Tuesday, April 23, 2013

ಸಹಕಾರಕ್ಕೂ ಸರಕಾರಕ್ಕೂ ಇರಬೇಕಾದ ದೂರ


ಸಹಕಾರೀ ಕ್ಷೇತ್ರದಲ್ಲಿರುವ ಗುಜರಾತಿನ ಅಮುಲ್ ಸಂಸ್ಥೆ ಜಗತ್ತಿನಲ್ಲಿಯೇ ಮಾದರಿ ಸಹಕಾರಿ ಸಂಸ್ಥೆಯಾಗಿ ನಿಂತಿದೆ. ಆದರೆ ಅಮುಲ್ ಸಂಸ್ಥೆಯನ್ನು ಕಟ್ಟಿದ ನಾಯಕರು ರಾಜಕೀಯವಾಗಿ ಯಾವ ಸಾಫಲ್ಯವನ್ನೂ ಪಡೆಯಲಿಲ್ಲ. ಯಾರೂ ಮುಖ್ಯಮಂತ್ರಿಯಾಗಲಿಲ್ಲ, ದೊಡ್ಡ ರಾಜಕೀಯ ಹುದ್ದೆಯನ್ನಲಂಕರಿಸಲಿಲ್ಲ. ಅಮುಲ್ ಸಂಸ್ಥೆಯ ಮುಖವಾಗಿ ನಮಗೆ ಕಂಡದ್ದು ಕುರಿಯನ್ ಎಂ ರೈತಹಿತೈಶಿ ಮಾತ್ರ. ಅಮುಲ್ ಮೊದಲಿನಿಂದಲೂ ಸರಕಾರವನ್ನು ದೂರವಾಗಿಯೇ ಇಟ್ಟಿದೆ. ಸರಕಾರ ಅಮುಲ್ ಮೇಲೆ ಕೈಯಿಕ್ಕಿದಾಗೆಲ್ಲಾ ಕೈಸುಟ್ಟುಕೊಂಡಿದೆ.

ಹೈನುಗಾರಿಕೆ ಕ್ಷೇತ್ರದಲ್ಲಿ ಅತೀ ಹೆಚ್ಚು ವ್ಯಾಪಾರವನ್ನು ಮಾಡುತ್ತಿರುವ ಅಮುಲ್ ಮೊದಲ ಸ್ಥಾನದಲ್ಲಿದೆ. ಎರಡನೆಯ ಸ್ಥಾನದಲ್ಲಿರುವುದು ನಂದಿನಿ ಹೆಸರಿನಲ್ಲಿ ಹಾಲಿನ ಉತ್ಪನ್ನಗಳನ್ನು ಮಾರುತ್ತಿರುವ ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಲಿ (ಕೆಎಂಎಫ್). ಕೆಎಂಎಫ್ ಅನೇಕ ವರ್ಷಗಳಿಂದ ಸರಕಾರೀ ಕೃಪಾಪೋಷಿತ ಮಹಾಮಂಡಲಿಯಾಗಿಯೇ ಉಳಿದಿದೆ. ಇದೀಗ ಕೆಎಂಎಫ್ ಆರ್ಥಿಕ ಸಂಕಟದೆಡೆಗೆ ಧಾವಿಸುತ್ತಿದೆ. ತನ್ನ ಸ್ಥಾನವನ್ನೂ ಮಾನವನ್ನೂ ಅತೀ ಶೀಘ್ರದಲ್ಲಿ ಕಳೆದುಕೊಳ್ಳುವ ಅಪಾಯದಲ್ಲಿದೆ.

