Thursday, October 10, 2013

ಗೋಡೆ ಸರಹದ್ದುಗಳ ನಡುವೆ ನಲುಗುವ ಬಜೆಟ್ಟು

ಬಜೆಟ್ಟು ಮಂಡಿಸುವುದು ಸರಳವಾದ ಕೆಲಸವೇನೂ ಅಲ್ಲ. ಅದರಲ್ಲೂ ತೆರಿಗೆಗಳನ್ನೇರಿಸದೇ, ಜನಪರ-ರೈತಪರ-ಬಡವರ ಪರ ಬಜೆಟ್ಟನ್ನು ಮಂಡಿಸುವುದು ಹುಲಿಸವಾರಿಯಂತಹ ಕಠಿಣವಾದ ಕೆಲಸವೇ. ಆ ಕೆಲಸದ ನಡುವೆ ನಮ್ಮಂತಹವರ ಅವಸ್ವರವನ್ನೂ ವಿತ್ತ-ಮುಖ್ಯ ಮಂತ್ರಿಗಳು ಕೇಳಬೇಕು. ಅಂದರಿಕೀ ಮಂಚಿವಾಡು ಆಗುವುದು ಸಾಧ್ಯವೇ ಇಲ್ಲವಾದ್ದರಿಂದ ಸರಕಾರ, ಖಾತೆ-ವಿಭಾಗಗಳ ಗೋಡೆ ಸರಹದ್ದುಗಳ ನಡುವೆ ಬಜೆಟ್ಟನ್ನು ರೂಪಿಸಬೇಕು. ಈ ರೀತಿಯ ಕಿಂಡಿಗಳನ್ನೇರ್ಪಡಿಸಿ ಅವುಗಳಿಗೆ ಹಣವನ್ನು ತುಂಬುವ, ಅದರಿಂದ ಖರ್ಚು ಮಾಡುವುದರಲ್ಲಿ ಬಜೆಟ್ಟನ್ನು ರೂಪಿಸವ ಪ್ರಕ್ರಿಯೆಗೆ ಸಂಬಂಧಿಸಿದ ಒಂದು ಅಪಾಯವಿದೆ.

ಒಬ್ಬ ಬೆಂಗಳೂರಿಗನಾಗಿ ಬಜೆಟ್ಟನ್ನು ನೋಡುವ ಪರಿ ಹೇಗೆ? ಬೆಂಗಳೂರು ನಗರಕ್ಕೇ ಸುಮಾರು ರೂ.8,640 ಕೋಟಿಗಳಷ್ಟು ಹಣವನ್ನು ಮೀಸಲಿಡಲಾಗಿದೆ. ಇದು ಒಟ್ಟಾರೆ ಬಜೆಟ್ಟಿನ ಶೇಕಡಾ 7ರಷ್ಟಿದೆ. ಆದರೆ ಒಟ್ಟಾರೆ ನಗರಾಭಿವೃದ್ಧಿಗೆಂದು ಇಟ್ಟಿರುವ ಸುಮಾರು ರೂ,9,286 ಕೋಟಿಗಳಲ್ಲಿ  ಸಿಂಹಪಾಲು ಬೆಂಗಳೂರಿಗೇ ಸೀಮಿತವಾಗಿದೆ ಎನ್ನುವುದು ಗಮನಾರ್ಹ. ತಮ್ಮೂರಾದ ಮೈಸೂರನ್ನೂ ಬಿಟ್ಟು ಬೆಂಗಳೂರಿನ ಮೇಲೆ ಸಿದ್ದರಾಮಯ್ಯನವರ ಪ್ರೀತಿಗೆ ಕಾರಣವೇನಿರಬಹುದು? ಅನೇಕ ರೈತಪರ- ಗ್ರಾಮೀಣ ಪರವಾದ ಯೋಜನೆಗಳ ನಡುವೆ ಈ ವಿವರ ಕಣ್ಣುತಪ್ಪಿಹೋಗಬಹುದು. ಹೀಗಾಗಿ ಸಿದ್ದರಾಮಯ್ಯನವರ ಬೆಂಗಳೂರು-ಪರ ಬಜೆಟ್ಟು, ಎಸ್.ಎಂ.ಕೃಷ್ಣರ ಹಾದಿಯನ್ನು ಹಿಡಿದ ಬಜೆಟ್ಟಿನಂತೆ ಕಾಣುವುದಿಲ್ಲ. ಬೆಂಗಳೂರಿಗೆ ನೀಡಿರುವ ಅರ್ಥಪೂರ್ಣ ಯೋಜನೆಗಳು, ಎಂ.ಜಿ ರೋಡಿಗೆ ವೈಫೈ ಸೌಲಭ್ಯವನ್ನು ಒದಗಿಸುವ ವಿಚಿತ್ರ ಘೋಷಣೆಗಳ ನಡುವೆಯೂ ಈ ಬಜೆಟ್ಟು ಜನಪರವೆಂದೇ ಅನ್ನಿಸುತ್ತದೆ.
ಬೆಂಗಳೂರಿಗರಿಗೆ ಒಟ್ಟಾರೆ ಅಭಿವೃದ್ಧಿಯನ್ನು ಒದಗಿಸಿಕೊಡುವ ಈ ಬಜೆಟ್ಟನ್ನು ಯಾಕೆ ಸ್ವಾಗತಿಸಬಾರದು? ಇಲ್ಲಿನ ಸೌಲಭ್ಯಗಳು ಉತ್ತಮಗೊಂಡರೆ ಯಾಕೆ ಗೊಣಗಾಡಬೇಕು? ಈ ಪ್ರಶ್ನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡೇ ಇಲ್ಲಿರುವ ಆಲೋಚನಾಮಟ್ಟದ ತೊಡಕುಗಳನ್ನು ಪರಿಶೀಲಿಸೋಣ.

