Saturday, June 8, 2013

ಮಾರುಕಟ್ಟೆಗೆ ಒಡ್ಡಿಕೊಂಡ ಆಧುನಿಕ ಜೀತದಾಳುಗಳು

ಕಳೆದ ಕೆಲವು ದಿನಗಳಿಂದ ನಡೆದಿರುವ ವಿದ್ಯಮಾನಗಳು ಮಾರುಕಟ್ಟೆಯ ಅತಿರೇಕದ ಪ್ರತೀಕವಾಗಿರುವಂತಿದೆ. ಕ್ರಿಕೆಟ್ಟಿನಲ್ಲಿ, ಕಾರ್ಪರೇಟ್ ಜಗತ್ತಿನಲ್ಲಿ ಕಾಣುತ್ತಿರುವ ಮೌನದ ಸಂಚು ರಾಜಕೀಯಕ್ಕೂ-ವ್ಯಾಪಾರಕ್ಕೂ ಇರುವ ಮೂಲಭೂತ ವ್ಯತ್ಯಾಸಗಳನ್ನು ತೆರೆದಿಟ್ಟಿದೆ. ಇದರಿಂದ ವ್ಯಾಪಾರೀ ಜಗತ್ತಿನ ಕಾರ್ಯದಕ್ಷತೆಯನ್ನು ಹೊಸ ರೀತಿಯಿಂದ ಅರ್ಥೈಸುವುದಕ್ಕೂ ಸಾಧ್ಯವಾಗಿದೆ. ಈ ಎಲ್ಲದರ ಮಧ್ಯೆ ಸಂಸ್ಥಾಗತ ವ್ಯವಸ್ಥೆಯನ್ನು ಗಮನಿಸುತ್ತಿರುವವರಿಗೆ ಇವು ಖುಷಿಯದಿನಗಳೇನೂ ಅಲ್ಲ.

ನಾವು ಹೆಚ್ಚು ಗಮನಿಸಿರದ ಹೊಸ ಸಿನೇಮಾಗಳ ಬಿಡುಗಡೆಯ ಪ್ರಕ್ರಿಯೆಯಲ್ಲಾಗಿರುವ ಮೂಲಭೂತ ಬದಲಾವಣೆಗಳಿಂದ ಈ ಚರ್ಚೆಯನ್ನು ಪ್ರಾರಂಭಿಸಬಹುದು. ಈಚೆಗೆ ಈ ಪತ್ರಿಕೆಯಲ್ಲಿ ಪ್ರಾರಂಭವಾಗಿರುವ "ಬಂಗಾರದ ಮನುಷ್ಯ" ಚಿತ್ರ ತಯಾರಿಕೆಯ ಕಥೆಯಯಲ್ಲಿ ಒಂದು ಕುತೂಹಲದ ಮಾತು ಬರುತ್ತದೆ. ಅನೇಕ ವಿತರಕರು, ಹಾಗೂ ನಾಯಕ ರಾಜ್ ಕುಮಾರ್, ಆ ಚಿತ್ರ ಐದಾರು ವಾರಗಳು ಓಡುವ ಚಿತ್ರವೆಂದು ಘೋಷಿಸಿದ್ದರಂತೆ. ಅಂದರೆ ಅದು ಫ್ಲಾಪ್ ಆಗುವುದೆನ್ನುವ ಅರ್ಥ ಆ ಮಾತುಗಳಲ್ಲಿದ್ದುವು. ಇದನ್ನು ಇಂದಿನ ಯುವಕರಿಗೆ ತಿಳಿಯಹೇಳುವುದೆಂತು? ಮೊದಲ ವಾರಾಂತ್ಯದಲ್ಲಿಯೇ ಚಿತ್ರವು ಸೋತಿದೆಯೋ, ಗೆದ್ದಿದೆಯೋ, ಸೂಪರ್ ಹಿಟ್ಟೋ ನಿರ್ಧರಿಸುವ ಈ ಕಾಲಕ್ಕೆ ಐದಾರುವಾರಗಳು ದೀರ್ಘಕಾಲವೇ ಅಹುದು. ಈ ಮಾಪನದಲ್ಲಿ ಮೊದಲೆರಡು ವಾರ ಮಂದವಾಗಿ ನಡೆದಿದ್ದ "ಷೋಲೆ"ಯಂತಹ ಚಿತ್ರ ಮಣ್ಣುಮುಕ್ಕಿ ಇತಿಹಾಸದ ಧೂಳಿನಲ್ಲಿ ಬೆರೆತುಹೋಗುತ್ತಿತ್ತು.

