Sunday, March 17, 2013

ಮಾಹಿತಿಯ ಮಹತ್ವದ ಬೆನ್ನೇರಿ


"ನಮ್ಮ ದೇಶದಲ್ಲಿ ಒಟ್ಟಾರೆ ಇರುವ ಪ್ರಾಥಮಿಕ ವ್ಯವಸಾಯ ಸಹಕಾರಿ ಸಂಘಗಳ ಸಂಖ್ಯೆ ಎಷ್ಟು?" ಇದು ಥಟ್ಟಂತ ಹೇಳಿ ಎಂದು ಕೇಳುತ್ತಿರುವ ಪ್ರಶ್ನೆಯಲ್ಲ. ಈ ಪ್ರಶ್ನೆಗೆ ಉತ್ತರ ಸಿಗುವುದು ಸುಲಭವಾಗಿರಬೇಕು. ಆದರೆ ನಿಜಕ್ಕೂ ಈ ಪ್ರಶ್ನೆಗೆ ಉತ್ತರವಿಲ್ಲ. ಪ್ರತೀ ಜಿಲ್ಲೆಯಲ್ಲಿಯೂ ಇರುವ ಸಹಕಾರಿ ಆಡಿಟ್ ಅಧಿಕಾರಿಯ ವತಿಯಿಂದ ಈ ಮಾಹಿತಿಯನ್ನು ಸಂಗ್ರಹಿಸಬಹುದು. ಅದನ್ನು ಒಟ್ಟುಗೂಡಿಸಿ ರಾಜ್ಯ - ರಾಷ್ಟ್ರಮಟ್ಟದ ಮಾಹಿತಿಯನ್ನು ಒದಗಿಸಬಹುದು. ಆದರೆ ಈ ಮಾಹಿತಿಯನ್ನು ವ್ಯವಸ್ಥಿತವಾಗಿ ಕಲೆಹಾಕುವ ಕೆಲಸವನ್ನು 1997-98ರ ನಂತರ ಮಾಡಿಯೇ ಇಲ್ಲ. ಆದರೂ ನಾವುಗಳು ಸಹಕಾರಿ ರಂಗಕ್ಕೆ ಪ್ರಣಾಳಿಕೆಗಳನ್ನು ರೂಪಿಸುವುದನ್ನು ನಿಲ್ಲಿಸಿಲ್ಲ.