ಈ ಪರಿಸ್ಥಿತಿ ಒದಗಲು ಮುಖ್ಯಕಾರಣ ನಮ್ಮ ಕಣ್ಣಿಗಪ್ಪಳಿಸುವಂತೆ "ಅಮಾಯಕ" ಸರಕಾರವೇ ಕಾಣುತ್ತದೆ. ದೇಶಾದ್ಯಂತ ಅಮುಲ್ ಹಾಲು ಪ್ರತೀ ಲೀಟರಿಗೆ 30 ರೂಪಾಯಿಗಳಿಗಿಂತ ಹೆಚ್ಚಿನ ದರದಲ್ಲಿ ಮಾರಾಟವಾಗುತ್ತಿದೆ. ನಾಲ್ಕು ರೂಪಾಯಿ ಹೆಚ್ಚಿಸಿ ಒಂದು ರೂಪಾಯಿ ತಗ್ಗಿಸಿರುವ ನಂದಿನಿ ಹಾಲಿನ ಬೆಲೆ 27 ರೂಪಾಯಿಗಳು. ಇದಕ್ಕೂ ಮೊದಲು ಯಾವದರದಲ್ಲಿ ಮಾರಾಟವಾಗುತ್ತಿತ್ತೆನ್ನುವುದಕ್ಕೆ ಗಹನವಾದ ಲೆಕ್ಕ ಬೇಕಿಲ್ಲ. ಅಂದರೆ ಹಾಲಿನ ದರವನ್ನು ಸಮರ್ಪಕವಾಗಿ ಹೆಚ್ಚಿಸಲು ಅವಕಾಶ ನೀಡದ ಸರಕಾರದಿಂದ ಉಪಯೋಗವಾಗಿರುವುದು ಲೀಟರಿಗೆ ರೂ.3-4 ಕಡಿಮೆ ದರವನ್ನು ನೀಡುತ್ತಿರುವ ನಗರದ ಗ್ರಾಹಕರಿಗೆ. ಹಾಲಿನ ದರವನ್ನು ಕಡಿಮೆಯಾಗಿಸಿದ್ದರಿಂದ ರೈತರಿಗೆ ಸಂದಾಯವಾಗುವ ಬೆಲೆಯೂ ಕಡಿಮೆಯೇ ಇರುತ್ತದೆ. ಅದನ್ನು ಪರಿಹರಿಸಲು ರೈತರಿಗೆ ನೇರವಾಗಿ ಲೀಟರಿಗೆ ರೂ.2 ದೇಣಿಗೆಯನ್ನು ನೀಡಿ ತಾನು ರೈತಪರ ಎಂದು ಸರಕಾರ ಸಾರಿಕೊಂಡಿತು. ಈಗ ಮೊತ್ತವನ್ನೂ ಸಮಯಕ್ಕೆ ನೀಡುತ್ತಿಲ್ಲ. ಮಾರುಕಟ್ಟೆಯ ದರದಲ್ಲೇ ಹಾಲನ್ನು ಮಾರಿದ್ದರೆ ಮಹಾಮಂಡಲಿಗೂ, ತನ್ಮೂಲಕ ರೈತರಿಗೂ ಯಾವ ದೇಣಿಗೆಯಿಲ್ಲದೆಯೇ ಅಷ್ಟೂ ದುಡ್ಡು ಬರುತ್ತಿತ್ತು. ರೈತಪರವೆನ್ನುವ ಈ ಬೂಟಾಟಿಕೆ ನಿಜಕ್ಕೂ ನಗರದ ಗ್ರಾಹಕರ ಪರವಾಗಿತ್ತು. ಸದರಿ ಆಳುವ ಪಕ್ಷಕ್ಕೆ ಹೆಚ್ಚಿನ ವೋಟುಗಳು ನಗರ ಪ್ರದೇಶದಿಂದ ಬರುತ್ತದೆ ಎನ್ನುವುದನ್ನು ನೋಡಿದಾಗ ಇದರ ಮಜಕೂರು ಅರ್ಥವಾಗುತ್ತದೆ.

19ನೇ ಶತಮಾನದಲ್ಲಿ ರೂಪಿಸಿದ ಸಹಕಾರೀ ಸೂತ್ರಗಳಾಧಾರದ ಮೇಲೆ ನಡೆಯುವ ಸಹಕಾರೀ ಸಂಸ್ಥೆಗಳು ಬರೇ ಬಂಡವಾಳಶಾಹಿ ಪದ್ಧತಿಯನ್ನು ನಿರಾಕರಿಸಿದವೇ ಹೊರತು ವ್ಯಾಪಾರವನ್ನಲ್ಲ.

