ಈಚೆಗೆ ನಡೆದ ಒಂದು
ಸಂವಾದದಲ್ಲಿ ದೇಶದ ಸಮಸ್ಯೆಗಳನ್ನು ಚರ್ಚಿಸುತ್ತಾ ಮಹಾಶಯರೊಬ್ಬರು ಕೇಂದ್ರ ಸರಕಾರದ ಮೇಲೆ
ಮುಗಿಬಿದ್ದು ಅದರ ಯೋಜನೆಗಳೆಲ್ಲಾ ವಿಫಲವಾಗಿವೆ, ಟಾಪ್-ಡೌನ್ ಬಿಟ್ಟು ಬಾಟಮ್-ಅಪ್ ರೀತಿಯಲ್ಲಿ
ನಾವು ಕೆಲಸ ಮಾಡಿದಾಗಲೇ ನಮ್ಮ ದೇಶದ ಶ್ರೀಸಾಮಾನ್ಯರ ಸಮಸ್ಯೆಗಳು ಬಗೆಹರಿಯುತ್ತವೆ ಎಂದು
ಹೇಳಿದರು. ತಮ್ಮ ರಾಜಕೀಯ ಅರಂಗೇಟ್ರಂ ಸೂಚಿಸುತ್ತಾ "ಜನರನ್ನು ಒಳಗೊಂಡ" ಯೋಜನೆಗಳನ್ನು ತಮ್ಮ ಪಕ್ಷ
ತಯಾರಿಸುವುದೆಂದು ಕೇಜ್ರೀವಾಲ್ ಕೂಡಾ ಹೇಳಿದ್ದರು. ಗುಜರಾತಿನಿಂದ ವಸೂಲಾಗುವ ತೆರಿಗೆಯನ್ನು
ಗುಜರಾತಿಗೇ ನೀಡಿಬಿಟ್ಟರೆ ಕೇಂದ್ರದ ಸಹಾಯವೇ ಬೇಡ ಎಂದು ನರೇಂದ್ರ ಮೋದಿ ಹೇಳಿದ್ದರು. ಬಾಳಾ
ಠಾಕ್ರೆಯಂಥಹ ಸ್ಥಳೀಯ ನಾಯಕರು ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುವುದಕ್ಕೂ ಸ್ಥಳೀಯ ಸಮಸ್ಯೆಗಳನ್ನು
ರಾಷ್ಟ್ರೀಕರಿಸುವುದಕ್ಕೂ ಕಾರಣ ಈ ಕೇಂದ್ರೀಕರಣ-ವಿಕೇಂದ್ರೀಕರಣದ ಅಸಮತೋಲನದ ಕಷ್ಟದ ವಿಚಾರವೇ
ಆಗಿರಬಹುದು.
ನಮ್ಮಂತಹ ಬೃಹತ್ ದೇಶದ
ಕೇಂದ್ರ ಸರಕಾರ ಸ್ಥಳೀಯತೆಯನ್ನೂ ರಾಷ್ಟ್ರೀಯತೆನ್ನೂ ಪರಿಗಣಿಸಬೇಕಾದ ಕಷ್ಟದ ಪರಿಸ್ಥಿತಿಯಲ್ಲಿ ಇದೆ.
