Tuesday, December 24, 2013

ಕೃಷಿ ಮಾರುಕಟ್ಟೆಯ ವಿಚಾರಗಳು.

ನಮ್ಮ ಸರಕಾರ ಕೆಲವು ದಿನಗಳ ಹಿಂದಷ್ಟೇ ನೂತನ ಕೃಷಿ ಮಾರಾಟ ನೀತಿಯನ್ನು ಪ್ರಕಟಮಾಡಿದೆ. ನೂತನ ನೀತಿಯಲ್ಲಿ ರೈತಪರ ಮತ್ತು ಕ್ರಾಂತಿಕಾರಿ ವಿಚಾರಗಳಿರಬಹುದೆಂದು, ಆಶಿಸಿದವರಿಗೆ ನಿರಾಶೆಯನ್ನುಂಟು ಮಾಡಲೆಂದೇ ಈ ಪ್ರಕಟಣೆಯನ್ನು ಸರಕಾರ ಹೊರಡಿಸಿದಂತಿದೆ. ಅಂದರಿಕೀ ಮಂಚಿವಾಡು ಆಗುವ ತವಕದಲ್ಲಿ ಇದು ಏಕಕಾಲಕ್ಕೆ ರೈತಪರವೂ, ವ್ಯಾಪಾರಿಗಳ ಪರವೂ, ಸಹಕಾರದ ಪರವೂ, ಖಾಸಗೀಕರಣದ ಪರವೂ, ಸಾಂಪ್ರದಾಯಿಕತೆಯ ಪರವೂ, ಸುಧಾರಣೆಯ ಪರವೂ ಗುಣಮಟ್ಟದ ಪರವೂ, ತಾಂತ್ರಿಕತೆಯ ಪರವೂ, ಪಾರದರ್ಶಕತ್ವದ ಪರವೂ, ಸೌಕರ್ಯಗಳನ್ನು ಹೆಚ್ಚಿಸುವುದರ ಪರವೂ ಆಗಿದ್ದು – ಈ ನೀತಿ ಲಾಗೂ ಆದಾಕ್ಷಣಕ್ಕೆ ಕೃಷಿಯು ರಾಮರಾಜ್ಯದಲ್ಲಿ ನಡೆಯುತ್ತಿದೆ ಎಂಬ ಭಾವನೆ ಉಂಟುಮಾಡುವ ಎಲ್ಲಿಗೂ ಸಲ್ಲದ ದಾಖಲೆಯಾಗಿದೆ. ಈ ರೀತಿಯ ದಾಖಲೆಯನ್ನು ಟೀಕಿಸುವುದೂ ಕಷ್ಟವೇ – “ರೈತರ ಹಿತರಕ್ಷಣೆಯನ್ನು ಕಾಪಾಡಲು ಕರ್ನಾಟಕ ಕೃಷಿ ಉತ್ಪನ್ನ (ನಿಯಂತ್ರಣಾ ಮತ್ತು ಅಭಿವೃದ್ಧಿ) ಅಧಿನಿಯಮ 1966ರಲ್ಲಿಯ ಎಲ್ಲ ರೈತಸ್ನೇಹಿ ನಿಯಮಗಳನ್ನು ಅನುಷ್ಠಾನಗೊಳಿಸಲಾಗುವುದು” ಎಂಬ ವಾಕ್ಯದ ಅರ್ಥವೇನು? ಇಷ್ಟುದಿನ ಅದು ಅನುಷ್ಠಾನದಲ್ಲಿರಲಿಲ್ಲವೇ? ರೈತ ಸ್ನೇಹಿ ನಿಯಮಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದಾಗ ರೈತವಿರೋಧಿ ನಿಯಮಗಳನ್ನು ಬದಿಗಿಡಲಾಗುವುದೇ ಅಥವಾ ರೈತ ವಿರೋಧಿ ನಿಯಮಗಳು ಇಲ್ಲವೇ ಇಲ್ಲವೆ?

