
ನಗರದಲ್ಲಿ ಕಂಡುಬರುವ ಬಡತನವೂ ಹೀಗೇ. ನಮ್ಮ
ಎದುರಿಗಿದ್ದರೂ ನಮಗೆ ಕಾಣದೆಯೇ ಇರುತ್ತದೆ. ಕಾರು ಚಲಾಯಿಸುವ ಡ್ರೈವರು, ಮನೆಕೆಲಸಕ್ಕೆ ಹಾಜರಾಗುವ
ಹೆಣ್ಣುಮಕ್ಕಳು, ಮೆಟ್ರೋ ಕಟ್ಟುವ ಹಳದಿ ಹೆಲ್ಮೆಟ್ ಧರಿಸಿದ ಕಾರ್ಮಿಕರು, ತಳ್ಳುಗಾಡಿಯಲ್ಲಿ
ತರಕಾರಿ ಮಾರಾಟಮಾಡುವವರು, ದಿನನಿತ್ಯ ರಸ್ತೆ ಗುಡಿಸುವವರು, ಹಳೆಯ ಹರಕು ರದ್ದಿಯನ್ನು
ರಸ್ತೆಯಲ್ಲಿ ಹೆಕ್ಕುವವರು... ಇವರೆಲ್ಲಾ ಎಲ್ಲಿ ವಾಸವಾಗಿದ್ದಾರೆ? ಅವರ ನಿತ್ಯಕರ್ಮಗಳಿಗೆ ಉಪಾಯವೇನು? ಅವರಿಗೆ ನೀರು ಎಲ್ಲಿಂದ ಸರಬರಾಜಾಗುತ್ತದೆ? ಅವರ ಮಕ್ಕಳೇನು ಮಾಡುತ್ತಾರೆ ಎನ್ನು ಪ್ರಶ್ನೆಗಳನ್ನು ನಾವುಗಳು
ಕೇಳಿಕೊಂಡಾಗ ನಮಗೆ ಇದ್ದಕ್ಕಿದ್ದ ಹಾಗೆ ಈ ಜನ ಮಧ್ಯಮ-ಮೇಲ್ಮಧ್ಯಮವರ್ಗದವರ ಸೇವಾ ಪರಿಕರಗಳಾಗದೇ,
ವ್ಯಕ್ತಿಗಳಾಗಿ ಕಾಣಿಸುತ್ತಾರೆ. ಅವರ ಜೀವನವೂ ನಮಗೆ ಕಾಣಿಸುತ್ತಾ ಹೋಗುತ್ತದೆ. ಆ ಜೀವನದಲ್ಲಿನ
ಏರುಪೇರು, ಸುಖ-ದುಃಖ, ಕಷ್ಟ-ಸಂಭ್ರಮಗಳೂ ಕಾಣಸಿಗುತ್ತವೆ.


ನಗರಗಳಲ್ಲಿ ಸಹಜವಾಗಿ, ಜೀವನೋಪಾಯದ ಅವಶ್ಯಕತೆಗಳಿಗನುಸಾರ, ಅವಕಾಶವಿದ್ದಲ್ಲಿ ಕೊಳೆಗೇರಿಗಳು –
ಅಥವಾ ಕಡಿಮೆ ಆದಾಯದ ಸಮೂಹಗಳು ಕಾಣಿಸಿಕೊಳ್ಳುತ್ತವೆ. ಕ್ರಮಕ್ರಮೇಣ ಹತ್ತು ಪುಟ್ಟ ಟೆಂಟು-ತಗಡಿನ
ಷೆಡ್ಡಿನಿಂದ ಪ್ರಾರಂಭವಾದ ಈ ವಸತಿ ತನ್ನದೇ ಆಕಾರವನ್ನೂ, ಸಂಸ್ಕೃತಿಯನ್ನೂ, ವ್ಯಕ್ತಿತ್ವವನ್ನೂ
ಪಡೆದುಬಿಡುತ್ತದೆ. ಹೀಗೆ ಪಡೆದ ವ್ಯಕ್ತಿತ್ವವನ್ನು ಸ್ಥಾಯಿಗೊಳಿಸುವ ಪ್ರಕ್ರಿಯೆಯಲ್ಲಿ ಅಲ್ಲಿನ
ನಿವಾಸಿಗಳು ಪ್ರಯತ್ನಿಸುತ್ತಿರುತ್ತಾರೆ. ಆದರೆ ಸರಕಾರಗಳು ಯೋಜನೆಗಳನ್ನು ರೂಪಿಸುವ ರೀತಿಯೇ