ಮೇಲೆ ಹೇಳಿದ ಮಾಹಿತಿ ಸುಲಭದ್ದಾದರೂ ಲಭ್ಯವಿಲ್ಲ. ಆದರೆ ನಮ್ಮ ದೇಶದಲ್ಲಿ ಡ್ರೈವರ್ ವೃತ್ತಿಯಲ್ಲಿರುವವರು ಎಷ್ಟು ಮಂದಿ? ಕಟ್ಟಡ ಕೆಲಸದ ಕಾರ್ಮಿಕರೆಷ್ಟು? ಮನೆಗೆಲಸದಲ್ಲಿ ತೊಡಗಿರುವವರೆಷ್ಟು? ಎನ್ನುವ ಮಾಹಿತಿಯನ್ನು ಪಡೆಯಲು ಸಾಧ್ಯವೇ ಇಲ್ಲ. ಆದರೆ ದೇಶದಲ್ಲಿ ವ್ಯವಸಾಯ ಕೂಲಿಗಳೆಷ್ಟು, ಕೃಷಿಕರೆಷ್ಟು ಎನ್ನುವ ಮಾಹಿತಿ ದೊರೆಯುತ್ತದೆ. ಇದಕ್ಕೆ ಕಾರಣ ನಮ್ಮ ಮಾಹಿತಿ ಸಂಗ್ರಹಣೆಯು ವ್ಯವಸ್ಥಿತವಾಗಿ ನಡೆಯುವುದಿಲ್ಲ ಎನ್ನುವುದು ಒಂದಾದರೆ ನಮ್ಮ ಮನಸ್ಸಿನಲ್ಲಿರುವ ಪೂರ್ವಾಗ್ರಹಗಳೂ ಮತ್ತೊಂದೆಡೆ ಕೆಲಸ ಮಾಡುತ್ತದೆ. ಈ ಪೂರ್ವಾಗ್ರಹಗಳು ವರ್ಗೀಕರಣಕ್ಕೆ ಸಂಬಂಧಿಸಿದವು. ಹಿಂದುಳಿದ ಪ್ರದೇಶ ಎಂದ ಕೂಡಲೇ ನಮ್ಮ ಮನಸ್ಸಿಗೆ ಬರುವುದು ಗ್ರಾಮಾಂತರ ಪ್ರದೇಶಗಳು. ಹೀಗಾಗಿಯೇ ಮಾಜೀ ರಾಷ್ಟ್ರಪತಿ ಕಲಾಂರಂತಹ ಕಲಾಂರೇ ತಮ್ಮ ಪ್ರಿಯ ಯೋಜನೆಯಾದ ‘ಪೂರಾ‘ (ನಾಗರೀಕ ಸೌಲಭ್ಯಗಳನ್ನು ಗ್ರಾಮ ಪ್ರದೇಶದಲ್ಲಿ ಒದಗಿಸುವ) ಯೋಜನೆಯನ್ನು ಈ ಪೂರ್ವಾಗ್ರಹದ ಮೇಲೆಯೇ ರೂಪಿಸಿದ್ದಾರೆ. ಅಂದರೆ ನಗರದಲ್ಲಿರುವ ಸವಲತ್ತುಗಳು ಗ್ರಾಮಕ್ಕಿಂತ ಉತ್ತಮ ಎನ್ನುವುದು ಇದರಲ್ಲಿ ಅಡಕವಾಗಿದೆ. ಆದರೆ ನಗರದಲ್ಲಿರುವ ಬಡವರ ಬಸ್ತಿಗಳನ್ನು ನೋಡಿದಾಗ, ನಗರಕ್ಕೇ ನಾಗರೀಕ ಸೌಲಭ್ಯಗಳು ಬೇಕೆನ್ನುವ ವಿಚಾರ ನಮಗೆ ಹೊಳೆಯದಿರುವುದಿಲ್ಲ.

ನಮ್ಮ ದೇಶದ ಹೆಚ್ಚು ಮಾಹಿತಿಯನ್ನು ವಿಭಜಿಸಿರುವುದು ಗ್ರಾಮ, ಪಟ್ಟಣ, ನಗರ, ಮಹಾನಗರವೆಂಬ ಜನಸಂಖ್ಯೆಯನ್ನಾಧರಿಸಿದ ವರ್ಗೀಕರಣದಲ್ಲಿ. ಹೀಗಾಗಿ ಒಂದು ಸಾವಿರ ಜನಸಂಖ್ಯೆಯಿರುವ ಗ್ರಾಮದ ಮಾಹಿತಿ ನಮಗೆ ಸುಲಭವಾಗಿ ಸಿಗುವುದಾದರೂ, ಮಹಾನಗರದ ವಾರ್ಡಿನ ಅಥವಾ ಕೊಳೆಗೇರಿಯಲ್ಲಿ ವಾಸವಾಗಿರುವ ಐದುಸಾವಿರ ಜನರ ಬಗೆಗಿನ ಮಾಹಿತಿ ಸಿಗುವುದು ತುಂಬಾ ಕಷ್ಟ. ಹೀಗಾಗಿಯೇ ಗ್ರಾಮೀಣಾಭಿವೃದ್ಧಿ ಎಂದ ಕೂಡಲೇ ಬಡವರಿಗೆ ಉದ್ಯೋಗಾವಕಾಶ, ಬ್ಯಾಂಕಿನಿಂದ ಸಾಲಗಳು, ಕೃಷಿ ಯೋಜನೆಗಳು, ಸಾಲಮನ್ನಾ, ಬಡ್ಡಿ ದರದ ಕಡಿತ, ರಸಗೊಬ್ಬರಕ್ಕೆ ಸಬ್ಸಿಡಿ ಹೀಗೆ ಅನೇಕ ಯೋಜನೆಗಳು ಕಾಣಿಸುತ್ತವೆ. ನಗರಕ್ಕೆ ಬಂದ ಕೂಡಲೇ ನಗರಾಭಿವೃದ್ಧಿಯ ಪರಿಭಾಷೆ ಮೆಟ್ರೋ ರೈಲು, ವಿದ್ಯುತ್ತು, ನೀರಿನ ಸರಬರಾಜು, ಒಳಚರಂಡಿ, ವಿಮಾನಾಶ್ರಯಗಳತ್ತ ವಾಲುತ್ತದೆ. ನಗರ ಪ್ರದೇಶದ ಬಡತನ ಮತ್ತು ಬಡತನ ನಿರ್ಮೂಲನದ ಕಲ್ಪನೆ ಕೊಳೆಗೇರಿ ನಿರ್ಮೂಲನ ಮತ್ತು ಕಡಿಮೆ ಆದಾಯದ ಸಂಸಾರಗಳಿಗೆ ಗೃಹ ನಿರ್ಮಾಣಕ್ಕೆ ಸೀಮಿತವಾಗುತ್ತದೆ.