ಅಂದಿಗೂ ಇಂದಿಗೂ ಇರುವುದು ಒಂದು ವ್ಯತ್ಯಾಸ – ಅಂದಿಗೆ ಚಿತ್ರಮಂದಿರಗಳ ಟಿಕೆಟ್ಟಿನ ದರ ಚಿತ್ರದಿಂದ ಚಿತ್ರಕ್ಕೆ, ಸಮಯದಿಂದ ಸಮಯಕ್ಕೆ ಬದಲಾಗುತ್ತಿರಲಿಲ್ಲ. ಹೀಗಾಗಿ ನಿಗದಿತ ದರ, ನಿಗದಿತ ಆಸನಗಳ, ಒಂದು ನಿಯಮಿತ ಚೌಕಟ್ಟಿನಲ್ಲಿ ಸೆಣೆಸಿ, ಜನರ ಮನಗೆದ್ದು – ಬಾಯಿಮಾತಿನಿಂದ ಜನ ಮತ್ತಷ್ಟು ಜನರಿಗೆ ಹೇಳುವುದರ ಮೂಲಕ ಒಂದು ಚಿತ್ರ ಗೆಲ್ಲುತ್ತಿತ್ತು. ಆಗ್ಗೆ ನಮ್ಮ ಕುತೂಹಲ ತಣಿಸಲು ಇದ್ದದ್ದು ಒಂದೇ ಪರಿಕರ. ನಾಲ್ಕಾಣೆಗೆ ಸಿಗುತ್ತಿದ್ದ ಚಿತ್ರದ ಹಾಡಿನ ಪುಸ್ತಕದಲ್ಲಿ ಚಿತ್ರದ (ಅಂತ್ಯ ಸೂಚಿಸದ) ಸಂಕ್ಷಿಪ್ತ ಕಥೆಯಿರುತ್ತಿತ್ತು. ಮಿಕ್ಕದ್ದನ್ನು ಬೆಳ್ಳಿತೆರೆಯ ಮೇಲೆ ನೋಡಿ ಆನಂದಿಸಿ ಎನ್ನುವ ಆಶಯದೊಂದಿಗೆ ಅರ್ಧ ಕಥೆ ನಿಲ್ಲುತ್ತಿತ್ತು.

ಪ್ರತೀ ಚಿತ್ರದ ಬಗೆಗೆ ಕುತೂಹಲವನ್ನು ಬೆಳೆಸುವುದು ಮಾರುಕಟ್ಟೆಯ ನಿಯಮವಾಗಿದ್ದರಿಂದ ಆ ಅಂಶ ಆಗಲೂ ಇತ್ತು. ಕುತೂಹಲ ತಡೆಯಲಾರದ ಅಭಿಮಾನಿ ದೇವರುಗಳು ಗಂಟೆಗಟ್ಟಲೆ ಸಾಲಿನಲ್ಲಿ ನಿಂತೋ, ದೊಡ್ಡ ನಕ್ಷತ್ರಗಳನ್ನು ಮೆರವಣಿಗೆಯ ಮೂಲಕ ಚಿತ್ರಮಂದಿರಕ್ಕೆ ಒಯ್ದೋ, ಟಿಕೇಟುಗಳನ್ನು ಪಡೆಯುತ್ತಿದ್ದರು. ಅಥವಾ ಕಳ್ಳ ಸಂತೆಯಲ್ಲಿ ಟಿಕೇಟು ಕೊಂಡು ತಮ್ಮ ಕುತೂಹಲವನ್ನು ತಣಿಸಿಕೊಳ್ಳುತ್ತಿದ್ದರು. ಎರಡು ಮೂರು ವಾರಗಳು ಕಳೆಯುವ ವೇಳೆಗೆ ಆ ಚಿತ್ರದ ಸಾಕಷ್ಟು ಮಾಹಿತಿ ಬಯಲಾಗಿ ಮಿಕ್ಕ ಮಹಾಜನತೆ ಚಿತ್ರವನ್ನು ನೋಡಬೇಕೇ ಬೇಡವೇ ಎಂಬ ನಿರ್ಧಾರವನ್ನು ಕೈಗೊಳ್ಳುತ್ತಿದ್ದರು.