ಖಾಸಗೀ ಸಂಸ್ಥೆಗಳು ಬಂಡವಾಳವನ್ನೇ ಆಧಾರಸೂತ್ರವನ್ನಾಗಿಟ್ಟುಕೊಂಡು ನಡೆಯುವ ಸಂಸ್ಥೆಗಳು. ಇಟ್ಟ ಬಂಡವಾಳದ ಮೇಲೆ ಸಾಲ, ಆ ಧನದಿಂದ ಫ್ಯಾಕ್ಟರಿಯನ್ನು ಕಟ್ಟುವುದು, ನೌಕರರನ್ನು ನಿಯಮಿಸಿಕೊಳ್ಳುವುದು, ಮತ್ತು ಇರುವ ದುಡ್ಡಿನನುಸಾರ ಹಾಲನ್ನು ಖರೀದಿಸಿ ವ್ಯಾಪಾರ ಮಾಡುವುದು. ಲಾಭಾರ್ಜನೆಯನ್ನು ಹೂಡಿದ ಬಂಡವಾಳದನುಸಾರವಾಗಿ ಮಾಪನ ಮಾಡಿದರೆ ಆ ಸಂಸ್ಥೆಗಳ ಸಾಫಲ್ಯ ನಮಗೆ ತಿಳಿಯುತ್ತದೆ.

ಆದರೆ ಬಂಡವಾಳವೇ ಆಧಾರಸೂತ್ರವಾದ ಆ ಪದ್ಧತಿಯನ್ನು ಬದಲಾಯಿಸಬಹುದೇ? ಬಂಡವಾಳ ಮುಖ್ಯ, ಆದರೆ ಮೂಲ ಆಧಾರವಲ್ಲ ಎಂದು ಬದಲಿಸಿದಾಗ ಸಹಕಾರ ಹುಟ್ಟಿಕೊಳ್ಳುತ್ತದೆ. ಮೂಲಧನವನ್ನು ಬದಿಗಿಟ್ಟು ಹಾಲನ್ನು ಆಧಾರ ಸೂತ್ರವಾಗಿಸಿದರೆ ಏನಾಗಬಹುದು? ಎಷ್ಟು ಹಾಲನ್ನು ಶೇಕರಿಸಬಹುದೋ ಅಷ್ಟೇ ದೊಡ್ಡ ಫ್ಯಾಕ್ಟರಿಯನ್ನು ಕಟ್ಟಬೇಕು, ಅದಕ್ಕೆ ಬೇಕಾದ ಬಂಡವಾಳ, ಸಾಲವನ್ನು ಹೊಂದಿಸಬೇಕು, ನೌಕರರನ್ನು ನಿಯಮಿಸಬೇಕು ಹಾಗೂ ಬಂದ ಲಾಭವನ್ನು ಹಾಲಿನ ಸರಬರಾಜಿನ ಪರಿಮಾಣದಲ್ಲಿ ಪ್ರಕಾರ (ಬಂಡವಾಳಶಾಹಿಗಳು ಕೊಡುವ ಪ್ರತೀ ರೂಪಾಯಿ ಹೂಡಿಕೆಗೆ ಇಷ್ಟು ಲಾಭವೆನ್ನುವುದಕ್ಕೆ ಬದಲಾಗಿ) ಪ್ರತೀ ಲೀಟರ್ ಹಾಲಿಗಿಷ್ಟು ಲಾಭವೆನ್ನುವ ಮಾಪನ ಹುಟ್ಟುತ್ತದೆ.