ಭಿನ್ನವಾಗಿರುತ್ತದೆ. ಮೊದಲಿಗೆ ಯಾರ ಗಮನಕ್ಕೂ ಬರದ ಹಾಗೆ ನಿಧಾನವಾಗಿ ಇಂಥ ವಸತಿಗಳು
ಬೆಳೆಯುತ್ತವೆ. ಹೀಗೆ ಬೆಳೆದು ದೊಡ್ಡದಾಗಿ ಕೊಳೆಗೇರಿಯಾದಾಗ ಅದನ್ನು ನಿರ್ಮೂಲನ ಮಾಡುವ ಪ್ರಯಾಸ
ನಡೆಯುತ್ತದೆ. ಪುನರ್ವಸತಿಯ ಹೆಸರಿನಲ್ಲಿ ಜನರನ್ನು ಅಲ್ಲಿಂದ ಎತ್ತಂಗಡಿ ಮಾಡಿ ರಾಬರ್ಟ್ ಟೈಲರ್
ಹೋಮ್ಸ್ ನಂತಹ ಬಹುಮಹಡಿಯ ನಿರ್ಮಾಣಕ್ಕೆ ನಮ್ಮ ಸರಕಾರಗಳೂ ಬಡವರನ್ನ ವರ್ಗಾಯಿಸುವ
ಕಾರ್ಯಕ್ರಮವನ್ನು ರೂಪಿಸುತ್ತವೆ.
ರಾಬರ್ಟ್ ಟೈಲರ್ ಹೋಮ್ಸ್ ಇಂಥದೊಂದು ಪುನರ್ವಸತಿಯ ಯೋಜನೆಯ ಪ್ರತೀಕ. ಇಲ್ಲಿ ಭೂಗತ ಜಗತ್ತಿನ
ಹಲವು ಸ್ಥರದ ಜನರು ಇದ್ದರು. ಸುಧೀರ್ ಅಧ್ಯಯನ ಮುಗಿಸುವ ವೇಳೆಗೆ ಸರಕಾರ ಆ ಪುನರ್ವಸತಿ
ಯೋಜನೆಯನ್ನು ನಲಸಮಮಾಡುವ ಹೊಸ ಕಾರ್ಯಕ್ರಮ ಹಾಕುತ್ತದೆ. ಸ್ಥಾಯಿ ಎಂದು ನಂಬಿ ಬದುಕಿದ್ದ ಆ ಜನರ
ಬದುಕು ಮತ್ತೆ ಜಂಗಮಾವಸ್ಥೆಗಿಳಿಯುತ್ತದೆ.

"ಮಕ್ಕಳು ಹೈಸ್ಕೂಲು ಪಾಸಾದರೆ ಬಡತನದಿಂದ ಹೊರಬೀಳುವ ಸಾಧ್ಯತೆ 25 ಪ್ರತಿಶತ ಹೆಚ್ಚುತ್ತದೆ" ಎಂಬ ಸಂಶೋಧನಾ ಅಂಕಿಅಂಶವನ್ನು
ಶ್ರೀಮತಿ ಬೇಯ್ಲಿಗೆ ಸುಧೀರ್ ಮಾಹಿತಿಯಾಗಿ ನೀಡುತ್ತಾರೆ. ಈ ಅಂಕಿ ನಿಜವಿರಬಹುದಾದರೂ, ಸಂಜೆಯ
ಹೊಟ್ಟೆಪಾಡಿಗೆ ಗತಿಯಿಲ್ಲದವರಿಗೆ ಈ ಮಾಹಿತಿಯ ಉಪ್ಪಿನಕಾಯಿಯಿಂದ ಉಪಯೋಗವೇನು? ಇಂಥ ಮಾಹಿತಿಗಳಿಂದ ಸರಕಾರ
ಇವರುಗಳಿಗಾಗಿ ಏನಾದರೂ ಮಾಡಲು ಸಾಧ್ಯವೇ? ಹೀಗೆ ಪ್ರಶ್ನೆಗಳನ್ನು ಕೇಳುತ್ತಾ ಹೋದಾಗ ನಮಗೆ ನಾವು ನೋಡಿಯೂ ಕಾಣದ ಅನಾಮಿಕ ಮುಖಗಳ
ಕಥೆಗಳು ತೆರೆದುಕೊಳ್ಳುತ್ತಾ ಹೋಗುತ್ತವೆ.
