Saturday, March 30, 2013

ವಿಕಾಸ ವಿತ್ತೀಯ ಸಂಸ್ಥೆಗಳೂ, ವ್ಯಾಪಾರಿ ಬ್ಯಾಂಕುಗಳೂ...

ಅಹಮದಾಬಾದಿನ ಮಹಿಳಾ ಸೇವಾ ಬ್ಯಾಂಕಿನಲ್ಲಿ ನೌಕರರು, ಗ್ರಾಹಕರು, ಶೇರುದಾರರು, ಪಾಲಕವರ್ಗದವರು ಎಲ್ಲರೂ ಮಹಿಳೆಯರೇ. ಸೇವಾ ಬ್ಯಾಂಕಿರುವುದು ಆಧುನಿಕ ಕಟ್ಟಡದಲ್ಲಿ. ಪಕ್ಕದಲ್ಲಿ ಬ್ಯಾಂಕ್ ನ್ಯಾಷನಲ್ ದ ಪಾರಿಬಾ ಎಂಬ ವಿದೇಶೀ ಬ್ಯಾಂಕಿನ ಚಮಕ್ ದಾರ್ ಕಾರ್ಯಾಲಯವಿದೆ. ಸೇವಾ ಬ್ಯಾಂಕಿನ ಗ್ರಾಹಕರು ತಳ್ಳುಗಾಡಿಯಲ್ಲಿ, ರಸ್ತೆಬದಿಯಲ್ಲಿ ತರಕಾರಿ ಮಾರುವವರು, ಚಿಂದಿ ವ್ಯಾಪಾರದವರು, ಹರಕಲು ಬಟ್ಟೆ ಧರಿಸಿರುವವರು. ಇವರಿಗೆ ಈ ಕಟ್ಟಡಕ್ಕೆ ಬರಲು ಮುಜುಗರವಾಗುತ್ತದೆ. ಬ್ಯಾಂಕ್ ಪಾರಿಬಾದ ಸೆಂಟೇರಿಸಿ ಪ್ಯಾಂಟೇರಿಸಿ ಕಂಠಕ್ಕೆ ಟೈ ಕಟ್ಟಿದ ಗ್ರಾಹಕರ ನೋಟವನ್ನು ತಪ್ಪಿಸಲು, ಮೊದಲ ಮಹಡಿಯ ಹಿಂಬದಿಯಿಂದ ಒಂದು ಪ್ರತ್ಯೇಕ ದ್ವಾರವನ್ನು ಮಾಡಿಸಿಕೊಂಡು ತಮಗೆ ಆಪ್ಯಾಯಮಾನವಾಗುವ ರೀತಿಯಲ್ಲಿ ಕಾರ್ಯಾಲಯವನ್ನು ರೂಪಿಸಿಕೊಂಡಿದ್ದಾರೆ. ಬ್ಯಾಂಕನ್ನು ಹೊಕ್ಕರೆ ಗಿಜಿಗಿಜಿ ಜನ, ಮಕ್ಕಳು, ಕುರುಕಲು ತಿಂಡಿಯ ವ್ಯಾಪಾರ. ಸಂತೆಯ ಅನುಭವವನ್ನು ಈ ಮಹಿಳೆಯರು ಕೇಳಿ ಮಾಡಿಸಿಕೊಂಡಿದ್ದಾರೆ.

ಆ ಕಟ್ಟಡದಲ್ಲಿ ಜಾತಿವ್ಯವಸ್ಥೆ ಕಾಣಿಸುತ್ತಿದೆ. ಆದರಿದನ್ನು ತಾರತಮ್ಯವಲ್ಲಿ, ಅನುಕೂಲದ ಏರ್ಪಾಟೆಂದು ಅವರು ಗ್ರಹಿಸಿದ್ದಾರೆ. ಬಡ ಮಹಿಳೆಯರನ್ನು ವಿತ್ತೀಯ ಕ್ಷೇತ್ರಕ್ಕೆ ಆಹ್ವಾನಿಸುವ ಈ ಏರ್ಪಾಟು ಸಮಂಜಸವೇ. ತಮ್ಮ ಬ್ಯಾಂಕಿನ ಸೇವೆಗಳನ್ನು ಪಡೆಯುವಷ್ಟೇ ಆತ್ಮವಿಶ್ವಾಸದಿಂದ ಇತರೆ ಬ್ಯಾಂಕುಗಳ, ಇತರೆ ಸೇವೆಗಳನ್ನೂ ಮುಂದೆ ಪಡೆಯುವದರಲ್ಲಿ ಆರ್ಥಿಕ ಒಳಗೊಳ್ಳುವಿಕೆಯ ಸಾಧನೆಯಿದೆ.

ಈ ಬಾರಿಯ ಬಜೆಟ್ಟಿನಲ್ಲಿ ಮಹಿಳೆಯರ ಬ್ಯಾಂಕನ್ನು ಸ್ಥಾಪಿಸುವ ಘೋಷಣೆಯಿದೆ. ಅದರ ರೂಪುರೇಷೆ ತಯಾರಾಗುತ್ತಿದೆ. 1,000 ಕೋಟಿ ರೂಪಾಯಿಯ ಹೂಡಿಕೆಯ ವ್ಯಾಪಾರೀ ಬ್ಯಾಂಕಾಗಿ ಅದನ್ನು ಸ್ಥಾಪಿಸಲಾಗುತ್ತಿದೆ. ಮಿಕ್ಕ ವ್ಯಾಪಾರೀ ಬ್ಯಾಂಕುಗಳಂತೆಯೇ ಇದೂ ಶಾಖೆಗಳನ್ನು ತೆರೆದು ನಗರ-ಗ್ರಾಮ ಪ್ರಾಂತದಲ್ಲಿ ವ್ಯಾಪಾರ ಮಾಡುತ್ತದೆ, ಅದರ ಗ್ರಾಹಕರು (ಮತ್ತು ಉದ್ಯೋಗಿಗಳು?) ಬರೇ ಮಹಿಳೆಯರೇ ಆಗಿರುತ್ತಾರೆ. ಇದು ನಾವು ಹಿಂದೆ ವಿವರಿಸಿದ ಸೇವಾ ಬ್ಯಾಂಕಿನಂತೆ (ಆದರೆ ಸಂತೆಯ ವಾತಾವರಣವಿಲ್ಲದೆಯೇ) ಇರುತ್ತದೆ. ಈ ಬ್ಯಾಂಕನ್ನು ಸರಕಾರವೇಕೆ ಸ್ಥಾಪಿಸಬೇಕು?

ಕಳೆದ ವರ್ಷಾಂತ್ಯಕ್ಕೆ ನಮ್ಮ ಬ್ಯಾಂಕುಗಳು ಸುಮಾರು 45,000 ನಗರೇತರ ಶಾಖೆಗಳೂ ಸೇರಿದಂತೆ ಒಟ್ಟು 80,000ಕ್ಕೂ ಹೆಚ್ಚಿನ ಶಾಖೆಗಳ ಮೂಲಕ ಕೊಟ್ಟಿದ್ದ ಒಟ್ಟು ಸಾಲ ಸುಮಾರು 50 ಲಕ್ಷ ಕೋಟಿ ರೂಪಾಯಿಗಳು. ಒಂದು ವರ್ಷದಲ್ಲಿ ಅಷ್ಟೂ ಬ್ಯಾಂಕುಗಳು ಸರಾಸರಿ 160 ಶಾಖೆಗಳ ಲೆಕ್ಕದಲ್ಲಿ ಸುಮಾರು 7,000 ಶಾಖೆಗಳನ್ನು ನಮ್ಮ ಬ್ಯಾಂಕಿಂಗ್ ವ್ಯವಸ್ಥೆಗೆ ಸೇರಿಸಿದ್ದವು. ಈ ಅಂಕಿಯ ಮುಂದೆ, ಈಗ ರೂ.1,000 ಕೋಟಿ ಹೂಡಿಕೆ ಹೊಂದಿರುವ ಹೊಸ ಮಹಿಳೆಯರ ಬ್ಯಾಂಕನ್ನು ಸರಕಾರ ಸ್ಥಾಪಿಸುತ್ತಿದೆ. ಈ ಹೂಡಿಕೆಯಾಧಾರದಿಂದ ಮೊದಲಿಗೆ ಸುಮಾರು ರೂ. 8,000 ಕೋಟಿಯಷ್ಟು ಠೇವಣಿಯನ್ನು ಸಂಗ್ರಹಿಸಬಹುದು. ಸುಮಾರು ರೂ. 5,000 ಕೋಟಿಯಷ್ಟು ಸಾಲವನ್ನು ಮಹಿಳೆಯರಿಗೆ ನೀಡಬಹುದು. ಇದಕ್ಕೂ ಸಮಯ ಬೇಕು. ಈ ಬ್ಯಾಂಕು ಎಷ್ಟು ಶಾಖೆಗಳನ್ನು ತೆರೆಯಲು ಸಾಧ್ಯ? ನಮ್ಮ ಈ ದೇಶವೆಂಬ ಬೃಹತ್ ರಾವಣಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯನ್ನು ಯಾಕೆ ವಿತ್ತ ಮಂತ್ರಿಗಳು ಉಣಿಸುತ್ತಿದ್ದಾರೆ ಎನ್ನುವುದು ಚಿದಂಬರ ರಹಸ್ಯವಾಗಿದೆ.

