
ಯಾವುದೇ ವಸ್ತುವಿನ ಮಾರಾಟದರವನ್ನು ನಿಯಂತ್ರಿಸಿದಾಗ ಅದರ ಅಂತಿಮ ಪರಿಣಾಮ ಬೀರುವುದು
ಉತ್ಪಾದಕರ ಮೇಲೆಯೇ. ಹೀಗಾಗಿ ರೂಪಾಯಿಗೊಂದು ಕಿಲೋ ಅಕ್ಕಿ ಬಡವರ ಪರವಾದರೂ ಅದಕ್ಕಾಗುವ
ವೆಚ್ಚವನ್ನು ಕಡಿಮೆ ಮಾಡಲು ಅತ್ಯಂತ ಕಡಿಮೆ ದರದಲ್ಲಿ ಅಕ್ಕಿಯನ್ನು ಖರೀದಿಸುವ ಸರಕಾರದ
ಪ್ರಯತ್ನದಲ್ಲಿಯೇ ರೈತರಿಗೆ ತಮ್ಮ ಬತ್ತಕ್ಕೆ ಮುಕ್ತಮಾರುಕಟ್ಟೆಯಿಂದ ಬರುಬಹುದಾಗಿದ್ದ ದರ
ಬರದಂತಾಗುತ್ತದೆ. ಇದಕ್ಕೆ ಸಿದ್ಧರಾಮಯ್ಯನವರು ರಾಷ್ಟ್ರಮಟ್ಟದಲ್ಲಿರುವ ಕೃಷಿಉತ್ಪನ್ನ ಖರ್ಚು
ಬೆಲೆಯ ಸಮಿತಿಯ ರೀತಿಯಲ್ಲಿಯೇ ರಾಜ್ಯದಲ್ಲಿಯೂ ಒಂದು ಸಮಿತಿಯನ್ನ ಏರ್ಪಾಟು ಮಾಡಿ ಖರೀದಿ ದರವನ್ನು
ನಿರ್ಧರಿಸುವುದಾಗಿ ಹೇಳಿದ್ದಾರಾದರೂ ಈ ಸಮಿತಿ ರೈತರ ಖರ್ಚಿನ ಆಧಾರದ ಮೇಲೆ ದರವನ್ನು
ನಿರ್ಧರಿಸುತ್ತದೆಯೇ ಹೊರತು ಮಾರುಕಟ್ಟೆಯಲ್ಲಿ ಪಡೆಯಬಹುದಾದ ಬೆಲೆಯನ್ನು ಮೂಲಬಿಂದುವನ್ನಾಗಿ
ಇಟ್ಟುಕೊಳ್ಳುವುದಿಲ್ಲ. ಹೀಗಾಗಿಯೇ ಇದು ಕನಿಷ್ಟ ದರವಾಗುತ್ತದೆ, ಹಾಗೂ ಸರಕಾರವೇ ಅತೀ ದೊಡ್ಡ
ಗ್ರಾಹಕರಾದಾಗ, ರೈತರಿಗೆ ದೊರೆಯಬಹುದಾದ ಗರಿಷ್ಟ ದರವೂ ಕನಿಷ್ಟವೇ ಆಗಿಬಿಡುತ್ತದೆ. ಈ
ಸೂತ್ರವನ್ನು ಇನ್ಫೋಸಿಸ್ ನ ನಾರಾಯಣ ಮೂರ್ತಿಗಳಿಗೆ ತಿಳಿಯಹೇಳಿ ಅವರ ಸಾಫ್ಟ್ ವೇರ್ ಧಂಧೆಯನ್ನು ಈ
ಸೂತ್ರದ ಮೇಲೆ ನಡೆಸಲು ಸಾಧ್ಯವೋ ಕೇಳಿನೋಡಿದಾಗ ಮೂರ್ತಿಯವರು ಪ್ರತಿಕ್ರಿಯೆ, ಇದು ಎಷ್ಟು
ಉತ್ಪಾದಕನ (ರೈತನ) ವಿರೋಧಿ ಸೂತ್ರವೆಂದು ನಿರೂಪಿಸುತ್ತದೆ.