ನಮ್ಮ ರೈತರ ಎದುರಿಗೆ ಇರುವ ಸವಾಲುಗಳು ಹಲವು. ಮಿಕ್ಕ ವ್ಯಾಪಾರಕ್ಕಿಂತ ಕೃಷಿಯ ವ್ಯಾಪಾರವು ಜಟಿಲವಾದದ್ದು. ಇದಕ್ಕೆ ಕಾರಣ ಅನೇಕಾನೇಕ ಸಣ್ಣ ರೈತರ ಉತ್ಪತ್ತಿಯನ್ನು (ರೈತರ ಸಂಖ್ಯೆಗೆ ಹೋಲಿಸಿದರೆ) ಕೆಲವಷ್ಟೇ ವ್ಯಾಪಾರಿಗಳು ಕೊಳ್ಳುತ್ತಾರೆ. ಅಲ್ಲಿಯೇ ಒಂದು ಅಸಮಾನತೆ ಬಂದುಬಿಡುತ್ತದೆ. ಇದರ ಜೊತೆಗೆ ಕೃಷಿ ಉತ್ಪನ್ನವನ್ನು ಜಾಗರೂಕವಾಗಿ ದಾಸ್ತಾನು ಮಾಡಬೇಕು. ಹಾಗಾಗದಿದ್ದರೆ ಮೂಲಕ್ಕೇ ಮೋಸವಾಗುತ್ತದೆ. ರೈತರಿಗೆ ದಾಸ್ತಾನು ಮಾಡಲು ಭೌತಿಕ ಸದುಪಾಯವಿರುವುದಿಲ್ಲ.  ಬಿತ್ತನೆಯಿಂದ ಪ್ರಾರಂಭವಾಗುವ ಕೃಷಿಯ ಪ್ರಕ್ರಿಯೆಗೆ ವರ್ಷವಿಡೀ ಖರ್ಚುಗಳೇ ಆಗಿ ಆದಾಯವು ಒಮ್ಮೆಗೆ ಮಾತ್ರ ಬರುತ್ತದೆ. ಆದಾಯ ಬರುವ ಕಾಲಕ್ಕಾಗಲೇ ರೈತರು ತಮ್ಮ ಹಣವನ್ನು ಸುರಿದು – ಯಾವುದಾದರೂ ಮೂಲದಿಂದ ಎಷ್ಟಾದರೂ ಹಣ ಬರಲಿ ಎನ್ನುವ ಮಟ್ಟಿಗೆ ಅಸಹಾಯಕರಾಗಿರುತ್ತಾರೆ.

ಜಗತ್ತಿನಲ್ಲಿ ಎಲ್ಲಿ ಎಷ್ಟು ಉತ್ಪಾದನೆಯಾಗಿದೆ, ಯಾವ ಜಾಗದಲ್ಲಿ ಹೆಚ್ಚು ದಾಸ್ತಾನಿದೆ, ಮಾಲಿಗೆ ಎಲ್ಲಿ ಎಷ್ಟು ಬೆಲೆ ಗಿಟ್ಟುತ್ತಿದೆ ಎಂಬ ಮಾಹಿತಿ ರೈತರಿಗಿಂತ ಹೆಚ್ಚು ವ್ಯಾಪಾರಿಗಳಿಗಿರುತ್ತದೆ. ಹೀಗಾಗಿ ಒಬ್ಬ ರೈತ ತನ್ನ ಉತ್ಪತ್ತಿಯನ್ನು ಮಾರಾಟ ಮಾಡುವಾಗ ಅನೇಕ ತೊಡಕುಗಳ ಮತ್ತು ಅನಿವಾರ್ಯತೆಗಳ ಮಧ್ಯೆ ತನ್ನ ನಿರ್ಧಾರಗಳನ್ನು ಕೈಗೊಳ್ಳುತ್ತಾನೆ. ಖರೀದಿ ಮಾಡುವವರಿಗೂ – ಮಾರಟ ಮಾಡುವವರಿಗೂ ಸಮಾನತೆ ಎಂಬ ಸೂತ್ರವನ್ನು ಈ ಚೌಕಟ್ಟಿನಲ್ಲಿ ಅರ್ಥೈಸಬೇಕು.