ವಿಕೇಂದ್ರೀಕರಣ ಎಲ್ಲಿಯವರೆಗಿರಬೇಕು? ಅದು ಕೇವಲ ಯೋಜನೆಗಳ
ಅನುಷ್ಠಾನಕ್ಕೆ ಸೀಮೀತವಾದ ಪ್ರಶ್ನೆಯೇ, ಅಥವಾ ಅದಕ್ಕೆ ಬೇಕಾದ ಆರ್ಥಿಕ ಸಂಪನ್ಮೂಲಗಳ ವಿಷಯಕ್ಕೂ
ವಿಕೇಂದ್ರೀಕರಣವನ್ನು ಒಯ್ಯುವುದು ಸಾಧ್ಯವೇ? ಸ್ಥಳೀಯ, ರಾಜ್ಯದ,
ಕೇಂದ್ರದ ತೆರಿಗೆ ಮತ್ತು ಸಂಪನ್ಮೂಲಗಳನ್ನು ಹೇಗೆ ಹಂಚಬೇಕೆನ್ನುವ ಕಷ್ಟದ ಫಾರ್ಮುಲಾದ ಮೇಲೆ
ಕೇಂದ್ರದ ಯೋಜನೆಗಳೂ ವಿಕೇಂದ್ರೀಕರಣದ ವಿಚಾರಗಳೂ ಇವೆ.
ವಿಕೇಂದ್ರೀಕರಣದ ಅತಿರೇಕ
ರಾಷ್ಟ್ರೀಯ ಸಮಸ್ಯೆಗಳಿಗೆ ಸ್ಥಳೀಯ ಪರಿಹಾರಗಳತ್ತ ನಮ್ಮನ್ನಟ್ಟುತ್ತದೆ. ರೈತನೊಬ್ಬ ತನ್ನ ಜಮೀನಿನ
ನೀರಾವರಿಗೆ ವಿಕೇಂದ್ರೀಕೃತ ಪರಿಹಾರ ಹುಡುಕಿದರೆ ಅವನು ಕೊಳವೆಬಾವಿಯನ್ನು ತೋಡುತ್ತಾನೆ. ಆದರೆ
ಪರಿಸರದ ಹಿತದೃಷ್ಟಿಯಿಂದ, ಗ್ರಾಮದ-ಪ್ರಾಂತದ ಸಂಪನ್ಮೂಲಗಳನ್ನು ಪರಿಗಣಿಸಿದಾಗ, ಕೊಳವೆಬಾವಿಗಿಂತ
ಉತ್ತಮ ಉಪಾಯ ಸಿಗಬಹುದು. ಹೀಗೆಂದು ಮನೆಯ ಮಟ್ಟದ ವಿಕೇಂದ್ರೀಕರಣ ಬಿಟ್ಟು ಗ್ರಾಮದ ಮಟ್ಟಿಗಿನ
ವಿಕೇಂದ್ರೀಕರಣದ ಸೂತ್ರಗಳನ್ನು ಪರೀಕ್ಷಿಸಬಹುದೇ?
![](https://blogger.googleusercontent.com/img/b/R29vZ2xl/AVvXsEh7_SOBo9VvPdEHhS6EBUx5ELR_06Lg3-Y59hwOxQGTyp67L_YBLbeOe1FLVipmYKibNHfFnJxvQjo3YdKctQGj3myDDkI-buo5yaxVikG7ppkzrNYGdNNVm7QCcntVesiwHZPXBfKsS74/s1600/td2.jpg)
![](https://blogger.googleusercontent.com/img/b/R29vZ2xl/AVvXsEj4DPBVcUBmbJUzjezPxOhClzIj1Or0C2Gk3zoRibMA91wy6yOSW4D8xo_e5s0A3irrC6CovsJogBjKrzAZYiXX0amWmnFIS07V_XMpdHNSPNDhU_uIFFjI9vzBeVw9JJzvC74_sfguM1s/s1600/td3.jpg)
ಹೀಗೆಂದು ಈಗ ನಮ್ಮ ದೇಶದ
ರಾಜಕೀಯ-ಆರ್ಥಿಕ ವ್ಯವಸ್ಥೆಯೇ ಅತ್ಯುತ್ತಮ ಎಂದು ಬಡಾಯಿ ಕೊಚ್ಚಿಕೊಳ್ಳುವುದಕ್ಕೂ ಸಾಧ್ಯವಿಲ್ಲ.