ಮಾರುಕಟ್ಟೆಯನ್ನಾರಾಧಿಸುವ ಅರ್ಥಶಾಸ್ತ್ರಜ್ಞರು ಇದನ್ನೊಂದು ಇನೆಫಿಷ್ಯಂಟ್ ಮಾರ್ಕೆಟ್ ಎಂದು ತಳ್ಳಿಹಾಕುತ್ತಾರೆ. ಯಾಕೆಂದರೆ, ಈ ಮಾರುಕಟ್ಟೆಯ ನಿರ್ಮಿತಿಯಲ್ಲಿ (ಚಿತ್ರ ನೋಡಬೇಕೆನ್ನುವ) ಬೇಡಿಕೆ, (ಚಿತ್ರಮಂದಿರಗಳಲ್ಲಿನ ಆಸನಗಳ) ಸರಬರಾಜಿಗಿಂತ ಹೆಚ್ಚಾಗಿದೆ. ಹೀಗಾಗಿ ಟಿಕೇಟಿನ ಬೆಲೆಯೇರಿಸಿದರೆ ಸರಬರಾಜು ಬೇಡಿಕೆಗಳ ಸಮತೋಲನವನ್ನು ಆರ್ಜಿಸಬಹುದು. ಟಿಕೇಟಿಗೆ ಜನ ಕೊಡಲು ತಯಾರಿರುವ ಹೆಚ್ಚಿನ ದರಕ್ಕೆ ಕಳ್ಳಸಂತೆಯಲ್ಲಿ ಟಿಕೇಟು ಮಾರಾಟವಾಗುವ ಬೆಲೆಯೇ ದ್ಯೋತಕವಾಗುತ್ತದೆ. ಟಿಕೇಟುಗಳಿಗಾಗಿ ಜನ ಎಷ್ಟು ಹಣ ಕೊಡಲು ತಯಾರಿದ್ದಾರೆನ್ನುವುದರ ಪ್ರಕ್ರಿಯೆಯನ್ನು ಅರ್ಥಶಾಸ್ತ್ರಜ್ಞರು ಪ್ರೈಸ್ ಡಿಸ್ಕವರಿ (ಬೆಲೆಯನ್ನು ಕಂಡುಹುಡುಕುವುದು) ಎನ್ನುತ್ತಾರೆ.