ಮಾರಾಟ ನೀತಿಯಲ್ಲಿ ಮೂರು ಸ್ಪಷ್ಟ ಘಟ್ಟಗಳಿರುವುದನ್ನು ಸರಕಾರ ಗುರುತಿಸಬೇಕು. ಮೊದಲ ಘಟ್ಟ ರೈತನಿಂದ ಉತ್ಪತ್ತಿಯನ್ನು ಕೊಳ್ಳುವುದು. ಎರಡನೆಯದು ನಂತರ ದಾಸ್ತಾನು-ಪರಿಷ್ಕರಣೆಯಗೆ ಸಂಬಂಧಿಸಿದ್ದು. ಮೂರನೆಯದ್ದು ಗ್ರಾಹಕರನ್ನು ತಲುಪುವ ಘಟ್ಟ. ಮೊದಲ ಘಟ್ಟಕ್ಕೆ ಸಲ್ಲುವ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವ, ಖಾಸಗೀ ಮಾರುಕಟ್ಟೆಗಳಿಗೆ ಪರವಾನಗಿ ನೀಡುವ, ಪಾರದರ್ಶಕತೆಯನ್ನು ಹೆಚ್ಚಿಸುವ ನೀತಿ ಸೂತ್ರಗಳು ಆದಷ್ಟೂ ರೈತಪರವಾಗಿರಬೇಕು.

ಇದರ ಸಾಧನೆಗೆ ಮಾರ್ಗಸೂಚಿಯಾಗಿ ನಮ್ಮ ಷೇರುಮಾರುಕಟ್ಟೆ ಇದೆ. ಮೊದಲಿಗೆ ಷೇರು ಮಾರುಕಟ್ಟೆಯಲ್ಲಿಯೂ ಅಪಾರದರ್ಶಕವಾಗಿ, ಕೂಗಾಟ, ಕೈಸನ್ನೆಗಳ ಮೂಲಕ ಷೇರುಗಳನ್ನು ಕೂಡುಕೊಳ್ಳುವ ವ್ಯಾಪಾರ ನಡೆಯುತ್ತಿತ್ತು.  ಕಾಲಾಂತರದಲ್ಲಿ ಷೇರು ಮಾರುಕಟ್ಟೆಯ ಗಣಕೀಕರವಾಗಿ, ತಂತ್ರಜ್ಞಾನ ಸಿಕ್ಕಂತೆ ಹೆಚ್ಚಿನ ಜನರಿಗೆ ಕೈಗೆಟುಕುವ – ಸಣ್ಣ ಹೂಡಿಕೆದಾರರನ್ನು ಒಳಗೊಳ್ಳುವ ರೀತಿಯಲ್ಲಿ ಅದು ರೂಪುಗೊಂಡಿದೆ. ಅಲ್ಲಿ ಇನ್ನೂ ಸುಧಾರಣೆಗಳಾಗಬೇಕಾಗಿದೆಯಾದರೂ, ಒಂದು ದಶಕದ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಎಷ್ಟೋ ಉತ್ತಮವಾಗಿಯೂ ಹೂಡಿಕೆದಾರರ ಹಕ್ಕುಗಳನ್ನು ಕಾಪಾಡುವ ರೀತಿಯಲ್ಲಿಯೂ ಬೆಳೆದಿದೆ.

ಆದರೆ ಷೇರು ಮಾರುಕಟ್ಟೆಗೂ, ಕೃಷಿ ಉತ್ಪನ್ನದ ಮಾರುಕಟ್ಟೆಗೂ ಮೂಲಭೂತ ಭಿನ್ನತೆಯಿದೆ. ಹೀಗಾಗಿ ಸುಧಾರಣೆಯ ನೀತಿಯು ಸರಳವಾಗಿ ಕಾರ್ಯಗತಗೊಳಿಸಲು ಸಾಧ್ಯವಾಗುವುದಿಲ್ಲ. ಷೇರುಮಾರುಕಟ್ಟೆಯಲ್ಲಿ ಸುಲಭವಾಗಿ ಎಲೆಕ್ಟ್ರಾನಿಕ್ ವ್ಯವಹಾರ ನಡೆಸಲು ಸಾಧ್ಯವಾದದ್ದೇಕೆಂದರೆ ಅಲ್ಲಿ ಮಾರಾಟ-ಖರೀದಿ ಆಗುತ್ತಿದ್ದದ್ದು ಕಾಗದದ ಮೇಲಿರುವ ಷೇರು ಪತ್ರಗಳು. ಆ ಪತ್ರಗಳನ್ನು ಸುಲಭವಾಗಿ ಡೀಮಟೀರಿಯಲೈಸ್ ಮಾಡಿ ಕಾಗದವೇ ಇಲ್ಲದೇ ಒಂದು ಖಾತೆಯಲ್ಲಿ ಷೇರುಗಳನ್ನಿರಿಸಿ ಎಲಕ್ಟ್ರಾನಿಕ್ ರೂಪದಲ್ಲಿ ವ್ಯವಹಾರ ಮಾಡುವುದು ಸಾಧ್ಯವಾಗಿತ್ತು. ಆದರೆ ಕೃಷಿ ಮಾರುಕಟ್ಟೆಯಲ್ಲಿ ಇದು ಸರಳವಲ್ಲ. ಕಡೆಗೂ ರೈತ ತಾನು ಬೆಳೆದ ಅಕ್ಕಿ-ಧಾನ್ಯ-ತರಕಾರಿಗಳನ್ನು ಭೌತಿಕವಾಗಿ ಒಯ್ದು ತಲುಪಿಸಿ ಸುರಕ್ಷಿತವಾಗಿ ದಾಸ್ತಾನು ಮಾಡಬೇಕು. ದಾಸ್ತಾನು ಮಾಡಿದ ಮಾಲು-ಅದರ ತೂಕ, ಗುಣಮಟ್ಟದ ನಿರ್ದಿಷ್ಟ ಮಾಪಕಗಳು ಇರಬೇಕು. ಈ ವೈಜ್ಞಾನಿಕ ಮಾಪಕಗಳು ಉಂಟಾದಾಗ ದಾಸ್ತಾನು ಕೇಂದ್ರಕ್ಕೆ ಸಲ್ಲಿಸಿದ ಮಾಲಿಗೆ ಸಿಕ್ಕ ಧೃಡೀಕರಿಣ ಪತ್ರದ ಆಧಾರದ ಮೇಲೆಯೇ ಅವನು ವ್ಯಾಪಾರ ಮಾಡಬಹುದು.