ಬೆಂಗಳೂರಿನಲ್ಲಿ ಬಹುಚರ್ಚಿತವಾದ ಈಜೀಪುರದ ಕಾಂಡವನ್ನು ನಾವು ಪರಿಶೀಲಿಸಿದಾಗಲೂ ನಗರಾಭಿವೃದ್ಧಿ – ಗೃಹಪುನರ್ನಿರ್ಮಾಣದ ಮಾತಾಗಿತ್ತೇ ಹೊರತು, ಈ ಈಜೀಪುರದಲ್ಲಿ ಇದ್ದ ಜನರೇನು ಮಾಡುತ್ತಿದ್ದರು? ಅವರ ವೃತ್ತಿಯೇನು? ಅವರುಗಳ ಆದಾಯವನ್ನು ಹೆಚ್ಚಿಸಿ ಅವರಗಳನ್ನು ನಗರದಲ್ಲಿ ಒಳಗೊಳ್ಳುವುದು ಹೇಗೆನ್ನುವ ಕಷ್ಟದ ಪ್ರಶ್ನೆಗಳನ್ನು ನಾವು ಕೇಳುವುದೇ ಇಲ್ಲ. ಕೊಳಚೆ ನಿರ್ಮೂಲನಾ ಮಂಡಳಿಯ ಮಾನ್ಯತೆ ಪಡೆದಿರುವ ಈಜೀಪುರದಂತಹ ಸುಮಾರು 250 ಕೊಳೆಗೇರಿಗಳು ಬೆಂಗಳೂರು ನಗರದಲ್ಲಿವೆ. ಕೊಳೆಗೇರಿಗಳೆಂಬ ಮಾನ್ಯತೆ ಪಡೆಯದಿದ್ದರೂ, ಕೊಳಚೆ ಪ್ರದೇಶಗಳೆಂದು ಗುರುತಿಸಲ್ಪಟ್ಟು ಸುಮಾರು 350 ಕೇರಿಗಳಿವೆ. ಇದೂ ಅಲ್ಲದೇ ಯಾವ ಮಾಹಿತಿಗೂ ದಕ್ಕದೇ ಬೆಂಗಳೂರಿಗೆ ವಲಸೆ ಬಂದು ನೀಲಿ ಟಾರ್ಪಾಲುಗಳ ಕೆಳಗೆ ಆಶ್ರಯ ಪಡೆದಿರುವ ಅನೇಕ ಸಂಸಾರಗಳಿವೆ. ಯಾರಿಗೂ ಕಾಣದೇ ದೊಡ್ಡ ಕಟ್ಟಡಗಳಲ್ಲಿ ಮನೆಗೆಲಸ, ಸೆಕ್ಯೂರಿಟಿ, ಹೋಟೇಲುಗಳಲ್ಲಿಯೇ ವಾಸವಾಗಿರುವ ಅಡುಗೆ ಸಿಬ್ಬಂದಿ, ಕ್ಲೀನರುಗಳೂ ಇದ್ದಾರೆ. ಇವರುಗಳು ನಮ್ಮ ಮಾಹಿತಿಗೆ ದಕ್ಕುವುದಿಲ್ಲ. ಹೀಗಾಗಿಯೇ ಅವರು ಪ್ರಣಾಳಿಕೆಗಳ ಪರಿಭಾಷೆಯಿಂದಲೂ ಹೊರಗೇ ಉಳಿಯುತ್ತಾರೆ.