ಮಾರುಕಟ್ಟೆ ತಾಂಡವವಾಡುವ ಜಾಗದಲ್ಲಿ ಕಳ್ಳಸಂತೆಯಿರುವುದಿಲ್ಲ. ಕಳ್ಳಸಂತೆಯಲ್ಲಿ ಟಿಕೇಟು ಮಾರುವವನ ಕೆಲಸವನ್ನು ಥಿಯೇಟರಿನವರೇ – ತಮ್ಮ ಬೆಲೆಯೇರಿಸಿ – ಮಾಡಿಬಿಡುತ್ತಾರೆ. ಹೀಗಾಗಿಯೇ ವಾರಾಂತ್ಯದ ಬೆಲೆಗಳು, ಸಂಜೆಯ ಆಟದ ಬೆಲೆಗಳು ಇದ್ದಕ್ಕಿದ್ದಂತೆ ಹೆಚ್ಚುತ್ತವೆ. ಸಿನೇಮಾ ಗೆಲ್ಲಲು ಹೆಚ್ಚಿನ ಬೆಲೆಯಲ್ಲಿ ಆದಷ್ಟೂ ಜನ ಸಿನೇಮಾವನ್ನು ನೋಡಬೇಕಾಗಿರುವುದರಿಂದ ಪ್ರೇಕ್ಷಕರ ಕುತೂಹಲವನ್ನು ಬೆಳೆಯಿಸಿ ಅವರನ್ನು ಚಿತ್ರಮಂದಿರಕ್ಕೆ ಎಳೆದು ತರುವ ಕೆಲಸವನ್ನು ತಯಾರಕರು ಮಾಡಬೇಕು. ಹಿಂದೆ ಚಿತ್ರದ ಡಬ್ಬಿಂಗ್ ಮುಗಿದಾಕ್ಷಣ ಕೆಲಸ ಮುಗಿಯಿತೆನ್ನುತ್ತಿದ್ದ ಕಲಾವಿದರಿಗೀಗ ಚಿತ್ರ ಗೆಲ್ಲುವವರೆಗೂ ಬಿಡುಗಡೆಯಿಲ್ಲ. ಅವರುಗಳ ಕರಾರಿನ ಪ್ರಕಾರ ಚಿತ್ರದ "ಪ್ರಮೋ" ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಆ ಕಾಲಕ್ಕೆ ಸಂದರ್ಶನಗಳನ್ನು ನೀಡಬೇಕು. ಊರೂರು ಸುತ್ತಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಬರಲು ಪ್ರೇರೇಪಿಸಬೇಕು. ಅವರು ಸಿನೇಮಾದ ಬಗ್ಗೆ ಏನು ಮಾತಾಡಬಹುದು ಏನು ಮಾತಾಡಬಾರದು ಎನ್ನುವ ನಿಯಮಗಳೂ ಇರುತ್ತವೆ. ಒಂದು ಚಿತ್ರಕ್ಕಾಗಿ ಕೆಲಸಮಾಡಲು ಒಪ್ಪಿದ ಕೂಡಲೇ ಕಲಾವಿದರು ಆ ಸಂಸ್ಥೆಯ ತಾತ್ಕಾಲಿಕ ಜೀತದಾಳುಗಳಾಗಿಬಿಡುತ್ತಾರೆ. ಹೀಗಾಗಿಯೇ ಆಮೀರ್ ಖಾನ್ ತಮ್ಮ ಗಜನಿ ಚಿತ್ರ ಬಿಡುಗಡೆಯ ಕಾಲಕ್ಕೆ ತಮಗೆ ಗಜನಿ ಕಟ್ ಮಾಡಿಸಿಕೊಂಡದ್ದಲ್ಲದೇ, ಅಭಿಮಾನಿಗಳಿಗೂ ಗಜನಿ ಕ್ಷೌರವನ್ನು ಮಾಡಿದರು; ವಿದ್ಯಾ ಬಾಲನ್ ತಮ್ಮ ತೂಕ ತಗ್ಗಿಸಿಕೊಳ್ಳದೇ ಎಂಭತ್ತರ ದಶಕದ ಬಟ್ಟೆ, ದೊಡ್ಡ ಬಣ್ಣದ ಕನ್ನಡಕ ತೊಟ್ಟು, ಕಣ್ಣು ಹೊಡೆಯುತ್ತಾ ಡರ್ಟಿ ಪಿಕ್ಚರ್ ಪ್ರಚಾರದಲ್ಲಿ ಪಾಲ್ಗೊಂಡರು. ಲಗಾನ್ ಕಾಲಕ್ಕೆ ಲಂಗೋಟಿಯುಟ್ಟು ಊರೂರಲ್ಲಿ ಆಮೀರ್ ತಂಡ ಕ್ರಿಕೆಟ್ ಆಡಿತು. ಅಂದರೆ ಚಿತ್ರದಲ್ಲಿ ಮಾತ್ರವಲ್ಲದೇ ಹೊರಗೂ ವೇಷ ಧರಿಸಿ, ಸರಿಯಾದ ಮಾತನ್ನೇ ಆಡಿ ಕರಾರಿನ ಪ್ರಕಾರ ನಡೆದುಕೊಳ್ಳುವ ಗುರುತರ ಜವಾಬ್ದಾರಿಯನ್ನು ಕಲಾವಿದರ ಮೇಲೆ ಮಾರುಕಟ್ಟೆಯು ಹೇರಿದೆ. ಹೀಗಾಗಿಯೇ ಯಾರೂ ತಮ್ಮ ಸ್ವಂತ ಅಭಿಪ್ರಾಯಗಳನ್ನು ಪ್ರಾಮಾಣಿಕವಾಗಿ ಹೇಳುವುದಿಲ್ಲ, ಸಹಜವಾಗಿ ಮಾತಾಡುವುದಿಲ್ಲ.