ಸರಕಾರದ ಮಾರಾಟ ನೀತಿಯಲ್ಲಿ ಮೊದಲಿಗೆ ಈ ಘಟ್ಟದ ಮೇಲೆ ಗಮನವನ್ನು ಕೇಂದ್ರೀಕರಿಸಬೇಕು. ಈ ಘಟ್ಟದಲ್ಲಿ ರೈತರ ಹಿತರಕ್ಷಣೆಯ ವಿಚಾರ ಮಾಡಬೇಕು. ಏಕೆಂದರೆ ರೈತನು ಮಾಲನ್ನು ತಂದಾಗ ಮೋಸವಾಗುವುದೇ ತೂಕ-ಗುಣಮಟ್ಟದ ವಿಚಾರದಲ್ಲಿ. ಅಲ್ಲಿ ನಮಗೆ ತಂತ್ರಜ್ಞಾನವೂ ಬೇಕು, ರೈತ ಹಿತರಕ್ಷಣೆಯ ನಿಯಮಾವಳಿ-ಪ್ರಣಾಲಿಗಳೂ ಬೇಕು.

ಆಧುನಿಕ ತಂತ್ರಜ್ಞಾನವನ್ನು ಅಳವಡಿಸುವುದು ಸರಳವಾದ ವಿಚಾರವೇನೂ ಅಲ್ಲ. ಯಾಕೆಂದರೆ ತೊಂದರೆಗಳು ತಂತ್ರಜ್ಞಾನಕ್ಕೆ ಸೀಮಿತವಾಗಿರುವುದಿಲ್ಲ. ಅಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಕೆಲಸಮಾಡುತ್ತವೆ. ತಲೆತಲಾಂತರದಿಂದ ಬಂದಿರುವ ರೈತರ ಮತ್ತು ಏಜೆಂಟರ (ಅಡತಿಯಾ) ಸಂಬಂಧಗಳಲ್ಲಿ ಒಂದು ಮಟ್ಟದ ಶೋಷಣೆಯಿರಬಹುದಾದರೂ ಮತ್ತೊಂದು ಮಟ್ಟದ ಸಂಬಂಧವೂ ಇದೆ. ಈ ಏಜೆಂಟರೇ ರೈತರಿಗೆ ಬೇಕಾದಾಗ ಹಣವನ್ನು ಒದಗಿಸುತ್ತಾರೆ, ಅವರೇ ಕೀಟನಾಶಕಗಳನ್ನೂ ಸರಬರಾಜು ಮಾಡುತ್ತಾರೆ. ಕೃಷಿಯೊಂದಿಗೆ ಬೆಳೆದುಬಂದಿರುವ ಪರಂಪರಾಗತ ಸಂಬಂಧವನ್ನು ಮುರಿದು – ಮಾರುಕಟ್ಟೆಯ ಕೊಂಡಿಯನ್ನು ಮಾತ್ರ ಬೇರ್ಪಡಿಸುವುದು ಸುಲಭದವಲ್ಲ.