ಹಾಲು ಉತ್ಪಾದಕರ ಸಹಕಾರ ಸಂಘ ತನ್ನ ವ್ಯಾಪಾರ ಚೆನ್ನಾಗಿ ಆಗುವ ಮಟ್ಟಿಗೆ ಗ್ರಾಹಕರ ಹಿತದೃಷ್ಟಿಯನ್ನು ಕಾಪಾಡಬೇಕು. ಅದನ್ನೇ ಅಮುಲ್ ಮಾಡುತ್ತಿದೆ. ಹೀಗಾಗಿ ಶೇಕರಿಸುತ್ತಿರುವ ಹಾಲಿನ ಪರಿಮಾಣ ಕಡಿಮೆಯಾಗುವ ಸೂಚನೆಯೋ ಹೈನುಗಾರಿಕೆಯ ಲಾಭಂಶದ ಬಗ್ಗೆಯೋ ಅನುಮಾನ ಬಂದಕೂಡಲೇ ಅಮುಲ್ ಯಾರ ಪರವಾನಗಿ ಕೇಳದೆಯೇ ಹಾಲಿನ ದರವನ್ನು ಹೆಚ್ಚಿಸುತ್ತದೆ. ಯಾವುದೇ ಖಾಸಗೀ ಸಂಸ್ಥೆಯ ಹಾಗೆಯೇ ಲಾಭಾಂಶವನ್ನು ಪಡೆಯುವುದೇ ಅಮುಲ್ ಸಂಸ್ಥೆಯ ಉದ್ದೇಶವಾಗಿದೆ. ವ್ಯತ್ಯಾಸವಿದ್ದರೆ ಅದು ಲಾಭಾಂಶವನ್ನು ಹಂಚುವ ರೀತಿಗೆ ಸೀಮಿತವಾಗಿದೆ. ಹಾಲು ಉತ್ಪಾದಕರ ಹಿತದೃಷ್ಟಿಯನ್ನು ಕಾಪಾಡಲ ಬೆಲೆಯನ್ನು ಹೆಚ್ಚಿಬೇಕಾದರೆ ಹಾಗೆ ಮಾಡುವುದು ಸಂಸ್ಥಾ ಧರ್ಮ, ಆ ಧರ್ಮದ ನಡುವೆ ಗ್ರಾಹಕರ ಹಿತದೃಷ್ಟಿ ತಲೆಹಾಕುವುದಿಲ್ಲ. ಇದರರ್ಥ ಅಮುಲ್ ಸಂಸ್ಥೆ ಗ್ರಾಹಕರ ಹಿತದೃಷ್ಟಿಯನ್ನು ಕಡೆಗಣಿಸುತ್ತಿದೆಯೆಂದೇನೂ ಅಲ್ಲ. ಹೈನುಗಾರಿಕೆಯ ಕ್ಷೇತ್ರದಲ್ಲಿ ಖಾಸಗೀ ಕಂಪನಿಗಳಿಗಿಂತ ಕಡಿಮೆ ಬೆಲೆಯಲ್ಲಿಯೇ ಹಾಲಿನ ಉತ್ಪನ್ನಗಳ ಮಾರಾಟವಾಗುತ್ತದೆ. ಆದರೆ ಗ್ರಾಹಕನನ್ನು ಓಲೈಸುವ, ಮತ್ತು ಉತ್ಪಾದಕರನ್ನು ರಕ್ಷಿಸುವ ಧರ್ಮಸಂಕಟದ ಪರಿಸ್ಥಿತಿ ಬಂದಾಗ ಅಮುಲ್ ಉತ್ಪಾದಕರ ಕಡೆಗೆ ವಾಲುತ್ತದೆ.