ಮಾರುಕಟ್ಟೆಯ ರೋಗ ನಮ್ಮ ಐಪಿಎಲ್ ಕ್ರಿಕೆಟ್ಟನ್ನೂ ಆವರಿಸಿದೆ. ಧೋನಿ ಮ್ಯಾಚ್ ಫಿಕ್ಸಂಗ್-ಬೆಟಿಂಗ್ ಬಗ್ಗೆ ಮಾತಾಡಲಿಲ್ಲ ಎನ್ನುವ ಅಪವಾದವನ್ನು ಹೇರಿದಾಗ ಆತ ಸಿ.ಎಸ್.ಕೆ ತಂಡದ ನಾಯಕನ ಹುದ್ದೆ ಅಲಂಕರಿಸಿರುವ ಜೀತದಾಳು ಎನ್ನುವ ಸತ್ಯ ಯಾರಿಗೂ ಹೊಳೆಯಲಿಲ್ಲ. ಧೋನಿಯನ್ನು ಸಿ.ಎಸ್.ಕೆ ತಂಡ ಕೊಂಡುಕೊಂಡಿದೆ. ಪ್ರೈಸ್ ಡಿಸ್ಕವರಿಯ ಮೂಲಕ ಬಹಿರಂಗ ಹರಾಜಿನಲ್ಲಿ ಐಪಿಎಲ್ ಆಟಗಾರರೆಲ್ಲರೂ ಬಿಕರಿಯಾಗಿದ್ದಾರೆ. ಹೀಗಾಗಿ ಐಪಿಎಲ್ ಗೆ ಸಂಬಂಧಿಸಿದಂತೆ ಅವರುಗಳೆಲ್ಲಾ ತಮ್ಮ ತಮ್ಮ ಮಾಲೀಕರ ಜೀತದಾಳುಗಳು. ಅವರು ಮ್ಯಾಚುಗಳನ್ನು ಆಡಬೇಕು. ಮಾಲೀಕರು ಹೇಳಿದ ಜಾಹೀರಾತಿನಲ್ಲಿ ಪಾಲ್ಗೊಳ್ಳಬೇಕು. ಮ್ಯಾಚಿನ ನಂತರದ ಪಾರ್ಟಿಗಳಲ್ಲಿ ಕಡ್ಡಾಯವಾಗಿ ಇದ್ದು ಜನರೊಂದಿಗೆ ಒಡನಾಡುವ ನಾಟಕವನ್ನಾಡಬೇಕು. ಏರ್ಪಡಿಸಿರುವ ಸಮಾರಂಭದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಮಾರುಕಟ್ಟೆಯ ವ್ಯಾಪ್ತಿ ಎಷ್ಟು ಆಳ-ವಿಸ್ತಾರವಾದದ್ದೆಂದರೆ – ಅದು ಸ್ವಾತಂತ್ರವನ್ನಷ್ಟೇ ಅಲ್ಲ, ಮಾತು-ಕಥೆ, ನಡೆ-ನುಡಿಯನ್ನೂ ಖರೀದಿಸಿಬಿಡುತ್ತದೆ. ಹೀಗಾಗಿಯೇ ಸಿ.ಎಸ್.ಕೆ ಬಗ್ಗೆ ಧೋನಿಯವರು ಮಾತು ಆಶ್ಚರ್ಯ ತರಬೇಕೇ ಹೊರತು ಮೌನವಲ್ಲ.