ನಮ್ಮನ್ನು ನಿತ್ಯ ಕಾಡುವ ವಿಷಯಗಳಾದ ತ್ಯಾಜ್ಯ ವಿಲೇವಾರಿ, ರಸ್ತೆ, ಬಿಡಿಎ ಸೈಟುಗಳು, ಮೇಲ್ಸೇತುವೆ-ಕೆಳಸೇತುವೆಗಳು ಮತ್ತು ಬೆಂಗಳೂರಿಗೆ ಬರಬೇಕಾದ ಹೂಡಿಕೆ, ಹೀಗೆ ಐಟಿ-ಬಿಟಿ ನಗರದ ಬಗ್ಗೆ ಇರಬೇಕಾದ್ದೆಲ್ಲವೂ ಇಲ್ಲಿನ ಬಜೆಟ್ಟಿನಲ್ಲಿದೆ. ಆದರೆ ಬೆಂಗಳೂರು ಬೆಳೆಯುವ ಗತಿಗೂ ಒಂದು ಮಿತಿಯಿದೆ. ಇಲ್ಲಿ ಬರುವ ವಲಸೆಗಾರರನ್ನು ಸ್ವೀಕರಿಸಲೂ ಒಂದು ಮಿತಿಯಿದೆ. ಈ ಎಲ್ಲವನ್ನು ಮೀರಿ ಉತ್ತಮ ನಗರವಾಗಿರುವುದು ಒಂದು ಸಾಹಸವೇ ಸೈ. ಆದರೂ ಪ್ರತೀ ಬಜೆಟ್ಟಿನ ನಗರಾಭಿವೃದ್ಧಿಯ ಮಾತಾದಾಗಲೂ ಯಾಕೆ ಬರೇ ಬೆಂಗಳೂರಿನ ಹೆಸರೇ ರಾರಾಜಿಸುತ್ತದೆ? ವಿತ್ತ-ಮುಖ್ಯಮಂತ್ರಿಗಳ ಭಾಷಣದಲ್ಲಿ ಬೆಂಗಳೂರಿಗೆಂದೇ ಒಂದು ಪ್ರತ್ಯೇಕ ಭಾಗವಿದೆ. ಜೊತೆಗೆ ನೀರು ಸರಬರಾಜು ಮಂಡಲಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಬಗ್ಗೆಯೂ ಒಂದಿಷ್ಟು ಮಾತಿದೆ. ಇದನ್ನು ಮೀರಿ ನೋಡಿದರೆ ರಾಜ್ಯದ ಮಿಕ್ಕ ಗ್ರಾಮೇತರ ಜಾಗಗಳ ಬಗ್ಗೆ ಹೆಚ್ಚಿನ ಮಾತು ಕಾಣುವುದಿಲ್ಲ. ಅದಕ್ಕೆ ಮುಡಿಪಾಗಿಟ್ಟಿರುವ ಆರ್ಥಿಕ ಸಂಪನ್ಮೂಲಗಳೂ ಅಷ್ಟಕ್ಕಷ್ಟೇ.