ಸಿದ್ಧರಾಮಯ್ಯನವರ ಘೋಷಣೆಗಳನ್ನು ದೀರ್ಘಕಾಲದ ದೃಷ್ಟಿಯಿಂದ ಸಂಸ್ಥಾಗತ ಚೌಕಟ್ಟಿನಲ್ಲಿಟ್ಟು
ನೋಡಬೇಕು. ಆ
ಘೋಷಣೆಗಳನ್ನು ಪರೀಕ್ಷಿಸುವ ಮುನ್ನ ದೇಶದ ಮೂಲ ರೈತವಿರೋಧಿಯಾಗಿದ್ದ ದೇವೀಲಾಲರನ್ನು
ಆವಾಹಿಸೋಣ. ದೇವೀಲಾಲರು 1989ರಲ್ಲಿ ಮೊದಲ ಬಾರಿಗೆ ರಾಷ್ಟ್ರವ್ಯಾಪಿ ಸಾಲಮನ್ನಾ ಕಾರ್ಯಕ್ರಮವನ್ನು
ಘೋಷಿಸಿದರು. ಮೇಲ್ನೋಟಕ್ಕೆ ಅದು ರೈತಸ್ನೇಹೀ ಯೋಜನೆಯಂತೆ ಕಂಡರೂ, ಅದರ ದೀರ್ಘಕಾಲಿಕ ದುಷ್ಪರಿಣಾಮ
ನಮಗೀಗ ಕಾಣಿಸುತ್ತಿದೆ. ಸುಮಾರು ಒಂದು ಲಕ್ಷಕ್ಕೂ ಅಧಿಕ ಪ್ರಾಥಮಿಕ ವ್ಯವಸಾಯ ಸಹಕಾರ ಸಂಘಗಳಿಗೆ ಈ
ಸಾಲಮನ್ನಾ ಕಾರ್ಯಕ್ರಮ ಜೋರಾದ ಪೆಟ್ಟನ್ನೇ ಕೊಟ್ಟು ಸಹಕಾರೀ ವ್ಯವಸ್ಥೆಯೇ ಕುಸಿದು ಬಿತ್ತು.
ಅದಕ್ಕೆ ನಡೆಸುತ್ತಿರುವ ಕಾಯಕಲ್ಪದ ಯತ್ನಗಳಿನ್ನೂ ಫಲನೀಡಿಲ್ಲ. ಸಹಕಾರೀ ಸಂಸ್ಥೆಗಳೂ,
ಬ್ಯಾಂಕುಗಳೂ ಆಗಿಂದಾಗ್ಗೆ ಸಾಲಗಳನ್ನು ಮನ್ನಾ ಮಾಡುತ್ತಲೇ ಇರುತ್ತವೆ. ಆದನ್ನು ರೈಟಾಫ್
ಎನ್ನತ್ತಾರೆ. ಈ ಮನ್ನಾ ಕಾರ್ಯಕ್ರಮ ಗುಪ್ತವಾಗಿ, ಮಿಕ್ಕ ಬಾಕೀದಾರರಿಗೆ ತಿಳಿಯದಂತೆ ನಡೆಯುತ್ತದೆ.
ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯಿಂದ ಸಾಲ ಪಡೆದು ಪೀಡಿತರಾಗಿ ಆತ್ಮಹತ್ಯೆಗೊಳಗಾದ ರೈತರ
ಉದಾಹರಣೆಗಳು ವಿರಳ. ಆದರೆ ಸಂಸ್ಥಾಗತ ಮೂಲಗಳಿಂದ ಸಾಲವಂಚಿತರಾದ ರೈತರೇ ಹೊರಗೆ ಸಾಲವೆತ್ತಿ ಚಕ್ರಬಡ್ಡಿಗೊಳಗಾಗಿ
ಪ್ರಾಣತೆಗೆದುಕೊಳ್ಳುವುದನ್ನು ಪತ್ರಕರ್ತರೂ, ವಿದ್ವಾಂಸರೂ ವಿಪುಲವಾಗಿ ದಾಖಲಿಸಿದ್ದಾರೆ.