ಹೊಸಕೋಟೆಯ ಬಳಿ ಮದರ್ ಡೈರಿಯ ಸಫಲ್ ಸಂಸ್ಥೆ ಅತ್ಯಾಧುನಿಕ ಮಾರುಕಟ್ಟೆಯ ವಿಧಾನವನ್ನು ಹಣ್ಣು ಮತ್ತು ತರಕಾರಿಗಳಿಗಾಗಿ ಏರ್ಪಾಟು ಮಾಡಿದೆ. ಆಲ್ಲಿ ಮಾಲಿನ ಗುಣಮಟ್ಟದ ವರ್ಗೀಕರಣ ವೈಜ್ಞಾನಿಕವಾಗಿ ಆಗುತ್ತದೆ. ಪಾರದರ್ಶಕವಾಗಿ ಎಲೆಕ್ಟ್ರಾನಿಕ್ ಪದ್ಧತಿಯ ಮೂಲಕ ಹರಾಜಿನ ಪ್ರಕ್ರಿಯೆ ನಡೆಯುತ್ತದೆ. ಆದರೆ ಬೆಂಗಳೂರಿಗೆ ಬರುವ ಹಣ್ಣು-ತರಕಾರಿಗಳ ಒಟ್ಟಾರೆ ಮಾಲಿನಲ್ಲಿ ಎಷ್ಟು ಪರಿಮಾಣ ಅಲ್ಲಿನ ಮಾರುಕಟ್ಟೆಯಲ್ಲಿ ವ್ಯಾಪಾರವಾಗುವುದು ಎನ್ನುವ ಪ್ರಶ್ನೆಯಿದ್ದೇ ಇದೆ. ಸಹಜವಾಗಿ ಯಶವಂತಪುರಕ್ಕೆ, ತರುಗುಪೇಟೆಗೆ, ಕೆ.ಆರ್.ಮಾರುಕಟ್ಟೆಗೆ, ಲಾಲಬಾಗಿಗೆ ದಿನನಿತ್ಯ ಹೋಗುತ್ತಿರುವ ರೈತರು ಇದ್ದಕ್ಕಿದ್ದ ಹಾಗೆ ತಮ್ಮ ಹಳೆಯ ಸಂಬಂಧಗಳನ್ನು ಕಳಚಿ ಹೊಸಕೋಟೆಗೆ ಹೋಗುತ್ತಾರೆಯೇ? ಇದೇ ಕಷ್ಟದ ಪ್ರಶ್ನೆ.
ಮಾರುಕಟ್ಟೆಯ ನೀತಿಯು ಸಕ್ಷಮವಾಗಿ ಕೆಲಸ ಮಾಡುವುದಕ್ಕೆ ಮಾರುಕಟ್ಟೆಗೆ ಮಾಲು ಬರುವುದರ ಹಿಂದಿನ ಘಟ್ಟಗಳನ್ನು– ಅಂದರೆ ರೈತನ ಆರ್ಥಿಕ ಸಂಪನ್ಮೂಲ, ಕೃಷಿಯ ಇತರೆ ಪರಿಕರಗಳಿಗೂ ಮಾರಾಟ ಮಾಡುವ ಮಾಲಿಗೂ ಇರಬಹುದಾದ ಸಂಬಂಧವನ್ನೂ ಮಾರುಕಟ್ಟೆಯ ನೀತಿ ಅರಿತುಕೊಳ್ಳಬೇಕು.

ಎಲ್ಲವನ್ನೂ ಬದಲಾಯಿಸಿಬಿಡುತ್ತೇವೆ ಎನ್ನುವ ಧೈರ್ಯದ ಮಾತು ಸರಿಯೇ. ಆದರೆ ಯಾವುದೇ ಬದಲಾವಣೆಯಲ್ಲಿ ಪ್ರಸಕ್ತ ಮಾರುಕಟ್ಟೆಯಲ್ಲಿ ಭಾಗವಹಿಸುತ್ತಿರುವವರ ಪಾತ್ರಗಳು ಹೇಗೆ ಬದಲಾಗವುದು ಎನ್ನುವುದರ ಒಂದು ಕನಿಷ್ಟ ಮಟ್ಟದ ಪರಿಕಲ್ಪನೆ ಇರಬೇಕಾಗುತ್ತದೆ.