ಮಹಿಳೆಯರಿಗೆ ಹೆಚ್ಚಿನ ವಿತ್ತೀಯ ಸೌಲಭ್ಯಗಳನ್ನು ಒದಗಿಸಬೇಕೆನ್ನುವುದು ಸರಿಯಾದ ವಿಚಾರವೇ. ಆದರೆ ಈ ಕೆಲಸವನ್ನು ಸಾಧಿಸುವ ಮಾರ್ಗವೇನಿತ್ತು? ಕೃಷಿಯ ಉದಾಹರಣೆಯನ್ನು ತೆಗೆದುಕೊಳ್ಳೋಣ. ಬ್ಯಾಂಕುಗಳು ನೀಡುವ ಸಾಲದಲ್ಲಿ 18 ಪ್ರತಿಶತ ಕೃಷಿಗೆ ಕಡ್ಡಾಯವಾಗಿ ನೀಡಬೇಕೆನ್ನುವ ನಿಯಮ ಅನೇಕ ವರ್ಷಗಳಿಂದ ಇದೆ. ಈ ನಿಯಮೋಲ್ಲಂಘನೆಯಾದಲ್ಲಿ, ಇದ್ದ ಗುರಿಗೂ ಸಾಧಿಸಿದ ಮೊತ್ತಕ್ಕೂ ಇರುವ ಅಂತರವನ್ನು ಗ್ರಾಮೀಣ ಮೂಲಭೂತ ಸೌಕರ್ಯ ನಿಧಿಗೆ ಸಂದಾಯ ಮಾಡಿ, ಅದರಿಂದ ಗ್ರಾಮೀಣ ಸವಲತ್ತುಗಳನ್ನು – ರಸ್ತೆ, ಕೆರೆ, ಕಟ್ಟಡ, ಅಣೆಕಟ್ಟು, ಇತ್ಯಾದಿಗಳನ್ನು ಉತ್ತಮಪಡಿಸಲು ಉಪಯೋಗಿಸಬೇಕು. ಕೃಷಿಗೆಂದೇ ಪ್ರತ್ಯೇಕ ವ್ಯಾಪಾರಿ ಬ್ಯಾಂಕನ್ನು ಏರ್ಪಾಟು ಮಾಡಿದ್ದರೆ ಈಗ ಬ್ಯಾಂಕುಗಳು ಕೃಷಿಗೆ ವಿತರಿಸುತ್ತಿರುವ 6 ಲಕ್ಷ ಕೋಟಿ ರೂಪಾಯಿಗಳ ವ್ಯಾಪಾರವನ್ನು ಆ ಪ್ರತ್ಯೇಕ ವ್ಯಾಪಾರಿ ಬ್ಯಾಂಕು ಸಾಧಿಸಲಾಗುತ್ತಿತ್ತೇ? ಎಲ್ಲಾ ಕ್ಷೇತ್ರಗಳನ್ನೂ ಒಳಗೊಂಡೂ ಇಷ್ಟು ಸಾಲವನ್ನು ನೀಡಿರುವುದು ಭಾರತೀಯ ಸ್ಟೇಟ್ ಬ್ಯಾಂಕು ಒಂದೇ.