ಸಾಲಮನ್ನಾ ಕಾರ್ಯಕ್ರಮ ವ್ಯವಸ್ಥಿತವಾಗಿ ಆಗುತ್ತದೆ. ಅದಕ್ಕೆ ಕೆಲವು ಅರ್ಹತೆಯ ಮಾಪನಗಳನ್ನು
ಹಾಕಲಾಗುತ್ತದೆ. ಆದರೆ ಅರ್ಹರಲ್ಲದವರೂ ಹಣವನ್ನು ಕಟ್ಟಿದಿರುವ ಅಪಾಯವಿದೆ. ಮೇಲಾಗಿ ಸಮಯಕ್ಕೆ
ಸಾಲವನ್ನು ತೀರಿಸಿದವರಿಗೆ ಈ ಯೋಜನೆ ಒಂದು ಮೋಸವಾಗಿ ಪರಿಣಮಿಸುತ್ತದೆ. ಶಿಸ್ತಿದ್ದವರಿಗೆ ಶಿಕ್ಷೆ
– ಬಾಕೀದಾರರಿಗೆ ಬಹುಮಾನವೆಂಬ ಈ ನೀತಿ ಅರ್ಥಿಕ ಸಂಸ್ಥೆಗಳ ಸರ್ವನಾಶದ ನಾಂದಿ ಹಾಡುತ್ತದೆ. ಇದರಿಂದ
ತಕ್ಷಣಕ್ಕೆ ರೈತರಿಗೆ ಸಹಾಯವಾದಂತೆ ಕಂಡರೂ, ಸಾಲಮನ್ನಾದಿಂದ ಆರ್ಥಿಕವಾಗಿ ತತ್ತರಿಸಿದ ಸಹಕಾರ
ವ್ಯವಸ್ಥೆಯ ಇಂದಿನ ಪರಿಸ್ಥಿತಿಯನ್ನು ಕಂಡಾಗ ದೇವೀಲಾಲರ ಕರುಣೆ ರೈತರಿಗೆ ಅಂದು ಬೇಕಿತ್ತೇ ಎಂಬ
ಪ್ರಶ್ನೆಯನ್ನು ಎತ್ತಲೇಬೇಕಾಗುತ್ತದೆ.
ಈಗ ಸಿದ್ಧರಾಮಯ್ಯನವರ ಘೋಷಣೆಯಾದ "ರೈತರಿಗೆ ಲೀಟರಿಗೆ ನಾಲ್ಕು ರೂಪಾಯಿ ಅಧಿಕ ದರ" ನೀಡುವ ಕ್ರಾಂತಿಕಾರಿ ವಿಚಾರವನ್ನೂ ರೈತವಿರೋಧಿ ಎಂದು ಹೇಳುವ ನನ್ನಂತಹವರ ತಲೆಕೆಟ್ಟಿದೆ
ಅನ್ನುವ ಟೀಕೆ ಸಹಜವೇ. ನಾನು ಮೊದಲ ಭಾಗದಲ್ಲಿ ಪ್ರತಿಪಾದಿಸಿದ್ದನ್ನೇ ವಿರೋಧಿಸುತ್ತಿರುವಂತೆಯೂ
ಇದು ಕಾಣುತ್ತದೆ. ಆದರೆ ಇದರ ಪದರಗಳನ್ನು ಸ್ವಲ್ಪ ಬಿಡಿಸಿಹೇಳುವ ಪ್ರಯತ್ನವನ್ನು ನಾನು
ಮಾಡುತ್ತೇನೆ.