ಇದಕ್ಕೆ ಕಾರಣ ಸರಕಾರಗಳು ರಾಜ್ಯವನ್ನು ನೋಡುವ ರೀತಿಯೇ ಆಗಿರಬಹುದು. ಅಭಿವೃದ್ಧಿಯ ಮಾತು ಬಂದ ಕೂಡಲೇ ನಾವು ಗ್ರಾಮೀಣಾಭಿವೃದ್ಧಿ ಮತ್ತು ನಗರಾಭಿವೃದ್ಧಿ ಎನ್ನುವ ದ್ವಿಮುಖ ಸೂತ್ರವನ್ನು ಹಿಡಿದು ಹೊರಡುತ್ತೇವೆ. ಈ ಎರಡರ ಮಧ್ಯೆ ದೊಡ್ಡಗೋಡೆಯನ್ನು ಅಭೇದ್ಯ ಸರಹದ್ದನ್ನೂ ನಿರ್ಮಿಸಿಬಿಡುತ್ತೇವೆ. ನಗರಾಭಿವೃದ್ಧಿ ಮುಖ್ಯವಾಗಿ ರಾಜಧಾನಿಗೆ ಸೀಮಿತವಾಗಿ, ಒಂದಿಷ್ಟು ದೊಡ್ಡ ನಗರಗಳಿಗೆ ಕೆಲವು ಯೋಜನೆಗಳು ಹೋಗುತ್ತವೆ. ಮಿಕ್ಕಂತೆ ಎಲ್ಲವೂ ಗ್ರಾಮೀಣಾಭಿವೃದ್ಧಿಯೇ. ಇಲ್ಲಿಯೇ ನಾವು ಬೆಳೆ ಸಾಲಕ್ಕೆ ಬಡ್ಡಿ ದರದಲ್ಲಿ ಕಡಿತ ಉಂಟುಮಾಡುತ್ತೇವೆ. ಹತ್ತು ಲಕ್ಷ ಸಾಲ ಪಡೆವ ದೊಡ್ಡ ರೈತರಿಗೂ ಶೇಕಡಾ 3ಕ್ಕೇ ಬಡ್ಡಿದರವನ್ನು ಸೀಮಿತಗೊಳಿಸುತ್ತೇವೆ. ಗುಂಪುಗಳನ್ನು ಸೇರಿದ ಮಹಿಳೆಯರಿಗೆ ಬಡತನದ ಪ್ರಮೇಯವೇ ಇಲ್ಲದೇ ಶೇಕಡಾ 4ರ ಬಡ್ಡಿಗೆ ಸಾಲನೀಡುತ್ತೇವೆ, ಹಾಲು ಸರಬರಾಜು ಮಾಡುವವರು ಎಷ್ಟೇ ಶ್ರೀಮಂತರಾಗಿದ್ದರೂ ನಾಲ್ಕು ರೂಪಾಯಿ ಹೆಚ್ಚು ಬೆಲೆ ನೀಡುತ್ತೇವೆ, ಕೃಷಿ ಉತ್ಪನ್ನಕ್ಕೆ ಉತ್ತಮ ಬೆಲೆ ನಿರ್ಧರಿಸುವಂತೆ ಸಮಿತಿಯನ್ನು ನಿರ್ಮಿಸುತ್ತೇವೆ. ಇಲ್ಲಿ ಗ್ರಾಮಸಮಾಜವನ್ನು ಕೃಷಿಗೂ, ಕೃಷಿಯನ್ನು ಬಡತನಕ್ಕೂ ಸಮೀಕರಿಸುವ ವಿಚಿತ್ರ ಆಲೋಚನೆ ನಮಗೆ ಕಾಣುತ್ತದೆ.