ಈ ಎಲ್ಲ ವಿಚಾರಗಳ ಬಗ್ಗೆ ತಮ್ಮ ಮೇಲೆ ಮೌನದ ಅಪವಾದವಿದೆ ಎನ್ನುವುದನ್ನು ಚರ್ಚಿಸುತ್ತಾ ಮಾಜೀ ಕ್ರಿಕೆಟ್ಟಿಗ ಸುನೀಲ್ ಗಾವಸ್ಕರ್ ತಮ್ಮನ್ನು ಸಮರ್ಥಿಸಿಕೊಂಡದ್ದೂ ಈ ಕರಾರಿನಾಧಾರದ ಮೇಲೆಯೇ. ಅವರ ಮಾತುಗಳನ್ನು ಬಿಸಿಸಿಐ ಪ್ರಸಾರ ಮಾಡುವ ವಿಕ್ಷಕ ವಿವರಣೆಗೆ ಅಡವಿಟ್ಟು ಅವರು ತಮ್ಮನ್ನು ಮಾರಿಕೊಂಡಿದ್ದಾರೆ. ಮಾರುಕಟ್ಟೆಯ ನಿಯಮಾನುಸಾರ ಮೌನಕ್ಕೂ ಒಂದು ಬೆಲೆಯುಂಟು. ಆ ಬೆಲೆಯ ಪ್ರೈಸ್ ಡಿಸ್ಕವರಿ ಐಪಿಎಲ್ ಮೂಲಕ ಕಂಡುಬಂದಿದೆ. ಹೀಗಾಗಿಯೇ ತಮ್ಮ ಪ್ರಾಮಾಣಿಕತೆಯನ್ನು ಕಳ್ಳ ಸಂತೆಯಲ್ಲಿ ಮಾರಿಕೊಂಡ ಶ್ರೀಶಾಂತರಂಥಹವರ ಅಪರಾಧ ಹೆಚ್ಚೋ, ಅಥವಾ ಖುಲ್ಲಂಖುಲ್ಲಾ ತಮ್ಮ ಭಾವನೆ-ಅಭಿಪ್ರಾಯವನ್ನೇ ಕಾನೂನುಬಾಹಿರವಲ್ಲದ ರೀತಿಯಲ್ಲಿ ಅಡ ಇಟ್ಟು ಜೀತದಾಳುಗಳಾಗಿರುವ ಮಿಕ್ಕ ಮಹಾನುಭಾವರ ಮೌನದ ಅಪರಾಧ ಹೆಚ್ಚೋ ತಿಳಿಯಲಾರದಾಗಿದೆ. ಕಳ್ಳ ಸಂತೆಯೂ ಮಾರುಕಟ್ಟೆಯ ನಿಯಮಾನುಸಾರವೇ ನಡೆಯುವುದಲ್ಲವೇ? ಕಳ್ಳ ಸಂತೆಯಲ್ಲಿನ ಮಾಹಿತಿಯ ಅಸಮತೋಲನಕ್ಕೆ, ಪ್ರೈಸ್ ಡಿಸ್ಕವರಿಯ ಗೌರವವನ್ನು ಲೇಪಿಸಿಬಿಟ್ಟರೆ ಅದು ಕಾನೂನಿನ ಚೌಕಟ್ಟಿನೊಳಕ್ಕೆ ಬಂದುಬಿಡುತ್ತದೆ. ಕಾನೂನಿನ ಚೌಕಟ್ಟಿನಲ್ಲಿರುವುದೆಲ್ಲಾ ನೈತಿಕವೆಂದೇನೂ ಅಲ್ಲ. ಆದರೆ ಮಾರುಕಟ್ಟೆಯ ತಾಂಡವದಿಂದ ಬಂದ ಮರ್ಯಾದೆಯ ಕವಚವು ನೈತಿಕ ವಿಷಯಗಳು ಚರ್ಚೆಗೊಳಗಾಗದಂತೆ ಮಾಡಿಬಿಡುತ್ತದೆ.