ಹೋಗಲಿ, ಇಲ್ಲದ ಮಾಹಿತಿಯ ಬಗ್ಗೆ ಪರಿತಪಿಸುವುದನ್ನು ಬಿಟ್ಟು ಇರುವ ಮಾಹಿತಿಯನ್ನು ನಾವು ಹೇಗೆ ಅರ್ಥೈಸುತ್ತೇವೆ ಎನ್ನುವುದನ್ನು ಪರಿಶೀಲಿಸೋಣ. 1950-51ರಲ್ಲಿ ದೇಶದ ಒಟ್ಟಾರೆ ಉತ್ಪತ್ತಿಯಲ್ಲಿ ಕೃಷಿಯ ಪಾಲು 53 ಪ್ರತಿಶತ ಇತ್ತು. ಈಗ ನಮ್ಮ ಆರ್ಥಿಕ ಉತ್ಪತ್ತಿಯಲ್ಲಿ ಕೃಷಿಯ ಪಾಲು 14 ಪ್ರತಿಶತವಿದೆ. ಸೇವೆಗಳಿಂದ ದೇಶದ ಆರ್ಥಿಕತೆಗೆ ಬರುತ್ತಿದ್ದ ದೇಣಿಗೆ ಒಟ್ಟರೆ 30 ಪ್ರತಿಶತವಿದ್ದದ್ದು ಈಗ 57 ಪ್ರತಿಶತಕ್ಕೆ ಏರಿದೆ. ಅಂದರೆ ಆದಾಯದ ಬಹುಭಾಗ ಕೃಷಿಯಿಂದ ಸೇವಾ ಕ್ಷೇತ್ರಕ್ಕೆ ವರ್ಗಾವಣೆಗೊಂಡಿದೆ ಎಂದಾಯಿತು. ಆದರೆ ಕೃಷಿಯಲ್ಲಿ ನಿರತವಾಗಿರುವವರ ಸಂಖ್ಯೆ ಇದೇ ಪರಿಮಾಣದಲ್ಲಿ ಕಡಿಮೆಯಾಗಿಲ್ಲ. ಪರಿಣಾಮ? ಹೆಚ್ಚು ಸೇವಾ ಕ್ಷೇತ್ರದ ಕೆಲಸಗಳು ನಗರ ಪ್ರಾಂತಗಳಲ್ಲಿಯೇ ಉಂಟಾಗುತ್ತವೆ. ಅಂದರೆ, ನಗರದಲ್ಲಿಯೇ ಇರುವ ಸೇವಾ ಕ್ಷೇತ್ರದ ಆದಾಯ ಹೆಚ್ಚಿ ಆ ಕ್ಷೇತ್ರದಲ್ಲಿ ತೊಡಗಿರುವವರ ಸಂಖ್ಯೆ ಅದಕ್ಕೆ ಸರಿದೂಗುವಂತೆ ಹೆಚ್ಚಾಗದಿದ್ದರೆ – ನಗರ ಪ್ರದೇಶದ ತಲಾ ಆದಾಯ ಗ್ರಾಮೀಣ ಪ್ರದೇಶಕ್ಕಿಂತ ವೇಗದಲ್ಲಿ ಬೆಳೆಯುತ್ತದೆ. ಈ ಆರ್ಥಿಕ ಧ್ರುವೀಕರಣದ ಮಾರ್ಗವನ್ನು ನಾವು ಹಿಡಿದಿದ್ದೇವೆಂದು ಈ ಮಾಹಿತಿ ಹೇಳುತ್ತದೆ. ಆರ್ಥಿಕ ಬೆಳವಣಿಗೆಯೇ ಬೀಜಮಂತ್ರವಾಗಿರುವ ಈ ಸಮಯದಲ್ಲಿ ಸಮತಾವಾದದ ಕೆಲವು ಪ್ರಶ್ನೆಗಳನ್ನು ಎತ್ತುವಂತೆ ಈ ಮಾಹಿತಿ ನಮ್ಮನ್ನು ಪ್ರೇರೇಪಿಸುತ್ತದೆ.

