
ಆರ್ಥಿಕ ಜಗತ್ತಿನ
ಪ್ರತೀಕಗಳಾಗಿದ್ದ ಜಂಟಿಗೋಪುರಗಳು ಕುಸಿಯುತ್ತಿದ್ದಂತೆ ಭದ್ರತೆಯ ಉದ್ಯಮಕ್ಕೆ ಒಂದು ಹೊಸದೇ
ಹುರುಪು ಬಂದಿತು. ಹೆಚ್ಚಾಗಿ ಖಾಸಗಿ ಕ್ಷೇತ್ರದಲ್ಲಿರುವ ಭದ್ರತಾ ಪರಿಕರಗಳನ್ನು ತಯಾರಿಸುವ
ಕಂಪನಿಗಳ ಲಾಭಾಂಶ ಹೆಚ್ಚುತ್ತಿದ್ದಂತೆ, ಸರಕಾರಗಳ ಖೋತಾ ಬೆಳೆಯುತ್ತಾ ಹೋಯಿತು. ಎಲ್ಲರೂ ತೆತ್ತ
ಆದಾಯ ಮತ್ತು ಇತರ ತೆರಿಗೆಗಳನ್ನು ತಮ್ಮ ದೇಶದ ಜನರ ಸುರಕ್ಷತೆಗಾಗಿ ಉಪಯೋಗಿಸಿದ್ದರಿಂದಾಗಿ
ಭದ್ರತೆಯ ಉದ್ಯಮದ ಪೋಷಣೆಯಾದದ್ದು ಸಹಜವೇ ಇತ್ತು. ಜಗತ್ತು ಈ ಆರ್ಥಿಕ ಹಲ್ಲೆಯಿಂದ ಚೇತರಿಸಿಕೊಂಡು
ಕೆಲ ವರ್ಷಗಳಲ್ಲಿ ಹೊಸ ವಿತ್ತೀಯ ಸ್ಥರವನ್ನು ಸೇರಬಹುದಿತ್ತು.

ಈ ಎರಡೂ ಯುದ್ಧಗಳ ಮೇಲೆ
ಈ ಹನ್ನೆರಡು ವರ್ಷಗಳಲ್ಲಿ 1.5 ಟ್ರಿಲಿಯನ್ ಡಾಲರುಗಳು ನೇರವಾಗಿ ಖರ್ಚಾಗಿದೆಯೆಂದು ನ್ಯಾಷನಲ್
ಪ್ರಯಾರಿಟೀಸ್ ಪ್ರಾಜೆಕ್ಟ್ ಲೆಕ್ಕ ಕಟ್ಟಿದೆ. ಇದನ್ನು ನೋಡಿದಾಗ ಭಯೋತ್ಪಾದನೆಯ ಮೇಲಿನ ಆರ್ಥಿಕ
ಸಮರದಲ್ಲಿ ಭಯೋತ್ಪಾದನೆಯದೇ ಮೇಲುಗೈಯೆಂಬ ಸಕಾರಣವಾದ ಅನುಮಾನವನ್ನು ನಾವು ವ್ಯಕ್ತಪಡಿಸಬಹುದು.