ಗ್ರಾಮಕ್ಕೂ ನಗರಕ್ಕೂ ನಡುವೆ ಪೇಟೆ-ಪಟ್ಟಣಗಳಿವೆ. ಗ್ರಾಮಗಳಲ್ಲೂ ಕೃಷಿಯನ್ನು ಮೀರಿದ ವ್ಯಾಪಾರಗಳಿವೆ. ಆದರೆ ಗ್ರಾಮವೆಂದರೆ ಬಡತನ-ಕೃಷಿ. ನಗರವೆಂದರೆ ರಸ್ತೆ, ರಹದಾರಿ, ಮೆಟ್ರೋ. ಪ್ರಾಂತೀಯ ಬೆಳವಣಿಗೆಯೆಂದರೆ – ವಿಶ್ವವಿದ್ಯಾಲಯಗಳು, ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳು, ಕಾರ್ಖಾನೆಗಳನ್ನು ಸ್ಥಾಪಿಸುವ ಸರಳ ಸೂತ್ರ ಬಜೆಟ್ಟಿನ ತಯಾರಿಕೆಯಲ್ಲಿ ಇರುವಂತಿದೆ.

ನಾವು ಬೆಂಗಳೂರಿನ ಅಭಿವೃದ್ಧಿಯ ಮಂತ್ರ ಜಪಿಸುವಾಗ ಕೇಳಲೇಬೇಕಾದ ಪ್ರಶ್ನೆಗಳನ್ನು ಕೇಳುತ್ತಿದ್ದೆವೆಯೇ? (1) ಬೆಂಗಳೂರನ್ನು ಒಂದು ಉತ್ತಮ ನಗರವಾಗಿ ಅಭಿವೃದ್ಧಪಡಿಸುವುದು ಹೇಗೆ?  ಜೊತೆಜೊತೆಗೇ ಎರಡನೆಯ ಪ್ರಶ್ನೆ (2) ಬೆಂಗಳೂರಿನ ಅನವಶ್ಯಕ ಬೆಳವಣಿಗೆಗೆ ಕಡಿವಾಣ ಹಾಕಿ, ರಾಜ್ಯದ ಮಿಕ್ಕ ನಗರಗಳನ್ನೂ ಬೆಳೆಯಿಸುವ ಪರಿಯೇನು? ಈ ಪ್ರಶ್ನೆಗಳಿಗೆ ಉತ್ತರವನ್ನು ಬೆಂಗಳೂರಿನಲ್ಲಿ ಹುಡುಕಿ ಪ್ರಯೋಜನವಿಲ್ಲ. ನಗರಾಭಿವೃದ್ಧಿಯನ್ನು ಬೆಂಗಳೂರು ಕೇಂದ್ರಿತವಾಗಲ್ಲದೇ ರಾಜ್ಯದ ಇತರ ನಗರಗಳನ್ನೂ ಒಳಗೊಂಡು ನೋಡಿದಾಗ ಉದ್ಭವವಾಗುವ ಪ್ರಶ್ನೆಗಳು ಇಂತಿವೆ:

·        ಬೆಂಗಳೂರಿಗೆ ಒಳವಲಸೆ ಬರುತ್ತಿರುವವರು ಯಾರು?
·        ಅವರು ಬೆಂಗಳೂರಿಗೇ ಬರಲು ಕಾರಣವೇನು? ಅದು ಬೆಂಗಳೂರು ಕೇಂದ್ರಿತ ಕಾರಣವೇ ಅಥವಾ ಕೇವಲ ನಗರ ಕೇಂದ್ರಿತ ಕಾರಣವೇ?
·        ಒಳವಲಸೆ ಬರುತ್ತಿರುವವರು ಎಲ್ಲಿಂದ ಬರುತ್ತಿದ್ದಾರೆ? ಅವರು ಬರುತ್ತಿರುವ ಪ್ರಾಂತಗಳಲ್ಲಿರುವ ತೊಂದರೆಗಳೇನು?
·        ಬೆಂಗಳೂರಿಗೇ ಪ್ರತ್ಯೇಕವಾಗಿ ವರ್ತಿಸುವಂತಹ ಆರ್ಥಿಕ ಚಟುವಟಿಕೆಗಳು ಏನು? ಬೆಂಗಳೂರಿನಂತಹುದೇ ಅನೇಕ ಕೇಂದ್ರಗಳನ್ನು ರಾಜ್ಯದಲ್ಲಿ ನಿರ್ಮಿಸುವುದು ಸಾಧ್ಯವೇ?

ಈ ಪ್ರಶ್ನೆಗಳನ್ನು ಭಾಷಾ ಹೋರಾಟದ, ಸಂಸ್ಕೃತಿಯನ್ನು ರಕ್ಷಿಸುವ, ಹೊರನಾಡಿಗರಿಗೆ ನಗರವನ್ನು ಮುಚ್ಚುವ ದೃಷ್ಟಿಯಿಂದ ಕೇಳುತ್ತಿಲ್ಲ. ಆ ದೃಷ್ಟಿಯಿಂದ ಪ್ರಶ್ನೆಗಳನ್ನು ಕೇಳಲು ಸಾಕಷ್ಟು ಜನರೂ ಕನ್ನಡಪರ ಗುಂಪುಗಳೂ ಇವೆ. ಈ ಪ್ರಶ್ನೆಯನ್ನು ಆರ್ಥಿಕ ದೃಷ್ಟಿಯಿಂದ ಕೇಳಿದಾಗ ನಮಗೇನು ಜವಾಬು ಸಿಗಬಹುದು?

ದುರಾದೃಷ್ಟವಶಾತ್ತು ಬಜೆಟ್ಟುಗಳನ್ನು ರೂಪಿಸುವಾಗ ಈ ಇಂಥ ಪ್ರಶ್ನೆಗಳನ್ನು ಯಾರೂ ಕೇಳುವುದಿಲ್ಲ. ರಾಜ್ಯದಲ್ಲಿ ಒಂದೇ ಪ್ರಮುಖ ನಗರವಿದ್ದಾಗ ಆಗುವ ದುರಂತವಿದು. ಬೆಂಗಳೂರೇತರ ನಗರ-ಪಟ್ಟಣ-ಪೇಟೆಗಳ ಮೂಲಭೂತ ಸೌಕರ್ಯಗಳ ಬಗ್ಗೆ ಬಜೆಟ್ಟು ಏನು ಹೇಳುತ್ತದೆ? ಮೈಸೂರು-ಮಂಗಳೂರು-ಹುಬ್ಬಳ್ಳಿ-ಬೆಳಗಾವಿಗಳಿಗೆ ಮೇಲ್ಸೇತುವೆಗಳು, ಸಾರಿಗೆ ಸೌಲಭ್ಯ, ಸಭಾಭವನಗಳು, ಬೇಕಿಲ್ಲವೇ? ವಲಸೆ ಹೋಗುವ ಜನರು ಬೆಂಗಳೂರನ್ನೇ ಆಯ್ದುಕೊಳ್ಳುತ್ತಿದ್ದಾರೆಯೇ ಅಥವಾ ಬೇರೆ ದಾರಿಯಿಲ್ಲದೆಯೇ ಬೆಂಗಳೂರಿಗೆ ಬರುತ್ತಿದ್ದಾರೆಯೇ? ಬೆಂಗಳೂರಿಗಾಗುತ್ತಿರುವ ಅನೈಚ್ಛಿಕ ಒಳವಲಸೆಯನ್ನೂ ನಗರದ ಅನೈಚ್ಛಿಕ ಬೆಳವಣಿಗೆಯನ್ನೂ ತಡೆಯುವುದು ಹೇಗೆ? ಈ ದೃಷ್ಟಿಯಿಂದ ರಾಜ್ಯದ ಬಜೆಟ್ಟನ್ನು ನೋಡಿದಾಗ ನಮಗೆ ಅಸಮಾಧಾನವೇ ಆದೀತು. ರಾಜ್ಯದ ಇತರ ಗ್ರಾಮೇತರ ಪ್ರದೇಶಗಳಿಗೆ ಈ ಬಜೆಟ್ಟಿನಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನ ವಿತ್ತ-ಮುಖ್ಯಮಂತ್ರಿಗಳು ಕೊಟ್ಟಿಲ್ಲ.