ನಾವು ಬಳಸಬೇಕಾದ ವಿಕೇಂದ್ರೀಕರಣದ ಸೂತ್ರಗಳ ಬಗ್ಗೆ ಸರ್ವಮತ ಸಮ್ಮತಿಯೂ ಇಲ್ಲ, ಸರಳ ಉಪಾಯವೂ
ಇಲ್ಲ. ಆದರೆ ಇದರಲ್ಲಿ ಆರ್ಥಿಕತೆಗೆ- ರಾಜಕೀಯಕ್ಕೆ ಸಂಬಂಧಿಸಿದ ಎರಡು ಮುಖ್ಯ ಅಂಶಗಳಿವೆ.
ನಾವು ಈಗ ನಡೆಸುತ್ತಿರುವ
ಆರ್ಥಿಕ ವ್ಯವಸ್ಥೆಯೇ ಅತೀ ಕೇಂದ್ರೀಕೃತವಾದದ್ದು. ಕೇಂದ್ರೀಕೃತ ಮಾರಾಟ ತೆರಿಗೆ ಮತ್ತು ಇತರೆ
ಸುಧಾರಣೆಗಳ ಚರ್ಚೆಯನ್ನು ಪರಿಗಣಿಸಿದರೆ ನಮ್ಮ ಆರ್ಥಿಕ ವ್ಯವಸ್ಥೆಯನ್ನು ಇನ್ನೂ ಹೆಚ್ಚು ಕೇಂದ್ರೀಕರಣದತ್ತ
ಒಯ್ಯುವ ಹುನ್ನಾರ ಕಾಣಿಸುತ್ತದೆ. ಇಂದಿನ ವ್ಯವಸ್ಥೆಯಲ್ಲಿ ಕೇಂದ್ರಕ್ಕೆ ಇರುವ ರಾಜಕೀಯ
ಶಕ್ತಿಗಿಂತ ಅನೇಕ ಪಟ್ಟು ಹೆಚ್ಚಿನ ಆರ್ಥಿಕ ಶಕ್ತಿಯಿದೆ. ನಾವು ಕಟ್ಟುವ ದಿನನಿತ್ಯದ ತೆರಿಗೆಗಳಾದ
ಕೇಂದ್ರೀಯ ಅಬಕಾರಿ ಮತ್ತು ಆದಾಯ ತೆರಿಗೆಗಳು ನೇರವಾಗಿ ಕೇಂದ್ರಕ್ಕೆ ಸಂದಾಯವಾಗುತ್ತದೆ.
ಹೀಗಾಗಿಯೇ ರಾಜ್ಯ ಸರಕಾರಗಳ ಬಜೆಟ್ಟಿಗಿಂತ ಬಹುಪಟ್ಟು ಹೆಚ್ಚು ಮಹತ್ವವು ಕೇಂದ್ರದ ಬಜೆಟ್ಟಿಗೆ ಇದೆ.