ಯಾವ ದೇಶ – ಯಾರ ಮೇಲೆ –
ಯಾವ ಪರಿಸ್ಥಿತಿಯಲ್ಲಿ ಯುದ್ಧ ಸಾರುತ್ತದೆ ಅನ್ನುವುದನ್ನು ಆಧಾರವಾಗಿಟ್ಟುಕೊಂಡು ಆ ದೇಶದ
ಅರ್ಥವ್ಯವಸ್ಥೆಗೆ ಅದು ಒಳಿತೋ ಅಲ್ಲವೋ ಎನ್ನುವ ವಿಲಕ್ಷಣ ಚರ್ಚೆಯನ್ನು ಮಾಡಬಹುದು. ಈ
ಉದಹರಣೆಯಲ್ಲಿ -
ಒಂದು: ಅಮೆರಿಕ ಸಾರಿದ
ಯುದ್ಧದಿಂದಾಗಿ ಶಸ್ತ್ರಾಸ್ತ್ರ ತಯಾರಿಕರಿಗೆ ಹೆಚ್ಚಿನ ವ್ಯಾಪಾರ ಸಿಕ್ಕಿರಬಹುದು. ಈ ಯುದ್ಧದಲ್ಲಿ
ಉಪಯೋಗಿಸಿರುವ ಶಸ್ತ್ರಾಸ್ತ್ರಗಳ ತಯಾರಿ ತಮ್ಮದೇ ದೇಶದಲ್ಲಿ ಆಗಿದ್ದು ಅದರ ಫಾಯಿದೆ ಖಾಸಗೀ
ಕ್ಷೇತ್ರದ ಅಸ್ತ್ರ ತಯಾರಕರಿಗಾಗುತ್ತದೆ. ಸರಕಾರಕ್ಕೆ ಒಟ್ಟೂ ಖರ್ಚು ಮಾಡಿದ್ದಕ್ಕೆ ಪ್ರತಿಫಲವಾಗಿ
ಅದರ ಒಂದು ಭಾಗ ಮಾತ್ರ ತೆರಿಗೆಯಾಗಿ ಸಿಗುತ್ತದೆ. ಈ ಯುದ್ಧವನ್ನು ಇನ್ಯಾವುದೇ ದೇಶ ಸಾರಿ,
ಅಮೆರಿಕದ ಶಸ್ತ್ರಾಸ್ತ್ರಗಳನ್ನು ಖರೀದಿಸಿದ್ದರೆ ಆಗ ಅಮೆರಿಕಕ್ಕೆ ಫಾಯಿದೆಯಾಗುತ್ತಿತ್ತು.
ಅರ್ಥಾತ್: ತಾವು ಉತ್ಪನ್ನ ಮಾಡುವ ವಸ್ತುಗಳಿಗೆ ತಾವೇ ಗ್ರಾಹಕರಾಗಿ ಆ ವಸ್ತುಗಳನ್ನ ತಾವೇ
ಹಚ್ಚೆಚ್ಚು ಬಳಸಿದರೆ ಯಾವುದೇ ಫಾಯಿದೆಯಿಲ್ಲ!
ಎರಡು: ಇರಾಕಿನ ಮೇಲೆ
ಸಾರಿದ ಯುದ್ಧದಿಂದಾಗಿ ಅಲ್ಲಿನ ತೈಲ ನಿಕ್ಷೇಪಗಳ ಮೇಲೆ ಒಂದು ಕೈಯಿಕ್ಕಬಹುದೆನ್ನುವ ಆಶಾವಾದವೂ
ನಿಜವಾಗಲಿಲ್ಲ. ಯುದ್ಧ ಸಾರುವಾಗ - ಇರಾಕಿನ ಯುದ್ಧಕ್ಕೆ ಅಮೆರಿಕಕ್ಕೆ ಆಗುವ ನಿವ್ವಳ ಖರ್ಚು
ಹೆಚ್ಚೇನೂ ಅಲ್ಲ. ಆ ಖರ್ಚನ್ನು ಕಡಿತಗೊಂಡ ತೈಲದ ಬೆಲೆಯಿಂದಲೇ ವಸೂಲು ಮಾಡಬಹುದು ಎನ್ನುವ
ವಿಲಕ್ಷಣ ವಾದವನ್ನು ಮಂಡಿಸಲಾಗಿತ್ತು. ಆದರೆ ಆ ವಾದ ಕೆಲಸ ಮಾಡಿದಂತಿಲ್ಲ. ಅಧ್ಯಕ್ಷ ಬುಷ್ ಮತ್ತು
ಆತನಿಗೆ ಉಪದೇಶ ನೀಡುತ್ತಿದ್ದ ಇತರರಿಗೆ ಇದು ಗೊತ್ತಿರಲಿಲ್ಲವೆಂದೇ ಅನ್ನಿಸುತ್ತದೆ.
ಈ ಎಲ್ಲ ಚರ್ಚೆಯಿಂದ
ನಮಗೇನಾಗಬೇಕಾಗಿದೆ? ಜಗತ್ತಿನ ಅತ್ಯಂತ ಬಲಶಾಲೀ ರಾಷ್ಟ್ರವೊಂದು ಆರ್ಥಿಕವಾಗಿ ಹೀಗೆ ಏಕಾಏಕಿ
ಪ್ರಪಾತಕ್ಕಿಳಿಯುವುದೂ ನಮಗೂ ಜಗತ್ತಿಗೂ ಕಷ್ಟದ ವಿಚಾರವೇ. ನಾವು ಆರ್ಥಿಕವಾಗಿ
ಬಲಶಾಲಿಗಳಾಗಬೇಕಾದರೆ ನಮ್ಮ ಗ್ರಾಹಕರೂ, ಸುತ್ತಮುತ್ತಲಿನ ಪರಿಸರ ನಮ್ಮ ಉತ್ಪನ್ನವನ್ನು ಕೊಳ್ಳುವ
ಶಕ್ತಿಯನ್ನು ಹೊಂದಿದವರಾಗಿರಬೇಕು. ಈ ಯುದ್ಧದಿಂದ ಅಮೆರಿಕಕ್ಕಾಗಲೀ, ಅಫಘಾನಿಸ್ತಾನಕ್ಕಾಗಲೀ,
ಇರಾಕಿನ ಶ್ರೀ ಸಾಮಾನ್ಯರಿಗಾಗಲೀ ಯಾವುದೇ ಫಾಯಿದೆಯಾಗಿಲ್ಲ. ಒಟ್ಟಾರೆ ಸರ್ವನಾಶದ ಹಾದಿಯ ಈ
ಯುದ್ಧಗಳಿಂದ ಆದ ಆರ್ಥಿಕ ಕಷ್ಟಗಳ ಅನುರಣನ ವಿಶ್ವದಾದ್ಯಂತ ಕಾಣಿಸುತ್ತಿದೆ. ಈ ಯುದ್ಧಗಳು
ಅಮೆರಿಕೆಗೂ ಯುದ್ಧಕೋರ ರಾಷ್ಟ್ರಗಳಿಗೂ ತುಟ್ಟಿಯಾದ ಅರ್ಥಶಾಸ್ತ್ರದ ಪಾಠಗಳನ್ನು ಕಲಿಸಿವೆ.
ಯುದ್ಧದ ಖರ್ಚು
ಯುದ್ಧಕ್ಕೇ ಸೀಮಿತಗೊಳ್ಳುವುದಿಲ್ಲ ಎಂದು ಸ್ಟಿಗ್ಲಿಟ್ಜ್ ಮತ್ತು ಬಿಲ್ಮ್ಸ್ ವಾದಿಸುತ್ತಾರೆ.
ಯುದ್ಧದಿಂದಾಗಿ ಪುನರ್ನಿರ್ಮಾಣದ ಖರ್ಚೂ, ಯುದ್ಧದಲ್ಲಿ ಹೋರಾಡಿದ ಗಾಯಾಳುಗಳ ಶೂಶ್ರೂಶೆಯ ಖರ್ಚೂ,
ನಾಶಗೊಂಡ ಶಸ್ತ್ರಾಸ್ತ್ರಗಳನ್ನು ಪುನಃ ಪಡೆಯಬೇಕಾದ ಖರ್ಚೂ ಸೇರಿರುವುದರಿಂದ ಈ ಜಂಟಿ ಯುದ್ಧದ
ಒಟ್ಟಾರೆ ಖರ್ಚು ಮೂರು ಟ್ರಿಲಿಯನ್ ಡಾಲರುಗಳೆಂದು ಅವರು ಐದು ವರ್ಷಗಳ ಹಿಂದೆ ಲೆಕ್ಕಮಾಡಿದ್ದರು.