ಸಣ್ಣ ಕೈಗರಿಕಾ ಅಭಿವೃದ್ಧಿ ಬ್ಯಾಂಕು (ಸಿಡ್ಬಿ), ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕುಗಳಂತಹ ವಿಶೇಷ ಬ್ಯಾಂಕುಗಳೂ ನಮ್ಮಲ್ಲಿವೆ. ಇವುಗಳನ್ನು ನಾವು ವಿಕಾಸಕ್ಕೇ ಮೀಸಲಾದ ವಿತ್ತೀಯ ಸಂಸ್ಥೆಗಳೆಂದು ಕರೆಯುತ್ತೇವೆ. ವಿತ್ತ ಮಂತ್ರಿಗಳು ಘೋಷಿಸಿರುವ ವಾಣಿಜ್ಯ ಬ್ಯಾಂಕಿಗೂ, ವಿಕಾಸ ವಿತ್ತೀಯ ಬ್ಯಾಂಕುಗಳಿಗೂ ವ್ಯತ್ಯಾಸಗಳಿವೆ. ವಾಣಿಜ್ಯ ಬ್ಯಾಂಕುಗಳು ಒಂಟಿಯಾಗಿ ನಿಂತು, ತಮ್ಮದೇ ರೀತಿಯಲ್ಲಿ ಕೆಲಸ ಮಾಡಿ ಸಾಧನೆಯನ್ನು ತೋರಿಸುತ್ತದೆ. ವಿಕಾಸ ವಿತ್ತೀಯ ಬ್ಯಾಂಕುಗಳು ಒಂದು ಕ್ಷೇತ್ರಕ್ಕಾಗಿ ಮೀಸಲಾಗಿದ್ದು ಮಿಕ್ಕ ಬ್ಯಾಂಕುಗಳ ಮೇಲೆ ಸವಾರಿ ಮಾಡಿ ತಮ್ಮ ಉದ್ದೇಶವನ್ನು ಸಾಧಿಸುತ್ತವೆ.

ಸಣ್ಣ ಹಾಗೂ ಲಘು ಕೈಗಾರಿಕೆಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಿಡ್ಬಿ, ಸಣ್ಣ ಕೈಗಾರಿಕೆಗಳ ನೀತಿ ರೂಪಿಸಲು ನೆರವಾಗುವುದು; ಬ್ಯಾಂಕುಗಳು ಸಣ್ಣಕೈಗಾರಿಕೆಗಳೊಂದಿಗೆ ಧೈರ್ಯದಿಂದ ಕೆಲಸ ಮಾಡಲು ಬೇಕಾದ ವಾತಾವರಣ ಸೃಷ್ಟಿಮಾಡುವುದು; ಲಘು ಉದ್ಯಮಕ್ಕೆ ನೀಡಿದ ಸಾಲಕ್ಕೆ ರೀಫೈನಾನ್ಸ್ ನೀಡುವುದು; ಗ್ಯಾರೆಂಟಿ ನೀಡುವುದು; ಆ ಸಂಸ್ಥೆಗಳ ವಿತ್ತೀಯ ಚರಿತ್ರೆಯನ್ನು ದಾಖಲಿಸುವುದು; ಅವುಗಳ ಆರ್ಥಿಕ ತಾಕತ್ತಿನ ವರ್ಗೀಕರಣ ನೀಡುವುದು. ಈ ಎಲ್ಲವನ್ನೂ ಸಿಡ್ಬಿ ಮಾಡಿದೆ. ಬ್ಯಾಂಕುಗಳು ಕೆಲಸ ಮಾಡಲು ಹಿಂಜರಿಯುವ ಕ್ಷೇತ್ರಗಳಲ್ಲಿ ನೇರವಾಗಿ ಸಾಲ ಮತ್ತು ಇತರೆ ಸೌಲಭ್ಯಗಳನ್ನು ನೀಡಿ ವಿತ್ತೀಯ ಸೇವೆಗಳನ್ನೊದಗಿಸಲು ಅನುವಾದ ವಾತಾವರಣವನ್ನೂ ಉಂಟುಮಾಡಿದೆ. ವಾಣಿಜ್ಯ ಬ್ಯಾಂಕುಗಳಿಗೆ ಒಂದು ಹೊಸ ಕ್ಷೇತ್ರವನ್ನಾಯ್ದು ಈ ಎಲ್ಲವನ್ನೂ ಮಾಡುವ ವ್ಯವಧಾನವಾಗಲೀ, ಆಸಕ್ತಿಯಾಗಲೀ ಇರುವುದಿಲ್ಲ, ಆದರೆ ಮಾರುಕಟ್ಟೆಯನ್ನು ತಯಾರಿಸಿಕೊಟ್ಟರೆ ಅಲ್ಲಿ ವ್ಯಾಪಾರ ಮಾಡಲು ಬ್ಯಾಂಕುಗಳು ಸಿದ್ಧವಾಗಿರುತ್ತವೆ.

