರು ಆ ಹುದ್ದೆಯಲ್ಲಿದ್ದದ್ದರಿಂದ ದೇಶದ ಆರ್ಥಿಕ ವಲಯಕ್ಕೆ ಒಂದು ಸ್ಥಿರತೆ ಮತ್ತು ಈಗಿನ ಕಷ್ಟದ ಪರಿಸ್ಥಿತಿಯನ್ನೆದುರಿಸುವ ದಕ್ಷತೆಯನ್ನು ಬಂದಿತು. ಉದಾರೀಕರಣದ ಭರಾಟೆಯಲ್ಲಿ ಸ್ಥಳೀಯತೆಗೆ ಬೇಕಿದ್ದ ರಕ್ಷಾಕವಚವನ್ನು ಅವರೆಂದೂ ಮರೆಯಲಿಲ್ಲ.
ಆದರೀಗ ರಿಜರ್ವ್ ಬ್ಯಾಂಕಿನ ನಾಯಕತ್ವದಲ್ಲಿ ಕೆಲವು ಮೂಲಭೂತ ಬದಲಾವಣೆಗಳಾಗುತ್ತಿವೆ. ಮಡಿವಂತಿಕೆಯಿಂದ ಅದು ಮಾರುಕಟ್ಟೆಯೆಡೆಗೆ ಹಂತ ಹಂತವಾಗಿ ಪಯಣ ಬೆಳೆಸುತ್ತಿದೆ ಅನ್ನಿಸುತ್ತಿದೆ. ಮೊದಲಿಗೆ ಡೆಪ್ಯೂಟಿ ಗವರ್ನರ್ (ಡಿ.ಜಿ) ಆಗಿದ್ದ ಅರ್ಥಶಾಸ್ತ್ರಜ್ಞ ಸುಬೀರ್ ಗೋಕರ್ಣ್ ಅವರ ಅಧಿಕಾರಾವಧಿ ಮುಗಿದಾಗ ಅದನ್ನು ವಿನಾಕಾರಣ ಸರಕಾರ ಮುಂದುವರೆಸಲಿಲ್ಲ. ಗೋಕರ್ಣ್ ಅವರ ಮುಂದುವರಿಕೆಯ ಪರವಾಗಿ ಸುಬ್ಬಾರಾವು ವಾದಿಸಿ ಸೋತರು. (ಹಿಂದೆ ಉಷಾ ತೋರಟ್ ಅವರಿಗೂ ಇದೇ ಗತಿಯಾಗಿತ್ತು). ಬದಲಿಗೆ ಆ ಜಾಗಕ್ಕೆ ಊರ್ಜಿತ್ ಪಟೇಲ್ ಎನ್ನುವ ಅರ್ಥಶಾಸ್ತ್ರಜ್ಞರನ್ನು ಸರಕಾರ ನೇಮಿಸಿತು. ಸಾಧಾರಣವಾಗಿ ಅರ್ಥಶಾಸ್ತ್ರಜ್ಞ ಡಿಜಿ ಹುದ್ದೆಗೆ ವಿದ್ಯಾಕ್ಷೇತ್ರದಿಂದ ಅಥವಾ ಸರಕಾರಿ ಕ್ಷೇತ್ರದಿಂದ ಬಂದವರನ್ನು ನೇಮಿಸುವುದೇ ರೂಢಿಯಾಗಿತ್ತು (ರಂಗರಾಜನ್, ರೆಡ್ಡಿ, ರಾಕೇಶ್ ಮೋಹನ್, ಎಲ್ಲರೂ ವಿದ್ಯಾ-ಸರಕಾರಿ ಕ್ಷೇತ್ರದಿಂದ ಬಂದವರೇ). ಗೋಕರ್ಣ್ ಮೂಲಭೂತವಾಗಿ ಸಂಶೋಧಕರೂ-ಪ್ರಾಧ್ಯಾಪಕರೂ ಆಗಿದ್ದರಾದರೂ ರಿಜರ್ವ್ ಬ್ಯಾಂಕ್ ಸೇರುವುದಕ್ಕೆ ಮೊದಲು ಖಾಸಗೀ ಕ್ಷೇತ್ರದ ಕ್ರಿಸಿಲ್-ಎಸ್ಅಂಡ್ ಪಿ ಸಂಸ್ಥೆಯಲ್ಲಿ ಅರ್ಥಶಾಸ್ತ್ರಜ್ಞರಾಗಿ ದುಡಿಯುತ್ತಿದ್ದರು. ಕ್ರಿಸಿಲ್ ಮೂಲತಃ ಉದ್ಯಮದ ಕ್ಷಮತೆಯನ್ನು ಅಳೆಯುವ-ಅರ್ಥಮಾಡಿಕೊಂಡು ಮೌಲ್ಯಮಾಪನ ಮಾಡುವ ಸಂಸ್ಥೆ. ಅದಕ್ಕೆ ಮಿಕ್ಕ ಉದ್ಯಮಗಳಂತೆ ಯಾವ ಖಾಸಗೀ ಆಸಕ್ತಿಗಳೂ ಇಲ್ಲ. ಆದರೆ ಊರ್ಜಿತ್ ಪಟೇಲ್ ಹಿಂದೆ ರಿಲಯನ್ಸ್ ಸಂಸ್ಥೆಯಲ್ಲಿ ಕೆಲಸಮಾಡಿದವರು. ನಂತರ ಅಂತರರಾಷ್ಟ್ರೀಯ ಸಲಹಾ ಸಂಸ್ಥೆಯಾದ ಬಿಸಿಜಿಯಲ್ಲಿ ದುಡಿದವರು. ಅವರಲ್ಲಿ ಸಹಜವಾಗಿ ಖಾಸಗೀ ಕ್ಷೇತ್ರದ ಹಿನ್ನೆಲೆಯೂ - ಆಲೋಚನಾ ಕ್ರಮವೂ ಇದೆ. ಈಗ ಸುಬ್ಬಾರಾವು ಜಾಗಕ್ಕೆ ನೇಮಕಗೊಳ್ಳಲಿರುವವರು ಅರ್ಥಶಾಸ್ತ್ರಜ್ಞರಾದ ರಘುರಾಮ್ ರಾಜನ್. ರಾಜನ್ ವಿದ್ಯಾಕ್ಷೇತ್ರದಿಂದ ಬಂದವರಾದರೂ ಉದಾರೀಕರಣದ ಪ್ರತಿಪಾದಕರಾಗಿದ್ದಾರೆ. ಅವರು ಜಗದ್ವಿಖ್ಯಾತ ಶಿಕಾಗೋ ಸ್ಕೂಲಿಗೆ ಸೇರಿದವರು. ಶಿಕಾಗೋ ಸ್ಕೂಲೆಂದರೆ ಉದಾರೀಕರಣ ಮಾರುಕಟ್ಟೀಕರಣವನ್ನು ಪ್ರತಿಪಾದಿಸುವ ಮನೋಭಾವದವರು ಎಂದು ವಿಧಿತವಾಗಿದೆ.

ಮಂಗಳವಾರ, 27 ಆಗಸ್ಟ್ 2013
No comments:
Post a Comment