ಅವರು ಅಂದಾಜು ಮಾಡಿರುವ ಖರ್ಚಿನಲ್ಲಿ ಯುದ್ಧದ ಖರ್ಚಿಗೆ ಪಡೆದಿರುವ ಸಾಲದ ಮೇಲಿನ ಬಡ್ಡಿ, ಮತ್ತು
ನೇರವಾಗಿ ಗುರುತಿಸಲಾಗದ ಅನೇಕ ಖರ್ಚುಗಳನ್ನು ಸೇರಿಸಿಲ್ಲ. ಆದರೂ, ಮೂರು ಟ್ರಲಿಯನ್
ಡಾಲರುಗಲೆಂದರೆ ನೂರೈವತ್ತು ಲಕ್ಷ ಕೋಟಿ ರೂಪಾಯಿಗಳು. ಇದರ ಅಂದಾಜು ಸಿಗಬೇಕೆಂದರೆ ಭಾರತದ
2012-13ರ ಬಜೆಟ್ಟಿನಲ್ಲಿ ನಮ್ಮ ಸರಕಾರದ ‘ಆಯ‘ದ ಅಂದಾಜು ಹತ್ತುಲಕ್ಷ ಕೋಟಿರೂಪಾಯಿಗಳಿದ್ದುವು
ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳೋಣ. ಇದು ಇಂದಿನ ಭಾರತ ಸರಕಾರದ ಹದಿನೈದು ವರ್ಷಗಳ ಆಯಕ್ಕೆ
ಸಮಾನವಾಗಿದೆ. ಈ ಇಷ್ಟೂ ಖರ್ಚನ್ನು ಭರಿಸುತ್ತಿರುವುದು ಅಮೆರಿಕದ ಇಂದಿನ, ಮುಂದಿನ ತಲೆಮಾರಿನ
ಜನತೆ.
ಈ ಇಷ್ಟೂ ಹಣ
ಸಕಾರಾತ್ಮಕವಾಗಿ ಉಪಯೋಗಗೊಂಡಿದ್ದರೆ ಅಮೆರಿಕ ಇನ್ನಷ್ಟು ಉತ್ತಮ ಪರಿಸ್ಥಿತಿಯಲ್ಲಿರುತ್ತಿತ್ತು.
ಜಗತ್ತಿನ ಹಲವು ದೇಶಗಳಿಗೆ ಇದರಿಂದ ಫಾಯಿದೆಯಾಗುತ್ತಿತ್ತು. ಈ ಹಣ ಖರ್ಚಾಗದಿದ್ದರೂ ಕಡಿಮೆ
ತೆರಿಗೆಯಿಂದ ಇಂದಿನ ಮುಂದಿನ ತಲೆಮಾರುಗಳು ಇನ್ನಷ್ಟು ಸುಖದಿಂದ ಇರಬಹುದಿತ್ತು.
ನಮ್ಮ ಸಂಸತ್ತಿನ ಮೇಲೆ
ಧಾಳಿ ಮಾಡಿದ ಕೆಲ ಭಯೋತ್ಪಾದಕರು, ಮುಂಬೈನಲ್ಲಿ ನೂರಾರು ನಾಗರೀಕರನ್ನು ಕೊಂದ ಕೈಬೆರಳೆಣಿಕೆಯ
ಭಯೋತ್ಪಾದಕರು ಬಯಸಿದ್ದು ಭಾರತವನ್ನು ಮುಳುಗಿಸುವ ಇಂಥದೇ ಒಂದು ಯುದ್ಧವನ್ನು ಎಂಬುದನ್ನ ನಾವು
ನೆನಪಿಟ್ಟುಕೊಳ್ಳಬೇಕು. ಕಾರ್ಗಿಲ್ ಕಾಲಕ್ಕೆ ನಾವು ನಮ್ಮ ಕಡೆಯಿಂದ ಯುದ್ಧಕ್ಕೆ ಸಜ್ಜಾಗಿ ನಮ್ಮ
ಪಡೆಗಳನ್ನು ನಮ್ಮ ಸರಹದ್ದಿನ ಬಳಿಗೆ ಒಯ್ದಿದ್ದೆವು. ನಮ್ಮ ದೇಶ ದುರ್ಬಲವಲ್ಲವೆಂದು
ನಿರೂಪಿಸುವುದಕ್ಕೆ ಆ ಬೆದರಿಕೆಯನ್ನು ನಾವು ನೀಡಬೇಕಿತ್ತು. ಆದರೆ ಯುದ್ಧಕ್ಕೆ ಯಾವುದೇ
ಅರ್ಥನೀತಿಯ ಆಧಾರವೂ ಇರಲಿಲ್ಲ.

ಬುಧವಾರ, 13 ಫೆಬ್ರವರಿ 2013
No comments:
Post a Comment