ಉದಾಹರಣೆಗೆ ಈ ಪರಿಸ್ಥಿತಿಯನ್ನು ಊಹಿಸೋಣ. ರೈತರಿಗೆ ಪ್ರತಿನಿತ್ಯ ವಿವಿಧ ಮಾರುಕಟ್ಟೆಗಳಲ್ಲಿರುವ ಧರದ ಬಗ್ಗೆ ಮೊಬೈಲಿನ ಮೂಲಕ ಮಾಹಿತಿ ದೊರೆಯುತ್ತದೆ; ಬೆಳೆಯ ಕಟಾವಾಗಿ ತೇವ್ಯ ಕಡಿಮೆಯಾದ ಕೂಡಲೇ ಚೀಲಗಳಿಗೆ ತುಂಬದೆಯೇ ನೇರ ಟ್ರಾಕ್ಟರಿನ ಟ್ರೇಲರಿಗೆ ಏರಿಸಿ, ಮಾರುಕಟ್ಟೆಗೆ ಒಯ್ದು ವೇ ಬ್ರಿಜ್ ಮೇಲೆ ತೂಕ ಹಾಕಿ – ನೇರವಾಗಿ ಖರೀದಿದಾರರ ದಾಸ್ತಾನು ಸೈಲೋಗಳಲ್ಲಿ ತುಂಬಲು ಸಾಧ್ಯವಾಗುತ್ತದೆ; ಅಲ್ಲಿ ವೈಜ್ಞಾನಿಕವಾಗಿ ಯಂತ್ರಗಳ ಮೂಲಕ ಗುಣಮಟ್ಟದ ನಿರ್ಧಾರವಾಗುತ್ತದೆ; ಖರೀದಿದಾರರು ತಕ್ಷಣಕ್ಕೆ ಸರಿಯಾದ ರಸೀತಿ ಕೊಟ್ಟು ಹಣ ಪಾವತಿಸುತ್ತಾರೆ. ಈ ಪರಿಸ್ಥಿತಿ ನನಸಾಗಲು ತಂತ್ರಜ್ಞಾನದ ತೊಡಕಿಲ್ಲ. ಇದರಿಂದ ಒಟ್ಟಾರೆ ರೈತರಿಗೆ (ಗೋಣಿ ಚೀಲ, ಹಮಾಲಿ, ಪ್ರತೀ ಮೂಟೆಯ ತೂಕದ ಪ್ರಕ್ರಿಯೆ, ಗುಣಮಟ್ಟ ಮಾಪನದ ಖರ್ಚುಗಳು) ಉಳಿತಾಯವೇ ಆಗುತ್ತದೆ. ಆದರೆ ಈ ತಂತ್ರಜ್ಞಾನವನ್ನು ಅಳವಡಿಸಬೇಕಾದರೆ ತೂಕದ ಮೋಸ ಮಾಡುತ್ತಿದ್ದ ವ್ಯಾಪಾರಿ, ಗೋಣಿಚೀಲದ ವ್ಯಾಪಾರಿ, ಹಮಾಲಿಗಳು, ಗುಣಮಟ್ಟವನ್ನು ನಿರ್ಧರಿಸುವ ತಜ್ಞ – ಈ ಎಲ್ಲರ ಜೀವನೋಪಾಧಿಗಳೂ ಒಂದಲ್ಲಾ ಒಂದು ರೀತಿಯಲ್ಲಿ ಏಟು ತಿನ್ನುತ್ತವೆ. ಹೀಗಾಗಿ ಸುಧಾರಣೆಯ ಪ್ರಕ್ರಿಯೆಯಲ್ಲಿ ಈ ಎಲ್ಲ ಮಾರುಕಟ್ಟೆಯ ಪಾತ್ರಧಾರಿಗಳ ಪಾತ್ರದ ಪರಿಶೀಲನೆ – ಹಾಗೂ ಆ ಪಾತ್ರಧಾರಿಗಳನ್ನು ನಾವು ಸಮರ್ಪಕವಾಗಿ ಉಪಯೋಗಿಸಿಕೊಳ್ಳುವ ಯೋಜನೆಯನ್ನೂ ಹಾಕಿಕೊಳ್ಳದಿದ್ದರೆ ಅವರುಗಳೇ ಈ ಸುಧಾರಣೆಗೆ ದೊಡ್ಡ ಕಂಟಕವಾಗುತ್ತಾರೆ.