ಕರ್ನಾಟಕದಲ್ಲಿ
ಶೇಖರಿಸುತ್ತಿರುವ ಹಾಲು ಈಗಾಗಲೇ ಸ್ಥಳೀಯ ಮಾರಾಟಕ್ಕಿಂತ ಹೆಚ್ಚಾಗಿದೆ. ಈ ಹೆಚ್ಚುವರಿ ಹಾಲನ್ನು
ಸಂಸ್ಕರಣೆ ಮಾಡಿ ಹಾಲಿನ ಪುಡಿಯಾಗಿ ಪರಿವರ್ತಿಸಿ ದಾಸ್ತಾನು ಮಾಡಿ ಆನಂತರ ರಾಜ್ಯದ ಹೊರಗಡೆ ಮಾರಾಟ
ಮಾಡಬೇಕು. ಮಹಾಮಂಡಳಿ ಈಗಾಗಲೇ ಹಾಲಿನ ಪುಡಿಯ ಬೆಟ್ಟವನ್ನು ತನ್ನ ಉದರದಲ್ಲಿ
ಅಡಕವಾಗಿಟ್ಟುಕೊಂಡಿದೆ. ಹೆಚ್ಚುವರಿ ಸಂಸ್ಕರಣಾ ಸಾಮರ್ಥ್ಯವೂ ಇಲ್ಲದಿದ್ದರೆ ಈಗಾಗಲೇ ನಷ್ಟವನ್ನು ಕಾಣುವ
ಸಂಸ್ಥೆ ಇನ್ನೂ ನಷ್ಟದಲ್ಲಿ ತತ್ತರಿಸಿಬಿಡುತ್ತದೆ. ಈಗ ಬರುವ ಹೆಚ್ಚುವರಿ ಹಾಲನ್ನು
ನಿರಾಕರಿಸುವಂತೆಯೂ ಇಲ್ಲ, ಹಾಗೂ ಈ ಹಾಲಿ ಸಂಸ್ಕರಣೆ- ದಾಸ್ತಾನು-ಮಾರಾಟ, ಮಾಡಲಾರದೆ ಆಳವಾದ
ಆರ್ಥಿಕ ಮುಗ್ಗಟ್ಟಿಗೆ ಈ (ರೈತಪರ) ಸಂಸ್ಥೆ ಒಳಗಾಗುವುದು ಖಾತರಿಯೇ. ಆಗ ಸರಕಾರ ತನ್ನ ಮಾತಿನಂತೆ
ರೈತನಿಗೆ ನಾಲ್ಕುರೂಪಾಯಿಗಳನ್ನು ನೀಡಬಹುದು. ಆದರೆ ಮಿಕ್ಕ ದುಡ್ಡನ್ನು ಕೊಡುವುದಕ್ಕೆ ಮಹಾಮಂಡಳಿಯ
ಬಳಿ ಧನವೂ ಇರುವುದಿಲ್ಲ – ಸಂಸ್ಕರಣಾ ಸಾಮರ್ಥ್ಯದಲ್ಲಿ ಹೂಡಿಕೆ ಹಾಕುವ ಕ್ಷಮತೆಯೂ ಇರುವುದಿಲ್ಲ.
ಹೀಗಾಗಿಯೇ ರೈತರ ಸಂಕ್ಷೇಮದ
ಹೆಸರಿನಲ್ಲಿ ಮಾಡಿದ ಈ ಕೆಲಸ ರೈತವಿರೋಧಿಯಾಗುತ್ತದೆ. ಸಿದ್ಧರಾಮಯ್ಯನವರು ನಿಜಕ್ಕೂ ಹೈನುಗಾರಿಕೆಯ
ದೀರ್ಘಕಾಲಿಕ ಉದ್ಧಾರ ಮಾಡಬೇಕಿದ್ದರೆ ಜಾಗ್ರತೆಯಾಗಿ ಎರಡು ಕೆಲಸಗಳನ್ನು ಮಾಡಬೇಕು – ಗ್ರಾಹಕರಿಂದ
ಯಾವ ಬೆಲೆ ಪಡೆಯಬೇಕೆನ್ನುವ ವಿಷಯದಲ್ಲಿ ಮಹಾಮಂಡಳಿಗೆ ಸ್ವಾತಂತ್ರವನ್ನು ನೀಡಬೇಕು (ಹಾಗೂ ಮಹಾಮಂಡಳಿ
ಆ ಸ್ವಾತಂತ್ರವನ್ನು ಉಪಯೋಗಿಸಿ ಆದಾಯವನ್ನು ತಕ್ಷಣವೇ ಹೆಚ್ಚಿಸಿಕೊಳ್ಳಬೇಕು). ಎರಡನೆಯದಾಗಿ
ಉತ್ಪಾದಕತೆ ಬೆಳೆಯುವ ಯೋಜನೆಗಳಲ್ಲಿ ಸರಕಾರ ಹಣವನ್ನು ಹೂಡಬೇಕು.