ಈ ಮಾಹಿತಿಯನ್ನು ನೋಡಿದಾಗ ಕಲಾಂರ ಪೂರಾ ಯೋಜನೆಗೆ ಕ್ಷಣಿಕವಾಗಿ ಒಂದು ಅರ್ಥ ಬಂದಂತೆ ಕಾಣಿಸುತ್ತದೆ. ನಗರ ಕೇಂದ್ರಿತ ಸೇವೆಗಳನ್ನು ಗ್ರಾಮಾಂತರ ಪ್ರದೇಶಗಳಿಗೆ ಒಯ್ಯುವುದರಲ್ಲಿ ಒಂದು ಅರ್ಥವೂ ಕಾಣುತ್ತದೆ. ಅದು ಗ್ರಾಮದಲ್ಲಿರುವವರನ್ನು ಅಧಿಕ ಆದಾಯದಿಂದ ಗ್ರಾಮದಲ್ಲಿಯೇ ಉಳಿಸುವ ಯೋಜನೆಯಾಗುತ್ತದೆ. ಇದರಿಂದಾಗಿ ಕೃಷಿಗೆಂದೇ ಮೀಸಲಿಟ್ಟಿರುವ ಜಮೀನನ್ನು ಉತ್ಪಾದನಾ-ಸೇವಾ ಕ್ಷೇತ್ರಗಳು ಆಕ್ರಮಿಸಿಕೊಳ್ಳಬಹುದೋ ಎನ್ನುವುದನ್ನು ಯೋಚಿಸುತ್ತಲೇ (ಶಿಂಗೂರನ್ನೂ ನಂದಿಗ್ರಾಮವನ್ನೂ ಮರೆಯದೆಲೆ) ನಾವು ಮುಂದುವರೆಯಬೇಕು. ಇದಕ್ಕೆ ವಿರುದ್ಧವಾಗಿ ಗ್ರಾಮ ಪ್ರದೇಶದಲ್ಲಿ ಪೂರ್ಣಪ್ರಮಾಣದ ಕೆಲಸ ಸಿಗದವರನ್ನು ಸೇವಾಕ್ಷೇತ್ರ ಇರುವ ನಗರ ಪ್ರದೇಶಕ್ಕೇ ಕರೆತರಬಹುದೇ ಎನ್ನುವ ನಗರೀಕರಣದ ಮಗ್ಗುಲನ್ನೂ ನೋಡಬಹುದು. ಎರಡೂ ನಮ್ಮ ಕೈಗೆಟುಕುವ ವಿಚಾರಗಳೇ. ಈ ಮಾಹಿತಿಯಿಂದ ನಗರ ಪ್ರದೇಶದಲ್ಲಿ ಆರ್ಥಿಕತೆ ಬೆಳೆಯುತ್ತಿದೆ ಎಂದರಿತು ಅದರ ಪ್ರಕಾರ ಪ್ರಣಾಳಿಕೆಗಳನ್ನು ರೂಪಿಸಬಹುದು.