ಈ ಗಲಾಟೆಯಲ್ಲಿ ನಾವು ನಗರಪಾಲಿಕೆ-ಪಂಚಾಯ್ತಿಗಳ ಬಜೆಟ್ಟನ್ನು ಮರೆತೇ ಬಿಟ್ಟಿದ್ದೇವೆ. ಅವುಗಳ
ಆರ್ಥಿಕತೆಯನ್ನು ಕೇಂದ್ರೀಕೃತ ಬಜೆಟ್ಟಿನ ಅನುದಾನದ ಆಧಾದಲ್ಲಿ ನಡೆಸಿ ಆರ್ಥಿಕ ವಿಕೇಂದ್ರೀಕರಣಕ್ಕೆ
ತಿಲಾಂಜಲಿಯನ್ನತ್ತಿದ್ದೇವೆ. ಪಂಚಾಯ್ತಿಗಳಿಗೆ ಹೆಚ್ಚಿನ ಆರ್ಥಿಕ ಬಲವಿದ್ದಿದ್ದರೆ ಕನ್ನಡ
ಮಾಧ್ಯಮದ ಶಾಲೆಗಳನ್ನು ಮುಚ್ಚುವ ರಾಜ್ಯ ಸರಕಾರದ ಹುನ್ನಾರವನ್ನು ಸ್ಥಳೀಯ ರಾಜಕೀಯವೇ
ನಿರ್ವೀರ್ಯಗೊಳಿಸುತ್ತಿತ್ತು. ಸಬಲವಾದ ರಾಜ್ಯ ಸರಕಾರಗಳಾದ ಬಿಹಾರ, ಪಶ್ಚಿಮ ಬಂಗಾಲ ಕೇಂದ್ರ
ಸರಕಾರದ ವ್ಯವಹಾರಗಳಲ್ಲಿ ತಲೆ ಹಾಕುವುದೂ, ತಮ್ಮ ರಾಜ್ಯಗಳಿಗೆ ಪ್ರತ್ಯೇಕ ಪ್ಯಾಕೇಜುಗಳನ್ನು
ಕೇಳುವುದೂ, ಕೇಂದ್ರ ಮಂತ್ರಿಮಂಡಲದಲ್ಲಿ ಸ್ಥಾನಕ್ಕೆ ಹಾತೊರೆಯವುವುದೂ ಆರ್ಥಿಕ ವ್ಯವಸ್ಥೆಯ
ಕೇಂದ್ರೀಕರಣದ ಫಲವಾಗಿಯೇ ಇರಬಹುದು.
ಇನ್ನು ರಾಜಕೀಯದ ವಿಚಾರ.
ಇಂದಿರಾಗಾಂಧಿಯ ತದನಂತರ ದೇಶದ ರಾಜಕೀಯವು ವಿಕೇಂದ್ರೀಕರಣಗೊಳ್ಳುತ್ತಲೇ ಇದೆ. ತೆಲುಗು ದೇಶಂ,
ತೃಣಮೂಲ, ಬಿಜು ಜನತಾದಳ, ಶಿವಸೇನೆಯಂತಹ ರಾಜಕೀಯ ಶಕ್ತಿಗಳು ಉದ್ಭವವಾಗಿರುವುದೇ ಈ
ಆರ್ಥಿಕ-ರಾಜಕೀಯ ಶಕ್ತಿಯ ನಡುವಿನ ಅಸಮತೋಲನ ಫಲವಾಗಿಯೇ? ಮುಂಬಯಿ ನಗರದಿಂದ, ಗುಜರಾತ್
ರಾಜ್ಯದಿಂದ ವಸೂಲಾಗುವ ತೆರಿಗೆಯ ಮಟ್ಟವನ್ನು ಲೆಕ್ಕ ಕಟ್ಟಿ ಅದೇ ಪ್ರಮಾಣದಲ್ಲಿ ಆ ಪ್ರಾಂತಗಳಿಗೆ
ಕೇಂದ್ರದ ಸಂಪನ್ಮೂಲಗಳು ಹೋಗುವುದಿದ್ದರೆ ದೇಶದ ಬಜೆಟ್ಟಿನ ರೂಪುರೇಷೆಯೇ ಭಿನ್ನವಾಗಿ
ಕಾಣುತ್ತಿತ್ತು!