ಸರಕಾರದ ಸಹಾಯವು ಯಾವ ರೀತಿಯಲ್ಲಿ,
ಯಾವ ರೂಪದಲ್ಲಿ ರೈತರಿಗೆ ತಲುಪಬೇಕು ಅನ್ನುವ ವಿಚಾರ ಮಾಡಬೇಕು. ಒಂಟಿಯಾಗಿ ಒಬ್ಬರೇ ನಿರ್ಧಾರ
ಮಾಡಿದಾಗ ಕೆಲವು ಆಯಾಮಗಳು ಕಾಣದೇ ಹೋಗಬಹುದು. ಜಯಲಲಿತಾರ ಮಿಕ್ಸಿ-ಫ್ಯಾನು, ಅಖಿಲೇಶ್ ಯಾದವರ
ಸೈಕಲ್-ಲ್ಯಾಪ್ ಟಾಪ್ ಹಂಚಿಕೆಯ ಯೋಜನೆಗಳು ಸಿದ್ಧರಾಮಯ್ಯನವರ ಅವಸರದ ಘೋಷಣೆಗಳಿಗಿಂತ ಉತ್ತಮವಾಗಿ –
ಒಂದು ವಿಲಕ್ಷಣ ಕಾರಣಕ್ಕಾಗಿ – ಕಾಣುತ್ತದೆ. ಜಯಲಲಿತಾ, ಅಖಿಲೇಶರ ಘೋಷಣೆಗಳಲ್ಲಿ ಬೊಕ್ಕಸಕ್ಕೆ
ಒಂದು ಬಾರಿಯ ವ್ಯಯವಾಗುತ್ತದೆ, ಆದರೆ ಸಿದ್ಧರಾಮಯ್ಯನವರ ಘೋಷಣೆಯಲ್ಲಿ ನಿರಂತರತೆಯಿದೆ. ಆ
ನಿರಂತರತೆಯ ಮೂಲಬೀಜವನ್ನು ಬೇಜವಾಬ್ದಾರಿಯಿಂದ ಬಿತ್ತಿದವರು ಭಾಜಪದವರು.

ಕರುಣೆಯಿಂದಲೇ
ರೈತವಿರೋಧಿಗಳಾಗಿ ರೈತಪರಸಂಸ್ಥೆಗಳ ಅವನತಿಗೆ ಕಾರಣರಾಗುತ್ತಿರುವ ಸಿದ್ಧರಾಮಯ್ಯನವರನ್ನು ದೇವೀಲಾಲರ
ವಾರಸುದಾರರೆಂದೇ ಚರಿತ್ರೆ ಗುರುತಿಸುತ್ತದೆ. ಆದರೆ ಸ್ವಪ್ರೇರಣೆಯಿಂದ ಹುಲಿಸವಾರಿ
ಮಾಡುತ್ತಿರುವ ನಮ್ಮ ಮುಖ್ಯಮಂತ್ರಿಗಳನ್ನು ಇಳಿಸಿ ಬಚಾಯಿಸುವವರು ಯಾರು?
No comments:
Post a Comment