ಇದೂ ಒಂದು ಕಥೆ: ಬೆಂಗಳೂರಿನ ಮುಖ್ಯ ಬಡಾವಣೆಯ ಅಂಚಿನಲ್ಲಿ ಬೆಳೆದ ಕೊಳೆಗೇರಿಯಲ್ಲಿ ಟೋನಿ ಇದ್ದಾನೆ. ಅನೇಕ
ವರ್ಷಗಳಿಂದ ಅಲ್ಲೇ ನೆಲೆಸಿದ್ದರೂ, ಆ ಜಾಗದಲ್ಲಿರುವುದಕ್ಕೆ ಪುರಾವೆಯಾಗಿ ಯಾವ ದಾಖಲೆಗಳೂ ಇಲ್ಲ.
ಆ ಜಾಗ ಬಿಟ್ಟುಹೋದರೆ ಮತ್ತೆ ಅಲ್ಲಿಗೆ ಬಂದು ನೆಲೆಸಬಹುದೆಂಬ ಖಾತ್ರಿಯೂ ಇಲ್ಲ. ಸರಕಾರ ಎಂದು
ಬೇಕಾದರೂ ಅವರುಗಳನ್ನು ಎತ್ತಂಗಡಿ ಮಾಡಬಹುದೆಂಬ ಭೀತಿಯೂ ಇದೆ.... ರೈಲಿನ ಕಾಯ್ದಿರಿಸಿದ
ಡಬ್ಬಿಯಲ್ಲಿ ಆರಕ್ಷಣೆಯಿಲ್ಲದೆಯೇ ಪ್ರಯಾಣ ನಡೆಸಬೇಕಾದ ಒಂದು ಪರಿಸ್ಥಿತಿಯನ್ನು ಊಹಿಸಿಕೊಳ್ಳಿ. ಒಂದೇ
ಖಾಲಿ ಸೀಟಲ್ಲಿ ಹೇಗೋ ಕೂತಿದ್ದೀರಿ. ಟಾಯ್ಲೆಟ್ಟಿಗೆ ಹೋಗಲೆಂದು ಜಾಗ ಬಿಟ್ಟರೆ ಅದು ಖಾಲಿಯಾಗೇ
ನಿಮಗೆ ಕಾಯುತ್ತಿರಬಹುದು ಎನ್ನುವ ಖಾತ್ರಿಯಿಲ್ಲ. ಅಲ್ಲೇ ಕೂತಿದ್ದರೆ ಆರಕ್ಷಣೆ ಮಾಡಿದಾತ ಬಂದು
ನಿಮ್ಮನ್ನು ಎಬ್ಬಿಸಬಹುದು. ಇಲ್ಲ ಟಿಟಿಇ ಕೂಡ ಕಾನೂನಿನ ಪುಸ್ತಕ ಓದಿ ನಿಮ್ಮನ್ನು ಎಬ್ಬಿಸಬಹುದು.
ಈ ಪರಿಸ್ಥಿತಿಯಲ್ಲಿ ರೈಲು ಹೊರಡಲು ಸಿದ್ಧವಾಗಿದೆ. ಜೀವನವೀಡೀ ಇಂಥದೊಂದು ತ್ರಿಶಂಕು
ಸ್ಥಿತಿಯಲ್ಲಿ ಕಳೆಯುತ್ತಿರುವ ಟೋನಿಗೆ ನೀವು ಸುಧೀರ್ ಹೇಳಿದ ಮಾಹಿತಿಯನ್ನು ನೀಡಿ ನಿನ್ನ
ಮಕ್ಕಳನ್ನು ಶಾಲೆಗೆ ಕಳಿಸು – ಓದಿಸು, ನಿನ್ನ ಆದಾಯ ಬೆಳೆಯಿಸುವ ಬೇರೊಂದು ಕೆಲಸವನ್ನು – ಸ್ವಂತ
ವ್ಯಾಪಾರವನ್ನು ಮಾಡು ಎಂದು ಹಿತನುಡಿದರೆ ಅವನ ಪ್ರತಿಕ್ರಿಯೆಯೇನಿರಬಹುದು?