ಆದರೆ ನಮ್ಮ ಕೈಗೆಟುಕದ ವಿಚಾರ ಈ ಬೆಳವಣಿಗೆಯ ಕಥನದಲ್ಲಿಯೇ ಇರಬಹುದಾದ ಧ್ರುವೀಕರಣದ ಪ್ರಕ್ರಿಯೆ. ಸೇವಾ ಕ್ಷೇತ್ರ ಎಂದರೆ ನಮ್ಮ ಮನಸ್ಸಿಗೆ ವಕೀಲರು, ಆರ್ಕಿಟೆಕ್ಟುಗಳು, ದೊಡ್ಡ ಖಾನಾವಳಿಗಳನ್ನು ನಡೆಸುವವರು, ಬಿಲ್ಡಿಂಗ್ ಕಟ್ಟುವ ಕಂಟ್ರಾಕ್ಟುದಾರರು ಕಾಣಬಹುದು. ಆದರೆ  ತಳ್ಳುಗಾಡಿಯಲ್ಲಿ ಐಸ್ ಕ್ಯಾಂಡಿ ಮಾರುವವರು, ತಿಂಡಿ ಪೂರೈಸುವವರು, ಆಟೋ ಚಲಾಯಿಸುವವರು, ಹೀಗೆ ಇತರೆ ಸೇವೆಗಳನ್ನು ಒದಗಿಸುವವರೂ ಸೇವಾ ಕ್ಷೇತ್ರದ ಆರ್ಥಿಕ ಉತ್ಪಾದನೆಗೆ ಕಾರಣರಾಗುತ್ತಾರೆ. ಅವರುಗಳೂ ನಗರ ಪ್ರಾಂತದಲ್ಲಿಯೇ ಇರುತ್ತಾರೆ. ನಗರ ಪ್ರಾಂತದೊಳಗೇ ನಡೆಯುತ್ತಿರಬಹುದಾದ ಕ್ರೂರ ಆರ್ಥಿಕ ಧ್ರುವೀಕರಣ ನಮ್ಮ ದೃಷ್ಟಿಗೂ ಬೀಳುವುದಿಲ್ಲ, ಮಾಹಿತಿಗೂ ದಕ್ಕುವುದಿಲ್ಲ. ಇದು ಮಾಹಿತಿಯೊಳಕ್ಕೆ ಹಾಗೂ ತನ್ಮೂಲಕ ಯೋಜನೆಯ ಪರಿಭಾಷೆಯೊಳಕ್ಕೆ ಬಂದ ಹೊರತೂ ನಾವು ಉತ್ತಮ ಪ್ರಣಾಳಿಕೆಗಳನ್ನ ರೂಪಿಸಲಾಗುವುದಿಲ್ಲ.

ಈಜೀಪುರದ ಕೊಳೆಗೇರಿಯನ್ನು ನೆಲಸಮ ಮಾಡಿದಾಗ ನಮ್ಮಲ್ಲಿನ ಪ್ರಜ್ಞೆ ಇದ್ದಕ್ಕಿದ್ದಂತೆ ಜಾಗೃತಗೊಂಡು ಅನೇಕ ಬುದ್ಧಿವಂತರು ಪ್ರತಿಭಟಿಸಿದರು. ಆದರೆ ಬೆಂಗಳೂರಿನ ಸಾವಿರ ಸಮಸ್ಯೆಗಳಲ್ಲಿ ಈಜೀಪುರ ಒಂದು ಎನ್ನುವುದನ್ನು ನಾವು ಮರೆಯುವಂತಿಲ್ಲ. ದೊಡ್ಡ ಕಟ್ಟಡಗಳಲ್ಲಿ ಕೆಲಸದವರಿಗೆಂದೇ ಮೀಸಲಾದ ಕೊಳಕು ಲಿಫ್ಟುಗಳು, ವಿಮಾನಾಶ್ರಯದಲ್ಲಿ ಕಾರಿನ ಡ್ರೈವರುಗಳಿಗೇ ಮೀಸಲಾದ ಸಸ್ತಾ ತಿಂಡಿಯ ಜಾಗ, ಬ್ಯಾಂಕಿನ ಮಹಾಪ್ರಬಂಧಕನ ಡ್ರೈವರು ಎರಡು ರೂಪಾಯಿ ಬಡ್ಡಿಗೆ ಪಡೆಯುವ ಬಡ್ಡಿವ್ಯಾಪಾರಿಯ ಸಾಲ, ಸರಕಾರಿ ಶಾಲೆಯೆದುರಿನಲ್ಲಿ ಕಾಣುವ ತಳ್ಳುಗಾಡಿಯ ತಿಂಡಿ ಮಾರಾಟಗಾರರು, ದರ್ಶಿನಿಗಳಲ್ಲಿ ನಮ್ಮ ಎಂಜಲು ಪ್ಲೇಟುಗಳನ್ನು ಒಯ್ಯುವ ಪುಟ್ಟ ಹುಡುಗರು, ನಮ್ಮ ಮಾಹಿತಿಗೂ-ಪ್ರಣಾಳಿಕೆಗಳಿಗೂ ಸೇರುವುದಿಲ್ಲ. ಹೀಗಾಗಿಯೇ ದೊಡ್ಡ ಮೆಟ್ರೋ ನಿರ್ಮಾಣ ಮಾಡಿದಾಗ ಅದರಲ್ಲಿ ಕೂಲಿ ಕೆಲಸಗಾರರಿಗೆ ಕೆಲಸ - ಆದಾಯ ದೊರೆಯುವುದೆಂಬ ಮಹಾ ಮಾಹಿತಿಯಲ್ಲಿ ನಾವು ನಮ್ಮ ಪಾಪಗಳನ್ನು ತೊಳೆದುಕೊಂಡು ಬಿಡುತ್ತೇವೆ.