ಷೇರು ಮಾರುಕಟ್ಟೆಯು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿದ ಕೂಡಲೇ ಷೇರು ದಳ್ಳಾಳಿಗಳ ಅವಶ್ಯಕತೆಯಿಲ್ಲವಾಯಿತು. ಪ್ರಾಂತೀಯ ಷೇರು ಮಾರುಕಟ್ಟೆಯಶ್ಯಕತೆ ಇಲ್ಲವಾಯಿತು. ಬೆಂಗಳೂರಿನ ಸ್ಟಾಕ್ ಎಕ್ಸಚೇಂಜ್ ತನ್ನು ಷೇರು ವ್ಯಾಪಾರವನ್ನು ಮುಚ್ಚಿ ಬೇರೆ ಚಟುವಟಿಕೆಗಳನ್ನು ಹುಡುಕುವ ಪ್ರಯಾಸದಲ್ಲಿದೆ. ನಮ್ಮ ಕೃಷಿಗೂ ಆ ಪರಿಸ್ಥಿತಿ ಬಂದ ದಿನ ರೈತರಿಗೆ ಹಬ್ಬವೇ ಆಗುತ್ತದೆ. ಆದರೆ ಅದಕ್ಕೆ ಬೇಕಾದ ಅಡಿಪಾಯ ಇನ್ನೂ ನಿರ್ಮಾಣವಾಗಬೇಕು. ಈ ಅಡಿಪಾಯವಿಲ್ಲದೆಯೇ ನಾವು ಕಮಾಡಿಟಿ ಎಕ್ಸಚೇಂಜುಗಳನ್ನು ಕಟ್ಟಿ, ಇಲ್ಲದ ಮಾಲಿನ ಊಹಾಪೋಹದ ವ್ಯಾಪಾರವನ್ನೂ –ಕೃಷಿ ಉತ್ಪನ್ನಗಳ ಮೇಲಿನ ದರದ ಆಧಾರವಾಗಿ ಮಾಲೇ ಸರಬರಾಜು ಮಾಡದ ಕೂಡಕೊಳ್ಳುವಿಕೆಯ ಆಟವನ್ನೂ ಆಡುತ್ತಿದ್ದೇವೆ. ಇದರಿಂದಾಗಿ ಕೃಷಿ ಉತ್ಪನ್ನಗಳ ದರದಲ್ಲಿ ವಿಪರೀತ ಏರುಪೇರಾಗುತ್ತದೆಯೇ ಹೊರತು ರೈತರಿಗೆ ಲಾಭವೇನೂ ಕಾಣುತ್ತಿಲ್ಲ.

ಹೊಸ ನೀತಿಯಂತೆ ಸರಕಾರವು ಎಲ್ಲವನ್ನೂ ಒಂದೇ ಏಟಿಗೆ ಮಾಡಹೊರಟು ಯಾವುದೂ ಗೆಲ್ಲದಂತೆ ಮಾಡುವುದಕ್ಕಿಂತ – ಮೂಲಭೂತ ವ್ಯವಸ್ಥೆಯ ಮೇಲೆ – ಅದನ್ನು ಕಟ್ಟುವ ಪರಿಯ ಬಗ್ಗೆ ಯೋಚಿಸಿದರೆ – ಒಂದೊಂದು ಬಾರಿಗೆ ಒಂದೊಂದೇ ಹೆಜ್ಜೆಯನ್ನು ಪ್ರಜ್ಞಾಪೂರ್ವಕವಾಗಿ ಇಟ್ಟರೆ ರೈತರಿಗೂ ಉಪಯೋಗವಾಗುತ್ತದೆ. ಆಧುನಿಕ ಮಾರುಕಟ್ಟೆ ಹೇಗಿರಬಹುದು ಎನ್ನುವುದಕ್ಕೆ ಹೊಸಕೋಟೆಯಲ್ಲಿ ಸಫಲ್ ಇದೆ. ಅದು ಯಾಕೆ ಹಣ್ಣು ತರಕಾರಿಗಳ ವಹಿವಾಟಿನ ಮೂಲಬಿಂದು ಆಗಿಲ್ಲ ಎನ್ನುವುದಕ್ಕೂ ಕೆಲವು ಕಲಿಕೆಗಳಿವೆ. ಎರಡನ್ನೂ ಸರಕಾರ ಪರಿಗಣಿಸಬೇಕು.

ಬುಧವಾರ, 25 ಸೆಪ್ಟಂಬರ್ 2013






No comments:

Post a Comment