ಮಹಿಳಾ ಬ್ಯಾಂಕನ್ನು ವಿಕಾಸ ವಿತ್ತೀಯ ಸಂಸ್ಥೆಯಾಗಿ ಏರ್ಪಡಿಸಬಹುದಿತ್ತು. ಇದಕ್ಕೆ ಕಾಲವೂ-ಸಂದರ್ಭವೂ ಸಮರ್ಪಕವಾಗಿದೆ. 1980ರ ದಶಕದಿಂದ ನಿಧಾನವಾಗಿ ಬೆಳೆದು ಬಂದಿರುವ ಮಹಿಳಾ ಸ್ವಸಹಾಯ ಗುಂಪುಗಳ ಆಯೋಜನೆಯಿಂದಾಗಿ ಗ್ರಾಮೀಣ ಪ್ರಾಂತದ ಮಹಿಳೆಯರು ವಿತ್ತೀಯ ಕ್ಷೇತ್ರದಲ್ಲಿ ಪ್ರವೇಶಪಡೆದಿದ್ದಾರೆ. ಮಹಿಳೆಯರ ಉಳಿತಾಯ, ಲಘು ಸಾಲದ ರೂಪದಲ್ಲಿ ಮೊದಲಿಗೆ ತಮ್ಮ-ತಮ್ಮಲ್ಲೇ ವ್ಯವಹರಿಸಿ, ಬೆಳೆದು ಬ್ಯಾಂಕುಗಳ ಜೊತೆಗೆ ಬೆಸೆದು ನಿಂತಿವೆ. ಈ ಕ್ಷೇತ್ರದಲ್ಲಿ ನಮ್ಮ ದೇಶಕ್ಕೆ ಈಗ ಇಪ್ಪತ್ತೈದು ವರ್ಷಗಳ ಅನುಭವವಿದೆ.

ಪ್ರಮುಖವಾಗಿ ಸ್ವಸಹಾಯ ಗುಂಪುಗಳ ಕ್ರಾಂತಿಯಾಗಿರುವುದು ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ. ಈಗ ಇದನ್ನೇ ಕೇಂದ್ರವಾಗಿಟ್ಟುಕೊಂಡು ದೊಡ್ಡ ನಿಟ್ಟಿನಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಧಿ ಮಿಷನ್ ಕಾರ್ಯಕ್ರಮದಡಿ ಇಡೀ ದೇಶದಲ್ಲಿಯೇ ವೇಗವಾಗಿ ಹಬ್ಬಿಸಬೇಕೆನ್ನುವುದು ಕೇಂದ್ರ ಸರಕಾರದ ಯೋಜನೆ. ಸ್ವಸಹಾಯ ಗುಂಪುಗಳ ಈ ಯೋಜನೆಯಡಿ ಮಹಿಳೆಯರು ಆರ್ಥಿಕ ಸ್ವಾತಂತ್ರವನ್ನು ಪಡೆಯಬೇಕೆನ್ನುವುದು ಈ ಕಾರ್ಯಕ್ರಮದ ಆಶಯವಾಗಿದೆ. ಉತ್ತರ, ಪೂರ್ವ, ಪೂರ್ವೋತ್ತರ ಪ್ರಾಂತಗಳಲ್ಲಿರುವ ಮಹಿಳೆಯರನ್ನು ವಿತ್ತೀಯ ವ್ಯವಸ್ಥೆಯಲ್ಲಿ ಸೇರಿಸಬೇಕಾದ ಅವಶ್ಯಕತೆಯಿದೆ. ಈ ವ್ಯವಸ್ಥೆ ಗ್ರಾಮಮಟ್ಟದಲ್ಲಿ ಆದಷ್ಟೂ ಒಳ್ಳೆಯದು. ಹೀಗಾಗಿ ವ್ಯಾಪಾರೀ ಬ್ಯಾಂಕುಗಳ 80,000 (ಹಾಗೂ ಗ್ರಾಮೀಣ ಪ್ರಾಂತದಲ್ಲಿರುವ 45000) ಶಾಖೆಗಳನ್ನು ಈ ಕಾರ್ಯಕ್ರಮದಲ್ಲಿ ಒಳಪಡಿಸುವ ಯೋಜನೆಯನ್ನು ಸರಕಾರ ಯೋಚಿಸ ಬೇಕಿತ್ತು. ವ್ಯಾಪಾರೀ ಬ್ಯಾಂಕುಗಳು ಮಹಿಳೆಯರನ್ನು ಯಾಕೆ ಒಳಗೊಳ್ಳುವುದಿಲ್ಲ ಎನ್ನುವ ಪ್ರಶ್ನೆಗೆ ಉತ್ತರವನ್ನು ಪಡಯಲೂ ಈ ವಿಕಾಸ ವಿತ್ತೀಯ ಸಂಸ್ಥೆ ಕೆಲಸ ಮಾಡಬಹುದಿತ್ತು.

