ಚಿಲ್ಲರೆ ವ್ಯಾಪಾರದಲ್ಲಿ ವಿದೇಶೀ ಹೂಡಿಕೆಯ ಬಗ್ಗೆ
ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಬೇರೆ ರೀತಿಯ ಸ್ಥಳೀಯ ಪ್ರಯೋಗಗಳು ಹೇಗೆ ನಡೆದಿವೆ
ಎನ್ನುವುದನ್ನು ಅವಲೋಕಿಸಿವುದು ಉಚಿತವಿರಬಹುದು. ವಿದೇಶೀ ಹೂಡಿಕೆ ಬಂದಾಕ್ಷಣಕ್ಕೆ ಜಾದೂವಿನ
ಛಡಿಯಂತೆ ನಮ್ಮ ಗ್ರಾಮಾಂತರ ಪ್ರದೇಶದ ರೈತರ ಕಿಸ್ಮತ್ತು ಸರಿಹೋಗುವುದು ಎನ್ನುವ ಕಥೆಗಳನ್ನು
ಕೇಳುತ್ತಿದ್ದೇವೆ. ನಮ್ಮ ಎಲ್ಲ ಸಮಸ್ಯೆಗಳಿಗೂ ವಿದೇಶದಲ್ಲಿಯೇ ಉತ್ತರವನ್ನು ಹುಡುಕುವ ಅಭ್ಯಾಸ
ತುಸು ಸಮಯದವರೆಗೆ ಬಿಟ್ಟರೆ ನಮ್ಮದೇ ಅದ್ಭುತ ಪ್ರಯೋಗಗಳು ನಮಗೆ ಕಾಣಿಸುತ್ತವೆ.
ಚಿಲ್ಲರೆ ವ್ಯಾಪಾರದಲ್ಲಿ ಹೂಡಿಗೆ ಬರುವುದರಿಂದ ನಮಗೆ
ದಾಸ್ತಾನು ಮಾಡಲು ಸದುಪಾಯ, ರೈತರಿಗೆ ಒಳ್ಳೆಯ ಬೆಲೆ ಇತ್ಯಾದಿಗಳ ಕಥೆಗಳನ್ನು ಬಿಟ್ಟು ನಮ್ಮ ಕೋಳಿ
ಸಾಕಣೆಯ ಕ್ಷೇತ್ರದತ್ತ ಗಮನ ಹರಿಸೋಣ.
ಕೃಷಿಯ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ,
ಸಂಶೋಧನೆಯ ಫಲ ಎಲ್ಲಾದರೂ ನಮಗೆ ಕಾಣಸಿಗುವುದಾದರೆ ಅದು ಹೈನುಗಾರಿಕೆ ಮತ್ತು ಕೋಳಿ ಸಾಕಣೆಯ
ಕ್ಷೇತ್ರದಲ್ಲಿಯೇ.
![](https://blogger.googleusercontent.com/img/b/R29vZ2xl/AVvXsEjRGLlPHQfus4Xz18abOxFWuqGqfbI3Zkd9lyBLATO852W4zDCNAbzxggHJ_tPJHnaICii5_QEibDxJao3fn_HLps2XTm4fGBS-BssYrWm2yeq_MpV2ijsfIHvv533AAR6Rmxfqu9tR3IQ/s1600/po1.jpg)
ಈ ಕ್ಷೇತ್ರದಲ್ಲಿ ವಿದೇಶೀ ವಿನಿಮಯ, ವಿದೇಶೀ ಹೂಡಿಕೆ
ಬರುವುದರಿಂದ ಭಾರತದಲ್ಲಿ ಯಾವ ರೀತಿಯ ಬದಲಾವಣೆಯಾಗಬಹುದು? ವಿದೇಶದ ಇನ್ನೂ ಉತ್ತಮ ಸಂಶೋಧನೆ ನಮಗೆ ಬರುತ್ತದೆಂದು
ಒಂದು ಕ್ಷಣದ ಮಟ್ಟಿಗೆ ನಂಬೋಣ. ಆದರೆ ಆ ತಂತ್ರಜ್ಞಾನ ಮತ್ತು ಸಂಶೋಧನೆ ಕೆಲಸ ಮಾಡಬೇಕಾದ್ದು
ಇಲ್ಲಿ. ಇಲ್ಲಿನ ಹವಾಮಾನದಲ್ಲಿ. ಇಲ್ಲಿನ ಶುಚಿತ್ವದ ವಾತಾವರಣದಲ್ಲಿ. ಇಲ್ಲಿನ ಜನರ ಕುಶಲತೆಯ
ಆಧಾರದ ಮೇಲೆ. ಈ ತಂತ್ರಜ್ಞಾನ ಯಂತ್ರವಲ್ಲದೆಯೇ – ಜೀವ ವಿಕಾಸ-ಪ್ರಾಣಿಗಳಿಗೆ
ಸಂಬಂಧಿಸಿದ್ದಾಗಿದ್ದರೆ ಅಲ್ಲಿನ ಪ್ರಯೋಗಗಳ ಕಿಮ್ಮತ್ತು ನಮಗೆಷ್ಟು?
