
ಆದರೆ ಸರಕಾರೀ ಬ್ಯಾಂಕುಗಳು ಖಾಸಗೀ ರಂಗದಿಂದ ಯಾವುದೇ ಪೈಪೋಟಿಯಿಲ್ಲದೆಯೇ ನಡೆಯುತ್ತಿದ್ದುವು. 1991ರ ಉದಾರೀಕರಣದ ನೀತಿಯ ಫಲವಾಗಿ ಬ್ಯಾಂಕಿಂಗ್ ಕ್ಷೇತ್ರವನ್ನು ಖಾಸಗೀ ವಲಯಕ್ಕೂ ತೆರೆವ ನೀತಿಯನ್ನು ಪ್ರತಿಪಾದಿಸಿದ್ದಾಯಿತು. 1993ರಲ್ಲಿ ರಿಜರ್ವ್ ಬ್ಯಾಂಕ್ ಖಾಸಗೀ ರಂಗದಲ್ಲಿನ ಹೊಸ ಬ್ಯಾಂಕುಗಳ ಮೊದಲ ನೀತಿಯನ್ನು ಪ್ರಕಟಿಸಿತು. ಆ ಹಂತದಲ್ಲಿ ನೀಡಿ-ಸ್ಥಾಪಿತವಾದ ಹತ್ತು ಬ್ಯಾಂಕುಗಳಲ್ಲಿ ಇಂದು ಆರು ಬ್ಯಾಂಕುಗಳು ಮಾತ್ರ ಮುಂದುವರೆಯುತ್ತಿವೆ. 2001ರಲ್ಲಿ ಮತ್ತೆರಡು ಖಾಸಗೀ ಕ್ಷೇತ್ರದ ಬ್ಯಾಂಕುಗಳು ಸ್ಥಾಪಿತಗೊಂಡವು. ಈಗ ಇನ್ನೊಂದಿಷ್ಟು ಬ್ಯಾಂಕುಗಳಿಗೆ ಪರವಾನಗಿ ನೀಡುವುದಕ್ಕಾಗಿ ರಿಜರ್ವ್ ಬ್ಯಾಂಕಿನ ನೀತಿ ಪ್ರಕಟಗೊಂಡಿದೆ.

ಬ್ಯಾಂಕಿಂಗ್ ವ್ಯವಸ್ಥೆಯ ನಷ್ಟ ಎಂದರೇನು? ಒಂದು ಬ್ಯಾಂಕಿನಲ್ಲಿ ಸರಕಾರ ಅಥವಾ ಬ್ಯಾಂಕಿನ ಮಾಲೀಕರು ಒಂದಿಷ್ಟು ಮೂಲಧನವನ್ನು ಹೂಡುತ್ತಾರೆ. ಆ ಮೂಲಧನದ ಎಂಟರಿಂದ ಹತ್ತುಪಟ್ಟು ಠೇವಣಿಗಳನ್ನು ನಮ್ಮ-ನಿಮ್ಮಂತಹ ಜನಸಾಮಾನ್ಯರಿಂದ ಸಂಗ್ರಹಿಸುವ ಅಧಿಕಾರ ಬ್ಯಾಂಕುಗಳಿಗಿರುತ್ತದೆ. ಹೀಗಾಗಿ ಬ್ಯಾಂಕಿಂಗ್ ವ್ಯವಸ್ಥೆ ರೂ.8,000 ಕೋಟಿ ಸಾಲಕೊಟ್ಟರೆ, ಅದರಲ್ಲಿ ಹೆಚ್ಚಿನಂಶ ಹಣ ಠೇವಣಿದಾರರದ್ದೇ ಆಗಿರುತ್ತದೆ. ಹೀಗಾಗಿ ಬ್ಯಾಂಕುಗಳು ಕಿಂಗ್ ಫಿಶರ್ ನಂತಹ ಸಂಸ್ಥೆಗೆ ಸಾಲ ನೀಡಿ ನಷ್ಟ ಅನುಭವಿಸಿ – ಅದನ್ನು ಇತರ ಮೂಲಗಳಿಂದ ತುಂಬಿಕೊಳ್ಳಲಾಗದೇ ಹೋದರೆ – ತಾಂತ್ರಿಕವಾಗಿ ಆ ನಷ್ಟದ ಬಹುಭಾಗವು ಠೇವಣಿದಾರರದ್ದೇ ಆಗಿರುತ್ತದೆ. ನಿಮ್ಮ-ನಮ್ಮ ಅಷ್ಟೂ ಠೇವಣಿಗಳಿಗಿರುವ ವಿಮೆ ಕೇವಲ ಪ್ರತೀ ಠೇವಣಿದಾರನಿಗೆ ರೂ.1 ಲಕ್ಷಕ್ಕೆ ಸೀಮಿತವಾಗಿದೆ. ಹೀಗಾಗಿ ಕಿಂಗ್ ಫಿಶರ್ ಕಂಪನಿ ಕುಸಿದದ್ದರಿಂದ ಕಂಪನಿಯ ಮಾಲೀಕರಿಗಿಂತ ಹೆಚ್ಚಾಗಿ ಠೇವಣಿದಾರರಿಗೇ ಹೆಚ್ಚಿನ ನಷ್ಟ ಉಂಟಾಗುತ್ತದೆ. ತಾಂತ್ರಿಕ ದೃಷ್ಟಿಯಿಂದ ಒಂದು ಬ್ಯಾಂಕು ದಿವಾಳಿ ತೆಗೆದು ಎತ್ತಂಗಡಿಯಾದರೆ ಆ ನಷ್ಟವನ್ನು ನಿಜಕ್ಕೂ ಹೂಡಿಕೆದಾರರಿಗಿಂತ ಹೆಚ್ಚಾಗಿ ಠೇವಣಿದಾರರೇ ಹೊರಬೇಕು.
ಆದರೆ ನಿಜಕ್ಕೆ ಹಾಗಾಗುವುದಿಲ್ಲ. ಇದಕ್ಕೆ ಕಾರಣಗಳಿವೆ. ಬ್ಯಾಂಕುಗಳು ನಮ್ಮ ಧನವನ್ನು ಸುರಕ್ಷಿತವಾಗಿ ಇಡಬಹುದಾದ ಸ್ಥಳ ಎನ್ನುವ ಸರ್ವವ್ಯಾಪೀ ನಂಬಿಕೆಯಿದೆ. ಆ ನಂಬಿಕೆಯನ್ನು ಕಾಪಾಡುವುದು ರಿಜರ್ವ್ ಬ್ಯಾಂಕಿನ ಕರ್ತವ್ಯ. ಹೀಗಾಗಿಯೇ ಮಿಕ್ಕ ಸಂಸ್ಥೆಗಳಿಗಿಂತಲೂ ಹೆಚ್ಚಿನ ನಿಗಾವನ್ನು ಬ್ಯಾಂಕುಗಳ ಮೇಲೆ ಇಡಬೇಕು. ಇಲ್ಲವಾದರೆ ಅನೇಕಾನೇಕ ಜನರ ಸಣ್ಣ ಉಳಿತಾಯದ ಮೊತ್ತಗಳು ಬ್ಯಾಂಕುಗಳು, ತನ್ಮೂಲಕ ಸಾಲ ಪಡೆವ ಉದ್ಯೋಗಪತಿಗಳ ಬೇಜವಾಬ್ದಾರಿತನದಿಂದಾಗಿ ನಮಗರಿವಲ್ಲದೆಯೇ ನಷ್ಟವಾಗಬಹುದು. ಕಾನೂನು-ತಾಂತ್ರಿಕತೆಗಿಂತ ಹೆಚ್ಚಾಗಿ ಬ್ಯಾಂಕಿನ ಮೇಲಿರುವ ನಂಬಿಕೆಯನ್ನು ಕಾಪಾಡುವಂತೆ ವ್ಯವಸ್ಥೆಯನ್ನು ನಡೆಯಿಸುವುದು ರಿಜರ್ವ್ ಬ್ಯಾಂಕಿನ ಕರ್ತವ್ಯ. ಹೀಗಾಗಿಯೇ ದೊಡ್ಡ ಬ್ಯಾಂಕುಗಳು ವಿಫಲವಾಗಲು ಸರಕಾರಗಳು ಬಿಡುವುದಿಲ್ಲ ಎನ್ನುವ ನಂಬಿಕೆ ಟೂ ಬಿಗ್ ಟು ಫೇಲ್ ಎನ್ನುವ ಸೂತ್ರದಲ್ಲಿದೆ. ಈ ಚರ್ಚೆಯಲ್ಲಿ ನಾವು ನೆನಪಿಡಬೇಕಾದ ಮತ್ತೊಂದು ವಿಚಾರ – ಒಂದು ಬ್ಯಾಂಕ್ ವಿಫಲಗೊಂಡರೆ ಅದರ ಪ್ರಭಾವ ಅದಕ್ಕೆ ಮಾತ್ರ ಸೀಮಿತವಾಗಿರದೇ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿಯೇ ಕಲ್ಲೋಲವನ್ನುಂಟು ಮಾಡಬಹುದು. ಒಂದಕ್ಕೊಂದು ಸೇರಿದ ನದಿ-ಕಾಲುವೆಗಳಲ್ಲಿ ಎಲ್ಲೇ ವಿಷ ಸೇರಿದರೂ ಇಡೀ ಜಲವ್ಯವಸ್ಥೆಗೇ ಆ ನಂಜು ಹರಡುವಂತೆ ಬ್ಯಾಂಕಿಂಗ್ ವ್ಯವಸ್ಥೆ ಒಂದಕ್ಕೊಂದು ಬೆಸೆದೇ ಹಬ್ಬಿದೆ. ಹೀಗಾಗಿ ಖಾಸಗೀ ಕ್ಷೇತ್ರದಲ್ಲಿ ಬ್ಯಾಂಕುಗಳು ಬಂದರೂ ಅದರ ಅಂತಿಮ ಜವಾಬ್ದಾರಿ ರಿಜರ್ವ್ ಬ್ಯಾಂಕು – ಸರಕಾರದ ಮೇಲೆಯೇ ಅಧಿಕವಾಗಿ ಇರುತ್ತದೆ.


ಮೇಲೆ ಚರ್ಚಿಸಿದ ಉದಾಹರಣೆಯಲ್ಲಿ ಉದ್ಯೋಗಪತಿಯ ಕೈಯಲ್ಲಿ ವಿತ್ತೀಯ ಸಂಸ್ಥೆಯಾದ ಬ್ಯಾಂಕನ್ನೂ ಇದ್ದಿದ್ದರೆ – ಠೇವಣಿದಾರರ ನಂಬಿಕೆಯ ಆಧಾರದ ಮೇಲೆ ಸಂಗ್ರಹಿಸಿದ ಹಣಕ್ಕೆ ಯಾವ ಗತಿ ಆಗಬಹುದಿತ್ತು ಎನ್ನುವುದನ್ನು ಯೋಚಿಸಿನೋಡುವ ಅವಕಾಶ ನಮಗೆ ಸಿಗುತ್ತದೆ. ತಮ್ಮ ಸಂಸ್ಥೆಯಲ್ಲದಿದ್ದರೂ ವ್ಯಾಪಾರಿ ಸಹಯೋಗಿ ಸಂಸ್ಥೆಗಳಿಗೆ ಹರಿಯಬಿಡುವ, ಆನಂತರ ಅದರ ನಷ್ಟದಿಂದಾಗಬಹುದಾದ ಪರಿಣಾಮವನ್ನು ಯೋಚಿಸುತ್ತಲೇ ಈ ನೀತಿಯನ್ನು ನಾವು ಅನುಮಾನದಿಂದ ನೋಡಬೇಕಿದೆ.