ಸರಕಾರವು ಸಹಕಾರೀ ಕ್ಷೇತ್ರದಲ್ಲಿ ಮೂಗು ತೂರಿಸಿದಾಗಲೆಲ್ಲ ಆ ಕ್ಷೇತ್ರದ ಸಂಸ್ಥೆಗಳನ್ನು ನಾಶ ಮಾಡಿದೆ. ಅನೇಕ ಜನರನ್ನು ಒಳಗೊಂಡ ಯಾವುದೇ ಸಂಸ್ಥೆಯಲ್ಲಿ ರಾಜಕೀಯವಿರುವುದು ಸಹಜವೇ. ಅಮುಲ್ ಕೂಡಾ ಅದಕ್ಕೆ ಹೊರತಲ್ಲ. ಆದರೆ ಆ ರಾಜಕೀಯ ಹೈನುಗಾರಿಕೆಗೆ ಸೀಮಿತವಾಗಿದೆ. ಯಾವ ಜಿಲ್ಲೆಯಲ್ಲಿ ಹಾಲಿನ ಪುಡಿಯ ಫ್ಯಾಕ್ಟರಿ ಹಾಕಬೇಕು, ಎಲ್ಲಿ ಪಶು ಆಹಾರ ಘಟಕ ಸ್ಥಾಪಿಸಬೇಕು, ಐಸ್ ಕ್ರೀಂ ತಯಾರಿಸುವವರು ಯಾರು – ಹೀಗೆ ಕಿತ್ತಾಟಗಳು ಇದ್ದೇ ಇರುತ್ತವೆ. ಆದರೆ ಸಹಕಾರೀ ರಂಗಕ್ಕೆ ಸರಕಾರ ತಲೆಹಾಕಿದಾಕ್ಷಣ, ಗ್ರಾಹಕರ ಹಿತದೃಷ್ಟಿಯನ್ನು ಹಿಗ್ಗಾಮುಗ್ಗಾ ಎಳೆದಾಕ್ಷಣ ಸಹಕಾರದ ನಾಶದ ಬೀಜನ್ನು ಬಿತ್ತಿದಂತಾಗುತ್ತದೆ.

ಖಾಸಗಿ ಸಂಸ್ಥೆಗಳು ಕಷ್ಟಕಾಲದಲ್ಲಿ ಕೆಲವು ವರ್ಷ ಲಾಭವನ್ನಾರ್ಜಿಸದಿದ್ದರೂ, ತಾವು ಉಳಿಯಲೇಬೇಕೆನ್ನುವ ಪ್ರಯತ್ನದಲ್ಲಿ ಸಂಭಾಳಿಸಿಕೊಂಡು ಹೋಗುತ್ತವೆ. ಆದರೆ ಸಹಕಾರಿ ಸಂಸ್ಥೆಗಳ ಕಷ್ಟಕಾಲಕ್ಕೆ ಇದು ಅನ್ವಯವಾಗುವುದಿಲ್ಲ. ಖಾಸಗೀ ಸಂಸ್ಥೆಗಳಲ್ಲಿ ಹೂಡಿಕೆದಾರರ ಮೂಲಧನ ಒಳಗೊಂಡಿರುತ್ತದೆ; ಅದನ್ನು ಉಳಿಸಲು ಅವರು ಹೆಣಗಾಡುತ್ತಾರೆ. ಆದರೆ ಸಹಕಾರೀ ಸಂಸ್ಥೆ ಕಷ್ಟಕ್ಕೆ ಸಿಕ್ಕಾಗ ಯಾರಿಗೂ ತಮ್ಮದೇನೋ ಕಳೆದುಹೋಗುತ್ತಿದೆ ಎನ್ನುವ ಕಳಕಳಿಯಿರುವುದಿಲ್ಲ. ಸಂಸ್ಥೆಯನ್ನು ಉಳಿಸಬೇಕೆನ್ನುವಂಥಹ ಕಳಕಳಿ ವಿಚಾರಧಾರೆಯಿಂದ ಮಾತ್ರ ಹೊರಹೊಮ್ಮುತ್ತದೆ. ಏಕೆಂದರೆ, ಮಾರನೆಯದಿನ ತಮ್ಮ ಹಾಲಿನ ಖರೀದಿಗೆ ಮತ್ತೊಬ್ಬ ವ್ಯಾಪಾರಿ ತಯಾರಾದರೆ ಅತ್ತ ಹೋಗಿ, ಖಾಸಗೀ ವ್ಯಾಪಾರಿಗಳಿಗೆ ಹಾಲನ್ನು ಮಾರಾಟಮಾಡುವುದೂ ಸುಲಭವೂ, ವಿಚಾರಧಾರೆಯನ್ನು ಮೀರಿದ್ದೂ ಆಗುತ್ತದೆ.