ಹೀಗಾಗಿಯೇ ಕೋಳಿ ಸಾಕಣೆಯ ಕ್ಷೇತ್ರದಲ್ಲಿ ನಮಗೆ
ವೆಂಕಟೇಶ್ವರಾ ಹ್ಯಾಚರೀಸ್ ಗೆ ಸವಾಲಾಗಿ ನಿಲ್ಲಬಲ್ಲಂದತಹ ಯಾವುದೇ ವಿದೇಶೀ ಕಂಪನಿ
ಕಾಣಿಸುತ್ತಿಲ್ಲ. ನಮ್ಮ ಆಂತರ್ಯದ ಶಕ್ತಿಯನ್ನು ನಾವು ಬೆಳೆಸಿಕೊಂಡ ಪರಿ ಇದು.
ಕೋಳಿಸಾಕಣೆಯಲ್ಲಿ ನಮಗೆ ಕಾಣುವ ಮತ್ತೊಂದು ಅಂಶವನ್ನೂ
ನಾವು ಮರೆಯುವಹಾಗಿಲ್ಲ. ಆ ಅಂಶವೆಂದರೆ ತಂತ್ರಜ್ಞಾನ ಹೂಡಿಕೆ ಹಚ್ಚೆಚ್ಚಾಗಿ ಬರುತ್ತಿದ್ದಂತೆ ಬಡ
ರೈತರ ಕೈಯಲ್ಲಿದ್ದ ಸ್ವಾಯತ್ತತೆ ಬೇರೆಲ್ಲಿಗೋ ಹೋಗಿಬಿಡುತ್ತದೆ. ಸಂಶೋಧನೆಯೂ, ತಂತ್ರಜ್ಞಾನವೂ
ವಿದೇಶೀ-ದೇಶಿ ಎಂದು ಹೂಡಿಕೆಯ ಬಣ್ಣವನ್ನು ನೋಡುವುದಿಲ್ಲ. ಹೀಗಾಗಿ ನಾವು ವಿದೇಶೀ ಹೂಡಿಕೆಗಿಂತ
ತುರ್ತಾಗಿ ಚರ್ಚಿಸಬೇಕಾದದ್ದು ಯಾವ ರೀತಿಯ ತಂತ್ರಜ್ಞಾನ, ಸಂಶೋಧನೆ, ನಿರ್ವಹಣಾ ವಿಧಾನ, ದಾಸ್ತಾನು
ಪರಿಕರಗಳು ಬೇಕು ಎನ್ನುವುದನ್ನು.
ಕೋಳಿಸಾಕಣೆಯಲ್ಲಿ ಬಂದಿರುವು ಅತೀ ತಂತ್ರಜ್ಞಾನವು
ಇಡಿಯಾಗಿ ಹೊರಗಿನ ಸಂಪನ್ಮೂಲಗಳ ಮೇಲೆ ಆಧಾರಗೊಂಡಿದೆ. ಅಂದರೆ ಲೇಯರ್ (ಮೊಟ್ಟೆಯಿಕ್ಕುವ) ಕೋಳಿಗಳು
ಇಟ್ಟ ಮೊಟ್ಟೆ ಹ್ಯಾಚ್ ಆಗುವುದಿಲ್ಲ. ಅದನ್ನು ಮೊಟ್ಟೆಯ ಸೇವನೆಗೆಂದು ಮಾತ್ರ ಉಪಯೋಗಿಸಬಹುದು.
ಮುಂದಿನ ಬಾರಿ, ಮೊಟ್ಟೆಯಿಕ್ಕುವ ಕೋಳಿ ಪಿಳ್ಳೆಗಳು ಬೇಕೆಂದರೆ ಮತ್ತೆ ಹ್ಯಾಚರಿಯಿಂದ ಕೊಳ್ಳಬೇಕು.