ತ್ರಿಶಂಕು ಸ್ಥಿತಿಯಲ್ಲಿ ಜೀವಿಸುವ ನಗರದ ಬಡವರಿಗೆ ಸಂಜೆಯ ಗಂಜಿ ಹೊಂದಿಸುವುದೇ ಮುಖ್ಯವಾದಾಗ
– ಉಜ್ವಲ ಭವಿಷ್ಯಕ್ಕಾಗಿ ಹಣವನ್ನು ಉಳಿತಾಯ ಮಾಡು, ಶಾಂತಿನಗರದಲ್ಲಿರುವ ನಿನಗೆ ಪೀಣ್ಯದಾಚೆ
ಅದ್ಭುತ ಮನೆಯನ್ನು ನಿರ್ಮಾಣ ಮಾಡಿಕೊಡುವೆ, ಮಕ್ಕಳನ್ನು ಇಸ್ಕೂಲಿಗೆ ಕಳಿಸು ಎಂದೆಲ್ಲಾ
ಯೋಜನೆಗಳನ್ನು ತೋರಿಸಿದರೆ, ಅದು ನಿಜವಾದರೂ ನಂಬುವ ಮಾರ್ಗವಿದೆಯೇ?

ನಗರದಲ್ಲಿರುವ ಬಡತನದ ಸಮಸ್ಯೆ ಜಟಿಲವಾದದ್ದು. ಬಡವರ ಸಮಸ್ಯೆ ಬಡತನದ ಸಮಸ್ಯೆಗಿಂದ
ಭಿನ್ನವಾದದ್ದು. ಬಡತನ ನಿರ್ಮೂಲನಕ್ಕೆ ಯೋಜನೆಗಳನ್ನು ಹಾಕುವುದ ಸಾಮಾನ್ಯ. ಆದರೆ ಬಡವರ
ಸಮಸ್ಯೆಯನ್ನು ಪರಿಹರಿಸಲು ಯೋಜನೆಗಳು? ಬೂ ಮತ್ತು ಸುಧೀರ್ ಪುಸ್ತಕಗಳನ್ನು ಓದಿದಾಗ ನಮಗೆ ಇದು ದೂರದ ಬೆಟ್ಟದಂತೆ ಕಾಣಿಸುತ್ತದೆ.
ಸರಳವಾದ ಉಪಾಯಗಳೂ, ಪರಿಹಾರಗಳೂ ಇಲ್ಲ.
ಬಡತನಕ್ಕೆ ಕೊಳೆಗೇರಿಯ ಪ್ರತೀಕವನ್ನು ಕೊಡುವುದಕ್ಕೆ ಬದಲು ನಾವೊಂದು ಮುಖವನ್ನು,
ವ್ಯಕ್ತಿಯನ್ನು, ಕುಟುಂಬವನ್ನು ಪ್ರತೀಕವಾಗಿ ಇಟ್ಟುಕೊಂಡರೆ ಭಿನ್ನವಾಗಿ ಯೋಚಿಸುವ ಕಲೆಯನ್ನು
ಬೆಳೆಯಿಸಿಕೊಳ್ಳಬಹುದು. ಆಗ ನಾವು ಕೊಳೆಗೇರಿಯ ಮನೆಯಿಂದ ಪುನರ್ವಸತಿ ಮಾಡಿಸುವುದು ಹೇಗೆ, ಹೊಸ
ಕಟ್ಟಡಗಳನ್ನ ನಿರ್ಮಿಸುವುದೂ, ಅದನ್ನು ನಿರ್ನಾಮ ಮಾಡುವುದೂ ಹೇಗೆಂದು ಯೋಚಿಸುವುದಕ್ಕೆ ಬದಲು
ನಮ್ಮ ಟೋನಿ ಇಂದಿನ ಸಂಜೆಯ ಗಂಜಿಯ ಚಿಂತೆಯಿಲ್ಲದೆಯೇ ನಾಳಿನಬಗ್ಗೆ ಯೋಚಿಸುವ, ನಾಳಿನ
ಚಿಂತೆಯಿಲ್ಲದೆ ಮುಂದಿನ ತಿಂಗಳು, ಮುಂದಿನ ವರ್ಷ, ಮುಂದಿನ ದಶಕ, ಮುಂದಿನ ತಲೆಮಾರಿನ ಬಗ್ಗೆ
ಯೋಚಿಸುವ ಆಂತರಿಕ ಶಕ್ತಿಯನ್ನು ತರಿಸುವುದು ಹೇಗೆಂದು ಚಿಂತೆಮಾಡುತ್ತೇವೆ. ಆಗ ನಾವು ಬಡತನದ
ನಿರ್ಮೂಲನೆಗೆ ಬದಲು ಬಡವರ ಸಶಕ್ತೀಕರಣದಬಗ್ಗೆ ಮಾತಾಡುತ್ತೇವೆ.
No comments:
Post a Comment