ಹೀಗಾಗಿಯೇ ಸಹಕಾರೀ ಕ್ಷೇತ್ರದ ಸಂಸ್ಥೆಗಳನ್ನು ಕಟ್ಟುವುದೂ, ಬೆಳೆಸುವುದೂ ಅತ್ಯಂತ ಕಷ್ಟವಾದ ಕೆಲಸ. ಆದರೆ ಅವುಗಳ ನಾಶದ ಮಾರ್ಗ ಸುಲಭದ್ದು. ಇಸ್ಪೀಟೆಲೆಗಳ ಮಹಾಗೋಪುರವನ್ನು ಕಟ್ಟುವ – ಉಫ್ ಎಂದು ಊದಿ ಉರುಳಿಸುವ ಚಿತ್ರವನ್ನು ಊಹಿಸಿಕೊಳ್ಳಿ. ಸಹಕಾರವೂ ಹಾಗೆಯೇ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಸಹಕಾರಿ ಡೈರಿ ಅದ್ಭುತವಾಗಿ ನಡೆಯುತ್ತಿತ್ತು. ಇಂದಿನ ನಂದಿನಿಯಂತೆ ಅಂದಿನ ವಿಜಯಾ ದೇಶದಲ್ಲಿ ಮಾರಟವಾಗುತ್ತಿದ್ದ ಡೈರಿ ಪದಾರ್ಥಗಳ ಎರಡನೆಯ ದೊಡ್ಡ ಬ್ರಾಂಡ್ ಆಗಿತ್ತು. ಚಿತ್ತೂರಿನ ಡೈರಿಯ ಹಾಲಿಗೆ ಬೆಂಗಳೂರು, ತಿರುಪತಿ ಮತ್ತು ಮದರಾಸು ಸಹಜವಾದ, ಸಮೀಪದ ಮಾರುಕಟ್ಟೆಗಳಾಗಿದ್ದುವು. (ಆಗ ಕೋಲಾರದಲ್ಲಿ ಈಗಿದ್ದಷ್ಟು ಹಾಲಿನ ಉತ್ಪತ್ತಿಯಿರಲಿಲ್ಲ). ಕೆಲವೇ ದಿನಗಳಲ್ಲಿ ಚಿತ್ತೂರಿನ ಸಹಕಾರಿ ಡೈರಿ ತನ್ನೆಲ್ಲ ವ್ಯಾಪಾರವನ್ನೂ ಕಳೆದುಕೊಂಡು ಶಿಥಿಲಾವಸ್ಥೆ ಸೇರಿತು. ಇದರಲ್ಲಿ ರಾಜಕೀಯವೂ, ಸರಕಾರದ ಪಾತ್ರವೂ ಉಂಟು.

ಸರಕಾರದ ಪಾತ್ರ ಇಂತಿತ್ತು – ಚಿತ್ತೂರು ಆಂಧ್ರಪ್ರದೇಶದಲ್ಲಿದೆ ಎನ್ನುವ ಕಾರಣವಾಗಿ ಅಲ್ಲಿನ ಹಾಲನ್ನು ಸಮೀಪದ ಬೆಂಗಳೂರು-ಮದರಾಸುಗಳಿಗೆ ಕಳುಹಿಸುವುದಕ್ಕೆ ಬದಲಾಗಿ ದೂರದ ಹೈದರಾಬಾದಿಗೆ ಕಳುಹಿಸಬೇಕೆನ್ನುವ ಫರ್ಮಾನು ಬಂತು. ತಿರುಪತಿಯ ದೇವಸ್ಥಾನದಿಂದ ಬರುತ್ತಿದ್ದ ಆರ್ಡರು ಡೈರಿಯ ತುಪ್ಪದ ಗುಣಮಟ್ಟ ಸರಿಯಿಲ್ಲವೆನ್ನುವ ಕಾರಣಕ್ಕೆ ನಿಂತಿತು. ಕಳುಹಿಸಿದ್ದ ತುಪ್ಪದ ದುಡ್ಡನ್ನೂ ನಿಲ್ಲಿಸಿ ಮೂಗಿಗೆ ತುಪ್ಪ ಹಚ್ಚಲಾಯುತು. ಹೈದರಾಬಾದಿನಿಂದ ಬರಬೇಕಿದ್ದ ಹಣವೂ ತಕ್ಷಣಕ್ಕೆ ಬರಲಿಲ್ಲ. ಇದ್ದಕ್ಕಿದ್ದ ಹಾಗೆ ಚಿತ್ತೂರು ಡೈರಿಯ ಬಳಿ ರೈತರಿಗೆ ಸಂದಾಯ ಮಾಡಲು ಹಣವೇ ಇಲ್ಲದಾಯಿತು. ಆ ಸಮಯಕ್ಕಲ್ಲಿ ಹೆರಿಟೇಜ್ ಡೈರಿ ಸ್ಥಾಪನೆಯಾಗಿ ಹಾಲನ್ನು ಖರೀದಿಸುವ ಕೆಲಸ ಪ್ರಾರಂಭಿಸಿತು. ರೈತರು ವಿಜಯಾದಿಂದ ಹೆರಿಟೇಜಿನತ್ತ ಬಿಜಯಂಗೈದರು. ಹೆರಿಟೇಜಿನ ಮಾಲೀಕರು (ಆಗ ಅಧಿಕಾರದಲ್ಲಿಲ್ಲದ) ಚಂದ್ರಬಾಬು ನಾಯುಡು.  