ಹಾಗೆಯೇ ಮಾಂಸಕ್ಕೆಂದು ಬೆಳೆಯುವ ಕೋಳಿಗಳು ಮೊಟ್ಟಿಯಿಕ್ಕುವುದಿಲ್ಲ. ಬದಲಿಗೆ ಅವು ಬೇಗ ತೂಕ
ಜಾಸ್ತಿಮಾಡಿಕೊಂಡು ಕಸಾಯಿಗೆ ತಯಾರಾಗುತ್ತವೆ. ಈ ಕೋಳಿಗಳು ಮಾರುಕಟ್ಟೆಗೆ ಬರಬೇಕೆಂದರೆ ಅವುಗಳು
ಆಹಾರವೂ, ಕಂಪನಿಗಳಿಂದಲೇ ಬರಬೇಕು. ಅದರಲ್ಲಿ ಇಂತಿಷ್ಟು ವಿಟಮಿನ್ನು, ಪ್ರೋಟೀನು, ಎಂದೆಲ್ಲಾ
ಆಹಾರದ ಅಂಶಗಳಿರಬೇಕಾಗುತ್ತದೆ. ಹಾಗೆಯೇ ಇವುಗಳನ್ನು ಮಾರಾಟ ಮಾಡಲೂ ಮಾರುಕಟ್ಟೆಯ ನಿಯಮಾವಳಿಯೇ ಮುಖ್ಯವಾಗುತ್ತದೆ.
![](https://blogger.googleusercontent.com/img/b/R29vZ2xl/AVvXsEj9vCJkVX_AzoyStJ7L_kYZGYaCEaRhHZwIdlm8jDIrOKMrJv4jwZVAnm9dAN1_WeuQHlOTd1jPcWvTYW8Rm8vzx2cbVBrLsJCvbI1dLHZyDlj5Ab1hknYUzt-LoJdpnqRIHkFgP_PrLTI/s1600/po3.jpg)
ಈ ಎಲ್ಲದರ ನಡುವೆ ಯಂತ್ರೀಕೃತ ಕೋಳಿ ಫಾರ್ಮ್ ಗಳ
ಭರಾಟೆಯಲ್ಲಿ ಮಧ್ಯಪ್ರದೇಶದ ಕೆಲವು ಜಿಲ್ಲೆಗಳಲ್ಲಿ ಕೋಳಿ ಸಾಕಣೆಯನ್ನು ಮತ್ತೆ ಬಡವರ ಹಿತ್ತಲಿಗೆ
ಒಯ್ಯುವ ಕಾರ್ಯ ನಡೆಯುತ್ತಿದೆ. ಅದರ ಲೆಕ್ಕಾಚಾರ ಹೀಗಿದೆ:
![](https://blogger.googleusercontent.com/img/b/R29vZ2xl/AVvXsEg2b-8FMIgP1Qmp_b3STaG43jHar97ayJCRMl0hB9GtSdpmSHESnxoCBYDehCDxPnt-SidKaDu14ZR4kNqYXOEBdDhgvtp5HrHuWZQNJQp7SkCTTI1oE2ts-pnxfqWoO8u5uyNdY_pZlUk/s1600/po2.jpg)
ಹೀಗೆ ಈ ಎಲ್ಲ ಲೆಕ್ಕಾಚಾರವನ್ನು ಹಾಕಿ ಬಡವರ ಮನೆಯ
ಹಿತ್ತಿಲ ಖಾಲಿ ಜಾಗದಲ್ಲಿ ಒಂದು ಸಣ್ಣ ಷೆಡ್ಡನ್ನು ಹಾಕಿ, ಮನೆಯಲ್ಲಿರುವವರ ಖಾಲೀ ಸಮಯವನ್ನು ಈ
ಕಾಯಕಕ್ಕೆ ತೊಡಗಿಸಿ ಕೋಳಿಗಳನ್ನು ಸ್ಥಳೀಯವಾಗಿ ಮಾರಾಟ ಮಾಡಿದರೆ ವ್ಯಾಪಾರ ಗಿಟ್ಟುತ್ತದೆ ಎನ್ನುವ
ಲೆಕ್ಕಾಚಾರವನ್ನು ಮಾಡಲಾಗಿದೆ. ಉತ್ಪಾದನಾ ಖರ್ಚು ನಿಜಕ್ಕೂ ದೊಡ್ಡ ಫಾರ್ಮ್ ಗಳಿಗಿಂತ ಹೆಚ್ಚೇ.
ಆದರೆ ನೆಲದ, ಕೂಲಿಯ, ಸಾಗಾಣಿಕೆಯ ಖರ್ಚುನಲ್ಲಿ ಆಗುವ ಉಳಿತಾಯ ಮತ್ತು ವಿಕೇಂದ್ರೀಕರಣದಿಂದಾಗಿ ಈ
ಕೆಲಸ 300-400 ಕೋಳಿಗಳನ್ನು ಸಾಕುವವರಿಗೂ ಲಾಭದಾಯಕವಾಗುವಂತಾಗಿದೆ.