ಹಾಗಾದರೆ ಪ್ರತ್ಯೇಕ ಮಹಿಳಾ ಬ್ಯಾಂಕುಗಳಿಂದ ಪ್ರಯೋಜನವಿಲ್ಲವೇ? ಸೇವಾ ಬ್ಯಾಂಕು ಅಥವಾ ಚೇತನಾ ಸಿನ್ಹಾ ನಡೆಸುವ ಮನ್ ದೇಶಿ ಮಹಿಳಾ ಬ್ಯಾಂಕು ಎರಡೂ ಉತ್ತಮವಾಗಿಯೇ ನಡೆಯುತ್ತಿವೆ. ಅವುಗಳಿಂದ ಬಡಮಹಿಳೆಯರ ಆತ್ಮವಿಶ್ವಾಸ ಬೆಳೆದಿದೆ. ಆದರೆ ಸರಕಾರ ದೊಡ್ಡ ಯೋಜನೆಯಡಿಯಲ್ಲಿ ಮಹಿಳೆಯರನ್ನು ವಿತ್ತೀಯ ಕ್ಷೇತ್ರದಲ್ಲಿ ಒಳಗೊಳ್ಳುವ ಮಾತನಾಡುವಾಗ ಆ ಯೋಜನೆ ಈ ಎರಡೂ ಸಹಕಾರಿ ಬ್ಯಾಂಕುಗಳಿಗಿಂತ ಭಿನ್ನವಾಗಿರಬೇಕಾಗುತ್ತದೆ.

ಹೇಗೆ ಪುರುಷರಿಗೆ ಪ್ರತ್ಯೇಕ ಬ್ಯಾಂಕಿನ ಅವಶ್ಯಕತೆಯಿಲ್ಲವೋ, ಹಾಗೆಯೇ ಮಹಿಳೆಯರಿಗೂ ಪ್ರತ್ಯೇಕ ಬ್ಯಾಂಕಿನ ಅವಶ್ಯಕತೆ ಇಲ್ಲದಂತೆ ಮಾಡಬೇಕು. ಪ್ರತ್ಯೇಕ ವಾಣಿಜ್ಯ ಬ್ಯಾಂಕಿನ ಮೂಲಕ ಸುಮಾರು 5000 ಕೋಟಿ ಧನಸಹಾಯದ ಏರ್ಪಾಟು ಮಾಡುವುದಕ್ಕೆ ಬದಲಾಗಿ ಕಡ್ಡಾಯವಾಗಿ ಎಲ್ಲಾ ಬ್ಯಾಂಕುಗಳು 10 ಪ್ರತಿಶತ ಬ್ಯಾಂಕಿಂಗ್ ಸೇವೆಗಳು ಮಹಿಳಾಕೇಂದ್ರಿತವಾಗಿಬೇಕೆಂಬ ನಿಯಮವನ್ನು ಹೊರಡಿಸಿ, 5 ಲಕ್ಷ ಕೋಟಿಯ ವಿತ್ತೀಯ ಸೇವೆಯನ್ನು ಒದಗಿಸಲು ಬ್ಯಾಂಕುಗಳನ್ನು ಪ್ರೇರೇಪಿಸುವ ವಿಕಾಸ ವಿತ್ತೀಯ ಸಂಸ್ಥೆಯನ್ನು ಸರಕಾರ ಸ್ಥಾಪಿಸಬೇಕಿತ್ತು. ಇಂದು ವಿಕಾಸದ ಚೌಕಟ್ಟಿನಲ್ಲಿ ಮಹಿಳಾ ಬ್ಯಾಂಕನ್ನು ಪ್ರಾರಂಭಿಸಿದರೆ ಹತ್ತಾರು ವರ್ಷಗಳ ನಂತರ ಇದರ ಪ್ರತ್ಯೇಕತೆಯ ಅವಶ್ಯಕತೆ ಇಲ್ಲವಾಗಬಹುದಿತ್ತು. ಆ ಆಶಯದತ್ತ ನಾವು ಮುಖಮಾಡಿದರೆ ವಿತ್ತ ಮಂತ್ರಿಗಳ ಈ ಮಹಿಳಾ ಬ್ಯಾಂಕಿನ ಕುಹಕವನ್ನು ಬೇಸರದಿಂದಲೇ ನೋಡಬೇಕಾಗುತ್ತದೆ.  

ಬುಧವಾರ, 27 ಮಾರ್ಚ್ 2013



No comments:

Post a Comment