ಗಾಂಧೀಜಿ ಹೇಳಿದ್ದರು "ನಿಮಗೆ ನಿಮ್ಮ ಯೋಚನೆಯೇ ಹೆಚ್ಚಾಗಿ, ಅನುಮಾನಗಳು ಬಂದಾಗ ಈ ಪರೀಕ್ಷೆಗೆ ನಿಮ್ಮನ್ನು ಒಡ್ಡಿಕೊಳ್ಳಿ: ನಿಮಗೆ ತಿಳಿದಿರುವ ಅತ್ಯಂತ ದೀನ ಮನುಷ್ಯನ ಮುಖವನ್ನು ನೆನಪು ಮಾಡಿಕೊಳ್ಳಿ. ನೀವು ಮಾಡಬೇಕಾದ ಕಾರ್ಯದಿಂದ ಆ ಮನುಷ್ಯನಿಗೇನಾದರೋ ಉಪಯೋಗವೋ ನೋಡಿ. ನಿಮ್ಮ ಕೆಲಸದಿಂದ ಆತನಿಗೆ ತನ್ನ ವಿಧಿಯಮೇಲೆ ತುಸುವಾದರೂ ಹಿಡಿತ ಸಿಗಬಹುದೇ ಯೋಚಿಸಿ. ಇದರಿಂದ ಆತನ ದೈಹಿಕ-ಆಧ್ಯಾತ್ಮಿಕ ಬಡತನದಿಂದ ಮುಕ್ತಿ ಬರುವುದೇ ಯೋಚಿಸಿ. ಆಗ ನಿಮ್ಮ ಅನುಮಾನಗಳು ಕರಗಿ ಹೋಗುವುದನ್ನ ನೀವೇ ಕಾಣುತ್ತೀರಿ"

ನಾವು ಮಾಹಿತಿಯನ್ನು ಒಂದು ಸಂಖ್ಯೆ ಎಂದು ತಿಳಿದ ದಿನ ಅದರ ಬಗ್ಗೆ ಅಸಡ್ಡೆಯಿಂದ, ಬೇಜವಾಬ್ದಾರಿಯಿಂದ ವರ್ತಿಸುತ್ತೇವೆ. ಆದರೆ ದೇಶದ 120 ಕೋಟಿ ಜನಸಂಖ್ಯೆ ಬರೇ ಸಂಖ್ಯೆಯಾಗಿ ಕಾಣದೇ, ವ್ಯಕ್ತಿಯಾಗಿ, ಮಗನಾಗಿ, ಗಂಡನಾಗಿ, ತಂಗಿಯಾಗಿ, ತಾಯಿಯಾಗಿ ಕಂಡಾಗ ಆ ಸಂಖ್ಯೆಯಲ್ಲಿನ ತಲ್ಲಣಗಳೂ – ಅದರಿಂದ ಹೊಮ್ಮಬೇಕಾದ ಮಾನವೀಯತೆಯೂ, ಪ್ರಣಾಳಿಕೆಗಳೂ, ಯೋಜನೆಗಳೂ ಕಾಣಸಿಗುತ್ತವೆ. ಆದರೆ ನಮಗೆ ಸಂಖ್ಯೆಗಳಲ್ಲಿಯೂ, ಸಂಖ್ಯೆಗಳನ್ನು ಒಟ್ಟುಗೂಡಿಸುವ ಮುಖಗಳಲ್ಲಿಯೂ ಹೆಚ್ಚಿನ ಆಸಕ್ತಿಯಿರುವಂತೆ ಕಾಣಿಸುತ್ತಿಲ್ಲ. ನಾವು ಜನರನ್ನೂ ಮಾಹಿತಿಯನ್ನೂ ಇನ್ನಷ್ಟು ಗೌರವಿಸುವ ಕಾಲ ಬರಬೇಕೇನೋ.

ಮಂಗಳವಾರ, 12 ಮಾರ್ಚ್ 2013



No comments:

Post a Comment