ಹಳೆಯ ಬ್ಯಾಂಕುಗಳೇ ತಮ್ಮ ವ್ಯಾಪಾರವನ್ನು ಬೆಳೆಯಿಸಿಕೊಂಡು ಹೋಗುತ್ತಿರುವ ಈ ಸಂದರ್ಭದಲ್ಲಿ ಹೊಸ ಬ್ಯಾಂಕುಗಳು ಬೇಕೇ? ಅದರಿಂದ ಆಮ್ ಜನತಾಗೆ ಲಾಭವೇನು? 1993ರಲ್ಲಿ ಹೊಸ ಖಾಸಗೀರಂಗದ ಬ್ಯಾಂಕುಗಳಿಗೆ ಪರವಾನಗಿ ನೀಡಿದಾಗ ಅವು ಬ್ಯಾಂಕಿಂಗ್ ಕ್ಷೇತ್ರದ ಹಲವು ಹಳೆಯ ಪದ್ಧತಿಗಳನ್ನು ಅಲುಗಾಡಿಸಿ ಉತ್ತಮಗೊಳಿಸಿದ್ದುವು. ಖಾಸಗೀ ಬ್ಯಾಂಕುಗಳು ಉತ್ತಮ ತಂತ್ರಜ್ಞಾನದ ಆಧಾರವಾಗಿ ಏರ್ಪಡಿಸಲ್ಪಟ್ಟಿದ್ದುವಾದ್ದರಿಂದ ತಾಂತ್ರಿಕತೆಯು ತ್ವರಿತಗತಿಯಿಂದ ಬೆಳೆಯಿತು. ಅದರ ಪ್ರಭಾವ ಸರಕಾರೀ ಬ್ಯಾಂಕುಗಳು, ಅವುಗಳ ಸೇವೆಯ ಗುಣಮಟ್ಟದ ಮೇಲೂ ಆಯಿತು. ಖಾಸಗೀ ಬ್ಯಾಂಕುಗಳು ಹೊಸ ವಿತ್ತೀಯ ಸೇವೆಗಳನ್ನು ಗ್ರಾಹಕರಿಗೆ ಒದಗಿಸಿ, ಹೊಸತನ ಬ್ಯಾಂಕಿಂಗ್ ಕ್ಷೇತ್ರಕ್ಕೆ ತಂದುವು.
ಆದರೆ ಈ ನೀತಿ – ತಾಂತ್ರಿಕತೆಯಿಂದ ಸಣ್ಣ ಠೇವಣಿದಾರರಿಗೆ, ಚಿಕ್ಕ ಸಾಲ ಪಡೆಯುವವರಿಗೆ, ಬಡವರಿಗೆ ಹೆಚ್ಚಿನ ವಿತ್ತೀಯ ಸೌಲಭ್ಯಗಳು ಉಂಟಾಗಿಲ್ಲ. ಹೊಸ ಬ್ಯಾಂಕುಗಳ ನೀತಿಪತ್ರದ ಕರುಡಲ್ಲಿ ಬಡವರನ್ನು ವಿತ್ತೀಯ ಕ್ಷೇತ್ರದಲ್ಲಿ ಒಳಗೊಳ್ಳುವ ಬಗ್ಗೆ ಹೊಸಬ್ಯಾಂಕುಗಳು ಆಲೋಚಿಸಬೇಕೆಂದು ಪ್ರತಿಪಾದಿಸಲಾಗಿತ್ತು. ಆದರೆ ಈಗ ಪ್ರಕಟವಾಗಿರುವ ಅಂತಿಮ ನೀತಿಪತ್ರದಲ್ಲಿ ಬಡಗ್ರಾಹಕರನ್ನು ಒಳಗೊಳ್ಳುವ ಪ್ರಕ್ರಿಯೆಯನ್ನು ಹೇಗೆ ಮರುರೂಪಿಸಬಹುದೆನ್ನುವ ಸವಾಲು ಇಲ್ಲ. ಹೀಗಾಗಿ ಹೊಸ ಬ್ಯಾಂಕುಗಳು ಈಗಾಗಲೇ ಇರುವ ಖಾಸಗೀ ಬ್ಯಾಂಕುಗಳ ಶಾಖೆಗಳಂತೆ ಕಾಣಬಹುದು. ಹೊಸ ಬ್ಯಾಂಕುಗಳಿಂದ ಮೂಲಭೂತ ಬದಲಾವಣೆಯ ಅಪೇಕ್ಷೆಯಿಲ್ಲವಾದ್ದರಿಂದ ಯಾವ ಈ ನೀತಿಯಿಂದ ಯಾವ ಉಪಯೋಗವೂ ಕಾಣುತ್ತಿಲ್ಲವೆಂದೇ ಹೇಳಬೇಕು.
26 ಫೆಬ್ರವರಿ 2013
No comments:
Post a Comment