ದೆಹಲಿಯಲ್ಲಿದ್ದ ರಾಮಚಂದ್ರ ಗುಹಾ ಖಾಯಂ ಬೆಂಗಳೂರಿಗರಾಗಲು ಶಾನಭಾಗರ ಪ್ರೀಮಿಯರ್ ಮತ್ತು ಮೂರ್ತಿಯವರ ಸೆಲೆಕ್ಟ್ ಬುಕ್ಸೇ ಕಾರಣವೆಂದು ಒಮ್ಮೆ ಹೇಳಿದ್ದರು. ರಾಮ್ ರ ಈ ಒಳವಲಸೆ ಐಚ್ಛಿಕವಾದ, ಆಲೋಚನಾಪೂರ್ಣ ವಲಸೆಯಾಗುತ್ತದೆ. ಆದರೆ ಬೇರಾವ ದಾರಿಯೂ ಕಾಣದೇ ಕೃಷಿಯ ವೈಫಲ್ಯದಿಂದಾಗಿ – ಗ್ರಾಮದ ಆರ್ಥಿಕತೆಯಲ್ಲಿ ಜೀವನೋಪಾಯವು ದುಸ್ತರವಾಗಿ ಅನಿವಾರ್ಯವಾಗಿ ಬೆಂಗಳೂರಿಗೆ ಬರುವವರನ್ನು ತಡೆಯುವುದು ಹೇಗೆ?

ಗ್ರಾಮವೆಂದರೆ ಕೃಷಿಯೆಂಬ ತೀವ್ರ ದೃಕ್ಪಥದಿಂದಲೂ ನಮಗೆ ಲಾಭ ಆಗಬಹುದಿತ್ತು. ಕೃಷಿಗೆ ಮೀಸಲಾಗಿಟ್ಟಿರುವ ಆರ್ಥಿಕ ಸಂಪನ್ಮೂಲಗಳಿಂದಲೇ ನಮ್ಮ ಕೃಷಿ ಆರ್ಥಿಕವಾಗಿ ಲಾಭದಾಯಕವಾಗಬೇಕಿತ್ತು. ಕೃಷಿಯಿಂದಾಗಿ ಗ್ರಾಮದಿಂದ ಹೊರವಲಸೆಯಾಗದ ಪರಿಸ್ಥಿತಿ ಇರಬೇಕಿತ್ತು. ಆದರೆ ಕೃಷಿಗೂ ಗ್ರಾಮೀಣಾಭಿವೃದ್ಧಿಗೂ ಮೀಸಲಿಟ್ಟಿರುವ ಸಂಪನ್ಮೂಲಗಳು ಕೃಷಿಯನ್ನು ಲಾಭದಾಯಕವಾದ ಕಾಯಕವನ್ನಾಗಿಸುವುದರಲ್ಲಿ ವಿಫಲಗೊಂಡಿವೆ. ಈ ದುಡ್ಡು ಬಡ್ಡೀರಹಿತ ಸಾಲದತ್ತ ಹರಿದಿದೆ. ಅದೇ ದುಡ್ಡು ಉತ್ಪಾದಕತೆಯನ್ನು ಬೆಳೆಸುವತ್ತ – ಕೃಷಿ ವಿಸ್ತರಣಾ ಸೇವೆಗಳನ್ನು ಒದಗಿಸುವತ್ತ ಕೇಂದ್ರೀಕರಿಸಬಹುದಿತ್ತು. ಉತ್ಪಾದಕತೆ ಬೆಳೆಯದಿದ್ದರೆ, ಪೈರು ನಾಶವಾದರೆ ಈ ಬಡ್ಡೀರಹಿತ ಸಾಲದಿಂದ ರೈತರು ಏನು ಮಾಡಲಿಕ್ಕೆ ಸಾಧ್ಯ? ದೇಶದಾದ್ಯಂತ ರೈತರ ಆತ್ಮಹತ್ಯೆಯ ಸುದ್ದಿ ಬರುತ್ತಿರುವುದಕ್ಕೆ, ಬಜೆಟ್ಟಿನಲ್ಲಿ ಕೃಷಿಗೆ ಇಟ್ಟಿರುವ ಆರ್ಥಿಕ ಸಂಪನ್ಮೂಲಗಳು ಸಾಲದಿರುವುದು ಕಾರಣವೇ ಅಲ್ಲ. ಆದರೆ ಆ ಹಣ ಯಾವ ದಿಕ್ಕಿನಲ್ಲಿ ಹರಿಯುತ್ತಿದೆ ಎನ್ನುವುದನ್ನು ನಾವು ನೋಡಬೇಕು.