ಕೆಲವೇ ದಿನಗಳ ಮುಗ್ಗಟ್ಟು ಇಡೀ ಸರಬರಾಜು ವ್ಯವಸ್ಥೆಯನ್ನೇ ನುಂಗಿಬಿಟ್ಟಿತ್ತು. ಇದು ಚಿತ್ತೂರಿನ ಕಥೆ. ಆದರೆ ವಿಜಯಾ ಬ್ರಾಂಡು ಇದೇ ರೀತಿ ಸರಕಾರೀ ಹಸ್ತಕ್ಷೇಪದಿಂದಾಗಿ ಹೇಳಹೆಸರಿಲ್ಲದೇ ನಾಶವಾಗಿಹೋಯಿತು. ಕಳೆದ ಕೆಲ ವರ್ಷಗಳಿಂದ ಸರಕಾರದ ಕೃಪಾ ದೃಷ್ಟಿ ನಂದಿನಿಯ ಮೇಲಿದೆ. ನಂದಿನಿಗೆ ಉಳಿಗಾಲವಿದೆಯೇ?. ಕೆಎಂಎಫ್ ಆರ್ಥಿಕ ಮುಗ್ಗಟ್ಟಿಗೆ ಸಿಕ್ಕದಿನ ಖಾಸಗೀ ಕ್ಷೇತ್ರವು ಕರ್ನಾಟಕದ ಹೈನುಗಾರಿಕೆಯನ್ನು ಕಬಳಿಸಿಬಿಡುತ್ತದೆ. ಆ ದಿನ ದೂರವಿದ್ದಂತಿಲ್ಲ. ನಂದಿನಿಯನ್ನು ಉಳಿಸಬೇಕಿದ್ದರೆ ಮೊದಲಿಗೆ ದರನಿಗದಿಯಲ್ಲಿ ಸರಕಾರದ ಹಸ್ತಕ್ಷೇಪ ನಿಲ್ಲಬೇಕು. ಅಷ್ಟೇ. ಈ ನಿಟ್ಟಿನಲ್ಲಿ ಕೆಎಂಎಫ್ ಸರಕಾರದ ಸಹಾಯ ಕೇಳುವುದು ಸಹಜವೂ ಸಮಂಜಸವೂ ಹೌದು. ಆದರೆ ಸರಕಾರ ಸಹಕಾರಿಗಳನ್ನು ತನ್ನ ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳುವುದರಿಂದ ಸಹಕಾರದ ಮೂಲಕ್ಕೇ ಮುಳುವಾಗುವುದೆಂದು ನಾವು ಮನಗಾಣಬೇಕಾಗಿದೆ.

April 9, 2013




No comments:

Post a Comment