![](https://blogger.googleusercontent.com/img/b/R29vZ2xl/AVvXsEhycI6o7P89qrWYIH99AaHiCdtdNxkQjSTq1duyFrTC77HCU71ohoZ1nMLV1KSVmNIsY2a7IVAWNg3bRopGYXRIR1bNS3f5VbOdpSyWU0LfUNAStmJJM2_j4KnmSC78ug0sY6x470Q2j6k/s1600/td4.jpg)
ಕೇಂದ್ರ-ರಾಜ್ಯಗಳ ನಡುವಿನ
ಜಟಾಪಟಿಯೇ ಹೀಗಿದ್ದು, ರಾಜ್ಯಗಳೇ ಅಸಹಾಯಕ ಪರಿಸ್ಥಿತಿಯಲ್ಲಿರುವಂತೆ ಕಾಣುವಾಗ ಇನ್ನು ನಮ್ಮ ನಗರಪಾಲಿಕೆ-ಗ್ರಾಮಪಂಚಾಯ್ತಿಗಳ
ಗತಿಯೇನು? ಯಾವ ದಿನ ನಮ್ಮ ಜಿಲ್ಲಾ ಪಂಚಾಯ್ತಿಯ
ಅಧ್ಯಕ್ಷರ ಕಛೇರಿ ಮತ್ತು ಕಾರು ಜಿಲ್ಲಾಧಿಕಾರಿಯ ಕಛೇರಿ ಮತ್ತು ಕಾರಿಗಿಂತ ಉತ್ತಮವಾಗಿರುತ್ತದೋ,
ಯಾವದಿನ ಗ್ರಾಮ ಸರಪಂಚರ ಗತ್ತು ಕಂದಾಯ ವಿಭಾಗದ ಅಧಿಕಾರಿಯ ಗತ್ತಿಗಿಂತ ಜೋರಾಗಿರುತ್ತದೋ, ಆ ದಿನ
ನಮ್ಮ ಆರ್ಥಿಕ ವ್ಯವಸ್ಥೆಯೂ ರಾಜಕೀಯ ವ್ಯವಸ್ಥೆಯಷ್ಟೇ ವಿಕೇಂದ್ರೀಕೃತವಾಗಿದೆ ಎಂದು ನಾವು
ನಂಬಬಹುದು. ಆ ಪರಿಸ್ಥಿತಿ ಉಂಟಾದಾಗ: ಕೇಂದ್ರದ ಒಂದು
ಅಣೆಕಟ್ಟಿನ ಯೋಜನೆಗೆ ಇಡೀ ಗ್ರಾಮವೇ ಮುಳುಗಡೆಯಾಗುವುದಾದರೆ ಆ ಗ್ರಾಮಕ್ಕೆ- ಗ್ರಾಮದ ಜನರಿಗೆ
ಸಲ್ಲಬೇಕಾದ ಪರಿಹಾರದ ಬಗ್ಗೆ ಸರಪಂಚರ ಸಭೆ ನಡೆದು ಲೇನ್-ದೇನ್ ಗಳ ಇತ್ಯರ್ಥವಾಗುತ್ತದೆಯೇ ಹೊರತು
ಅದು ಹಕ್ಕುಗಳನ್ನು ಬೇಡಿಪಡೆಯುವ ಚಳುವಳಿಯ ರೂಪ ಪಡೆಯುವುದಿಲ್ಲ. ಆ ರೀತಿಯ ವಿಕೇಂದ್ರೀಕರಣವನ್ನು
ಕೈಗೊಳ್ಳುವ ಧೈರ್ಯ ನಮ್ಮ ರಾಜಕೀಯ ಪರಿಸ್ಥಿತಿಯಲ್ಲಿ ಕಾಣುತ್ತಿಲ್ಲ.
ಹೀಗಾಗಿಯೇ ನಾವು
ಬಾಟಮ್-ಅಪ್ ಬೇಡಿಕೆಯನ್ನು ಮಂಡಿಸುತ್ತಲೇ ಟಾಪ್-ಡೌನ್ ವ್ಯವಸ್ಥೆಯಲ್ಲಿ ಚಳುವಳಿಗಳ ಮೂಲಕ ನಮ್ಮ
ಬೇಡಿಕೆಗಳನ್ನು ಪೂರೈಸುವ ವ್ಯವಸ್ಥೆಯಲ್ಲಿ ಬದುಕಬೇಕಾದ ಅನಿವಾರ್ಯತೆಯಲ್ಲಿದ್ದೇವೆ.
No comments:
Post a Comment