ಬಿಸಿಸಿಐ, ಅದರ ಕಾರ್ಯರೂಪದ ನಿಗೂಢತೆಯನ್ನು ಅಲ್ಲಿನ ರಾಜಕೀರ ಧುರೀಣರ ಮೌನವನ್ನೂ, ತೆರೆಮರೆಯ ಒಪ್ಪಂದಗಳನ್ನೂ ಕಂಡಾಗ ನಮ್ಮ ರಾಜಕೀಯ ರಂಗದ ನಾಯಕರುಗಳ ಮೇಲಿನ ಗೌರವ ಹೆಚ್ಚುತ್ತದೆ. ತಮ್ಮ ಯಾವುದೇ ಕೆಲಸವನ್ನು ಜನರ ಹಾಗೂ ಸುದ್ದಿ ಮಾಧ್ಯಮಗಳ ದಿನನಿತ್ಯದ ತನಿಖೆಯಡಿಯಲ್ಲಿಯೇ – ಆರ್.ಟಿ.ಐ ನ ನೆರಳಿನಲ್ಲಿಯೇ ಕೆಲಸಮಾಡುತ್ತಾ, ವಿವಾದಗಳಾದಾಗ ಕ್ಯಾಮರಾದ ಮುಂದೆ ನಿಂತು ಸಮಜಾಯಿಷಿ ನೀಡುತ್ತಾ, ಕಷ್ಟವಾದಾಗ ರಾಜೀನಾಮೆ ನೀಡುತ್ತಾ, ಸಮಯವಾದಾಗ ಜನಮತಕ್ಕೆ ತಮ್ಮನ್ನೊಡ್ಡಿಕೊಂಡು ಸದಾ ನಿರಂತರ ಅಖಾಡದಲ್ಲಿರುವ ಈ ಧುರೀಣರ ಮೇಲೆ ನಮ್ಮ ನಂಬಿಕೆ ಹೆಚ್ಚಿಸಲು ಸಿನೇಮಾ-ಕ್ರೀಡೆಗಳ ಕಾರ್ಪರೇಟೀಕರಣ ಸಹಾಯ ಮಾಡಿದೆ. ಶುದ್ಧ ಕ್ರಿಕೆಟ್ಟಿನಿಂದ – ಪೈಜಾಮಾ ಕ್ರಿಕೆಟ್ಟಿಗೆ – ಅಲ್ಲಿಂದ ಟ್ವೆಂಟಿ-ಟ್ವೆಂಟಿಗೆ ನಡೆದಿರುವ ಪಯಣದಲ್ಲಿ ಮಾರುಕಟ್ಟೆಯ ಅಟ್ಟಹಾಸವನ್ನೂ ನೈತಿಕತೆಯ ಪತನವನ್ನೂ ನಾವು ಕಾಣುತ್ತಿದ್ದೇವೆ. ಹಾಗೆಯೇ ಸಿನೇಮಾದ ಇಡಿಯನ್ನು ಭಾಗಭಾಗವಾಗಿ ತುಂಡರಿಸಿ ಮಾರಾಟ ಮಾಡುವ – ಹಾಡು, ರಿಂಗ್ ಟೋನು, ಮೆಮೋರಾಬ್ಲಿಯಾ, ಸ್ಯಾಟೆಲೈಟು, ಡಿವಿಡಿ, ಪುಸ್ತಕ, ಕಲಾವಿದರ ಹಾಜರಿ – ಹೀಗೆ ಎಲ್ಲವನ್ನೂ ಒಂದು ಸಂಪಾದನೆಯ ಮಾರ್ಗವೆಂದು ಕಾಣುವ ಈ ಯುಗದಲ್ಲಿ ಶುದ್ಧ ಮನರಂಜನೆಯನ್ನು, ಆಟದ ಕಲಾತ್ಮಕತೆಯನ್ನೂ ಕಾಣುವುದು ಹೇಗೆ? ಅಥವಾ ಕಾಲವೇ ಬದಲಾಗಿ ನನಗೂ ತುಂಬಾ ವಯಸ್ಸಾಗಿಹೋಯಿತೇನೋ..

02 ಜೂನ್ 2013







1 comment:

  1. ಹೆಚ್ಚು ವಿಷ್ಲೇಶಾತ್ಮಕ ನೋಟ ಮೊದಲು ಯಾರಾದರೂ ಧುಮುಕಬಹುದಾದ ಚಿತ್ರ ಪ್ರಪಂಚ ಇದೀಗ ಸಂಕೀರ್ಣತೆಯನ್ನು ಪಡೆದುಕೊಂಡಿದೆ.
    ಕೇವಲ ನಟನೆಯಿಂದ,ನಿರ್ದೇಶನದ ಕೌಶಲದಿಂದ,ಒಂದು ಕಲಾಕೃತಿ ಸಿದ್ಧಪಡಿಸುವಷ್ಟಕ್ಕೇ ತಮ್ಮ ಆಸಕ್ತಿ ಸೀಮಿತಗೊಂಡು ಚಿತ್ರ ಪ್ರಪಂಚಕ್ಕೆ ಬರುವವರಿಗೆ ಇದೊಂದು ಎಚ್ಚರಿಕೆ ಗಂಟೆ ಎನ್ನಿಸುತ್ತಿದೆ.

    ReplyDelete