ಅಂದರೆ ವಿದೇಶೀ ಹೂಡಿಕೆಯ ಅಪಾಯಕ್ಕೆ ಮದ್ದು ದೇಶೀ
ಹೂಡಿಕೆಯಲ್ಲ. ಹೂಡಿಕೆ ತಂತ್ರಜ್ಞಾನಗಳು ನಮ್ಮ ಕೃಷಿಯನ್ನು ಎತ್ತ ಒಯ್ಯುತ್ತಿದೆ ಎನ್ನುವ
ದಿಕ್ಕನ್ನು ನಾವು ಅರಿಯಬೇಕು. ಆ ದಿಕ್ಕಿನ ಅರಿವಾದರೆ ದೊಡ್ಡ ಹೂಡಿಕೆಯ ತಂತ್ರಜ್ಞಾನದ ಲಾಭವನ್ನು
ಪಡಯುತ್ತಲೇ ಸ್ಥಳೀಯವಾಗಿ ನಮ್ಮ ಪರಿಹಾರಗಳನ್ನು ಕಂಡುಕೊಳ್ಳಬಹುದೆಂದು ಮಧ್ಯಪ್ರದೇಶದಿಂದ ನಮಗೆ
ತಿಳಿದು ಬರುತ್ತಿದೆ.
ಈಗ ಹೈನುಗಾರಿಕೆಯ ದಿಕ್ಕೂ ಕೋಳಿ ಸಾಕಣೆಯ ದಿಕ್ಕನ್ನೇ
ಹಿಡಿದಿದೆ. ವಿದೇಶೀ ಮಾರುಕಟ್ಟೆಯಲ್ಲಿ, ಹಾಲಿನ ಪುಡಿ, ಚೀಸು, ಬೆಣ್ಣೆಗಳನ್ನು ಮಾರಾಟಮಾಡಬೇಕೆಂದು
ಶುದ್ಧ ಪದಾರ್ಥಗಳನ್ನು ತಯಾರಿಸಲು ಗುಜರಾತಿನಲ್ಲಿ ಗ್ರಾಮದಲ್ಲಿಯೇ ಶೀತಲೀಕರಿಸಿದ ಹಾಲನ್ನು
ಫ್ಯಾಕ್ಟರಿಗಳಿಗೆ ಒಯ್ಯುತ್ತಿದ್ದಾರೆ. ಈಗ ಶೀತಲೀಕರಣ ಯಂತ್ರವೂ ಸ್ಥಳೀಯವಾಗಿ
ಲಭ್ಯವಾಗಿಬೇಕಾಗಿದೆ. ನಂತರ ಆ ಯಂತ್ರದ ಹೊಟ್ಟೆಯ ಹಸಿವು ತೀರುವಷ್ಟು ಹಾಲೆರೆಯುವ ಹಸು, ಎಮ್ಮೆಗಳು
ಆ ಕ್ಷೇತ್ರದಲ್ಲಿರಬೇಕು. ಅವುಗಳ ಉತ್ಪಾದಕತೆ ಹಚ್ಚಬೇಕು. ಎಲ್ಲವೂ ಒಂದಿ ಸಮೂಹದ ಫಾರ್ಮ್
ನಲ್ಲಿದ್ದರೆ ವ್ಯಾಪಾರ ಗಿಟ್ಟುತ್ತದೆ. ಅಂದರೆ, ತಂತ್ರಜ್ಞಾನ, ಹೂಡಿಕೆ ನಮ್ಮನ್ನು
ಕೇಂದ್ರೀಕರಣದತ್ತ ಒಯ್ಯುತ್ತದೆ.
ಆದರೆ ಸಣ್ಣ ಹಿಡುವಳಿಗಾರರು, ಬಡರೈತರು ಬದುಕಿ
ಉಳಿಯಬೇಕಾದರೆ ನಾವು ವಿಕೇಂದ್ರೀಕರಣದ ಐಡಿಯಾಗಳನ್ನು ಎಂದಿಗೂ ಯೋಚಿಸುತ್ತಲೇ ಇರಬೇಕು.
ಗಾಂಧಿ ಜಯಂತಿಯ ಸಂದರ್ಭದಲ್ಲಿ ವಿಕೇಂದ್ರೀಕರಣಕ್ಕಿಂತ
ಉತ್ತಮವಾದ ಪರಿಹಾರವನ್ನು ನಾವು ಕಂಡುಕೊಳ್ಳಲು ಸಾಧ್ಯವೇ?
No comments:
Post a Comment