ದೊಡ್ಡ ನಗರಗಳಾಚೆಗಿನ ಕೃಷಿಯೇತರ ಉದ್ಯಮದ ಬಗ್ಗೆ ಈ ಬಜೆಟ್ಟು ಚಕಾರವನ್ನೂ ಉಸುರುವುದಿಲ್ಲ. ಕ್ಲಸ್ಟರ್ ಅಭಿವೃದ್ಧಿ ಯೋಜನೆಗಳೆಲ್ಲಿ? ಅತೀ ಸಣ್ಣ, ಸಣ್ಣ, ಮಧ್ಯಮ ಉದ್ಯಮಗಳೆಲ್ಲಿ? ಬಜೆಟ್ಟು ಈ ಎಲ್ಲವನ್ನೂ – ಅಂದರೆ ಬೆಂಗಳೂರಾಚೆಯ ಗ್ರಾಮೇತರ-ಕೃಷಿಯೇತರ ಆರ್ಥಿಕ ಚಟುವಟಿಕೆಗಳನ್ನು ದಿವ್ಯ ನಿರ್ಲಕ್ಷ್ಯದಿಂದ ನೋಡುತ್ತದೆ. ಗ್ರಾಮಕ್ಕೂ-ನಗರಕ್ಕೂ, ಕೃಷಿಗೂ-ಉದ್ಯಮಕ್ಕೂ ಕಟ್ಟಿರುವ ಅಭೇದ್ಯ ಗೋಡೆ ಸರಹದ್ದುಗಳನ್ನು ಮೀರಿದ ಹೊರತು, ರಾಜ್ಯದ ಒಟ್ಟಾರೆ ಪ್ರಗತಿಯಾಗುವುದಿಲ್ಲ. ರಾಜ್ಯದ ಇತರೆಡೆ ಪ್ರಗತಿಯಾಗದಿದ್ದರೆ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆಯಾಗುವುದೂ ಇಲ್ಲ. ಹೀಗಾಗಿ ರೂ.8,640 ಕೋಟಿ ಪಡೆದಿರುವ ಬೆಂಗಳೂರಿಗರು ಸಮಾಧಾನಕ್ಕಿಂತ ಹೆಚ್ಚು ಆತಂಕವನ್ನೇ ತೋರಬೇಕಾಗುತ್ತದೆ.

ಭಾನುವಾರ, 14 ಜುಲೈ 2013




No comments:

Post a Comment